ಭಾನುವಾರ ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಕರ್ಮಾದಿಗಳನ್ನು ಮುಗಿಸಿ, ಚಾಮುಂಡಿ ದೇವಿಯ ದರ್ಶನಕ್ಕೆ ಚಾಮುಂಡಿ ಬೆಟ್ಟಕ್ಕೆ ಹೋದೆವು. ದೇವಾಲಯವು ಆಗಲೇ ಭಕ್ತರಿಂದ ತುಂಬಿತ್ತು. ಸಾಲಿನಲ್ಲಿ ನಿಂತು ದೇವಿಯ ದರ್ಶನ ಭಾಗ್ಯ ಪಡೆದೆವು. ಅಲಂಕೃತ ಮಂದಸ್ಮಿತ ಚಾಮುಂಡಿ ದೇವಿಯ ದರ್ಶನ ನಿಜಕ್ಕೂ ಮನಸ್ಸಿಗೆ ಪುಳಕ... ಧನ್ಯತೆಯ ಭಾವ...!!
ಕೃಷ್ಣಶಿಲೆಯ ಬೃಹದಾಕಾರದ ನಂದಿಯು ಒಂದೇ ಕಲ್ಲಿನಿಂದ ಕೆತ್ತಲ್ಪಟ್ಟಿದ್ದು. ವಾಡಿಕೆಯಂತೆ ಶಿವನ ದೇವಸ್ಥಾನದ ಮುಂದೆ ನಂದಿಯನ್ನ ಪ್ರತಿಸ್ಥಾಪಿಸಲಾಗಿರುತ್ತದೆ. ಆದರೆ ಇಲ್ಲಿ ಶಿವನ ವಿಗ್ರಹ ಇಲ್ಲ..! ಶಿವ ಮತ್ತು ಪಾರ್ವತಿಯ ಮಧ್ಯೆ ಜಗಳ ನಡೆದು, ಶಿವನು ಮುನಿಸಿಕೊಂಡು ಯಾರ ಕಣ್ಣಿಗೂ ಕಾಣಿಸ ಕೂಡದೆಂದು ಮಲೆ-ಮಹದೇಶ್ವರ ಬೆಟ್ಟಗಳ ಮಧ್ಯೆ ವಾಸವಾಗುತ್ತಾನೆ. ಶಿವನನ್ನು ಹುಡುಕುವ ಸಲುವಾಗಿ ಪಾರ್ವತಿಯು ಚಾಮುಂಡಿ ಬೆಟ್ಟಕ್ಕೆ ಬಂದು ಹುಡುಕುತ್ತಾಳೆ, ಅದರೂ ಶಿವನು ಕಾಣಿಸುವುದಿಲ್ಲ. ನಂದಿಯು ಅರ್ಧ ಬೆಟ್ಟವನ್ನು ಹತ್ತಿ ಅಲ್ಲಿಯೇ ವಿರಮಿಸುತ್ತಾನೆ ಎಂಬ ಪುರಾಣ ಕಥೆಯು ಪ್ರಚಲಿತವಾಗಿದೆ.
ನಂದಿಯ ಸುಂದರ ವಿಗ್ರಹವು ೪.೭ ಮೀ ಎತ್ತರ ಮತ್ತು ೬.೧೦ ಮೀ ಉದ್ದ ಇದೆ. ಶಿವರಾತ್ರಿ ಮತ್ತು ಮಸ್ತಕಾಭಿಷೇಕ ದಿನಗಳಲ್ಲಿ ವಿಶೇಷ ಪೂಜೆ ಇರುತ್ತದೆ.
ನಂದಿ ವಿಗ್ರಹದ ಬಳಿ ಸಿಕ್ಕಿದ ಈ ಬಾಲವೇಷದ ಈ ಹುಡುಗ ಸುಂದರವಾಗಿ ಹಾಡುತ್ತಿದ್ದ..!
ಬೆಳಗಿನ ಉಪಹಾರಕ್ಕೆಂದು ಪ್ರಸಿದ್ಧ "ಮೈಲಾರಿ" ದೋಸೆ ಹೋಟೆಲಿಗೆ ಹೋಗಿದ್ದೆವು. ಬೆಂಗಳೂರಿನ ' MTR ' ಮತ್ತು ವಿದ್ಯಾರ್ಥಿ ಭವನದಂತೆಯೇ ಮೈಸೂರಿನಲ್ಲಿ ಮೈಲಾರಿ ಹೋಟೆಲು ಬೆಣ್ಣೆ ದೋಸೆಗೆ ಪ್ರಸಿದ್ದಿ. ಬಾಯಲ್ಲಿ ನೀರೂರಿಯುವ ಅಪ್ಪಟ ಬೆಣ್ಣೆಯ ಗರಿ ಗರಿ ದೋಸೆ..ರುಚಿಯಾದ ಕೊಬ್ಬರಿ ಚಟ್ನಿ! ಒಬ್ಬೊಬ್ಬರೂ ೪-೫ ದೋಸೆ ತಿಂದು ತೇಗಿದೆವು..!
ಕಾರಂಜಿಕೆರೆ ಸುಂದರ ಮತ್ತು ಪ್ರಶಾಂತವಾದ ತಾಣ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಇರುವ ಕಾರಂಜಿ ಕೆರೆಯು ಸುಮಾರು ೯೦ ಎಕರೆ ವಿಸ್ತೀರ್ಣದಲ್ಲಿದೆ. ದೋಣಿ ವಿಹಾರ, ಚಿಟ್ಟೆ ವನ, ಪಕ್ಷಿವನ, ಹಸಿರು ಗಿಡಮರಗಳು, ಸುಂದರ ಹುಲ್ಲುಹಾಸು ಇಲ್ಲಿನ ವಿಶೇಷ.
ಪಕ್ಷಿವನ ಭಾರತದಲ್ಲಿಯೇ ಅತಿ ಉದ್ದದ ಹಾಗೂ ದೊಡ್ಡದಾದ ಪ್ರದೇಶವಾಗಿದೆ. ವಿವಿಧ ಜಾತಿಯ ಹಕ್ಕಿಗಳು, ಚಂದದ ಚಿಟ್ಟೆಗಳು ಮನಸೂರೆಗೊಳಿಸುತ್ತವೆ. ಪ್ರಶಾಂತವಾದ ಕೆರೆಯು ದೋಣಿ ವಿಹಾರಕ್ಕೆ ಮುದ ನೀಡುತ್ತದೆ.
ನಿಸರ್ಗ ಪ್ರಿಯರಿಗೆ, ಛಾಯಾಗ್ರಾಹಕರಿಗೆ ಇದು ಹೇಳಿ ಮಾಡಿಸಿದ ಜಾಗ....ಹಾಗೇಯೇ ಪ್ರೇಮಿಗಳಿಗೂ ಕೂಡ...!! ಕಾರಂಜಿ ಕೆರೆಯು ಮೈಸೂರು ಪ್ರಾಣಿಸಂಗ್ರಹಾಲಯ ಪ್ರಾಧಿಕಾರದ ಉಸ್ತುವಾರಿಯಲ್ಲಿದೆ. ಇಲ್ಲಿನ ಸ್ವಚ್ಛತೆ ನಿಜಕ್ಕೂ ಪ್ರಶಂಸಾರ್ಹ...!!
ಮೈಸೂರು ವಿಶ್ವವಿದ್ಯಾಲಯದ ಹತ್ತಿರ ಇರುವ "ಮನೆ" ಎಂಬ ಹೋಟೆಲಿನಲ್ಲಿ ಸೊಗಸಾದ ಜೋಳದ ರೊಟ್ಟಿ ಊಟ ಮುಗಿಸಿ " ಬಲಮುರಿ" ಗೆ ಹೋದೆವು. ಈ ತಾಣ ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತ. ಕಾವೇರಿ ನದಿ ತೀರದ, ಹೆಚ್ಚು ಅಪಾಯವೂ ಇಲ್ಲದ ಯಾವಾಗಲೂ ಪ್ರವಾಸಿಗರಿಂದ ತುಂಬಿರುವ ಜಾಗ. ಇಲ್ಲಿ ವರ್ಷಪೂರ್ತಿ ನೀರಿರುವುದರಿಂದ ಪ್ರವಾಸಿಗರು ಜಾಸ್ತಿ. ನದಿಯು ತುಂಬಿದಾಗ ಸಣ್ಣ ಅಣೆಕಟ್ಟೆಯ ಮೇಲಿಂದ ನೀರು ಹರಿದು ಸುಂದರ ಜಲಪಾತವನ್ನು ಕೂಡ ಸೃಷ್ಟಿಸುತ್ತದೆ.
ಗಣೇಶನ ಸನ್ನಿಧಿಯಲ್ಲಿ ನಮಸ್ಕರಿಸಿ, ಯಾವುದೇ ಅಪಾರ ಬರದಿರಲೆಂದು ಪ್ರಾರ್ಥಿಸಿ, ತೃಪ್ತಿಯಾಗುವಷ್ಟು ಸಮಯ ನೀರಿನಲ್ಲಿ ಈಜಾಡಿದೆವು!!!
ಅಲ್ಲಿಂದ, ನಂಜನಗೂಡಿನ ಪ್ರಸಿದ್ಧ ಈಶ್ವರ ದೇವಾಲಯದ ದರ್ಶನಕ್ಕೆಂದು ಹೊರಟೆವು. ವಾಹನ ದಟ್ಟಣೆಯಿಂದಾಗಿ ನಂಜನಗೂಡು ತಲುಪುವದರೊಳಗೆ ಕತ್ತಲಾಗಿತ್ತು. ಗೋಪುರ, ಸುಂದರ ಕಲ್ಲಿನ ಕೆತ್ತನೆಗಳು, ಅದ್ಭುತ ಕುಸುರಿಯ ವಿಗ್ರಹಗಳು ಇಲ್ಲಿ ನೋಡಲೇ ಬೇಕಾದುದು.
ಕತ್ತಲಾದ್ದರಿಂದ ಅಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲಾಗಲಿಲ್ಲ, ಕಾಮರದಲ್ಲೂ ಸೆರೆಹಿಡಿಯಲಾಗಲಿಲ್ಲ. ಮತ್ತೊಮ್ಮೆ ಇಲ್ಲಿಗೆ ಬರಲೇ ಬೇಕು..!!
ನಗರದ ಮಧ್ಯಭಾಗದಲ್ಲಿರುವ "ಫುಡ್ ಕೋರ್ಟ್" ನಲ್ಲಿ ರಾತ್ರಿಯ ಊಟ ಮುಗಿಸಿ, ಸುಂದರ ದಿನವೊಂದನ್ನು ಕಳೆದಿದ್ದಕ್ಕೆ ಮೈಸೂರಿಗೊಂದು ವಿದಾಯ ಹೇಳಿ, ಬೆಂಗಳೂರಿನ ಹೈವೆನಲ್ಲಿ ಕಾರು ಚಲಾಯಿಸಿದೆ..! ಮತ್ತೆ ಅದೇ ಹರಿಹರನ್ ಗಝಲ್...!!

