Wednesday, August 19, 2009

ಹೈದರಾಬಾದ್

ತಂತ್ರಜ್ಞಾನ ನಗರಿ ಹೈದರಾಬಾದಿಗೆ ಹೋಗುವ ಅವಕಾಶ ಕಳೆದ ವಾರ ಒದಗಿ ಬಂದಿತ್ತು. ಗೆಳೆಯರ ವಾರದಲ್ಲಿ (Friendship week) ನನ್ನ ಆಪ್ತ ಮಿತ್ರರನ್ನು ಭೇಟಿಯಾಗುವುದು ಮುಖ್ಯ ಉದ್ದೇಶ. ಹಾಗೆಯೇ ಹೈದರಾಬಾದು ಊರು ಸುತ್ತುವ ಸಣ್ಣ ಬಯಕೆ ಕೂಡ. ಶುಕ್ರವಾರ ದಿನಾಂಕ ೭ ರಂದು ರಾತ್ರಿ ಬೆಂಗಳೂರು-ಕಾಚಿಗುಡ ಎಕ್ಸಪ್ರೆಸ್ ರೈಲಿನಲ್ಲಿ ಯಶವಂತಪುರದಿಂದ ಹೊರಟಾಗ ರಾತ್ರಿ ೯.೩೦. ಸುಮಾರು ೫ ವರ್ಷಗಳ ನಂತರ ಗೆಳತಿಯ ಭೇಟಿಯಾಗುವ ವಿಚಾರ ಮನಸ್ಸಿಗೆ ಹರುಷ, ತಳಮಳ. ಕಾಲೇಜು ದಿನಗಳನ್ನು ಮೆಲಕು ಹಾಕುತ್ತ ಎಷ್ಟೋ ಹೊತ್ತಿನ ನಂತರ ನಿದ್ದೆಗೆ ಜಾರಿದ್ದೆ.

ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ವಿಳಂಬವಾಗಿ ಹೈದರಾಬಾದು ತಲುಪಿದೆ. ಗೆಳತಿಯ ಮನೆಯಲ್ಲಿ ಲಘು ಉಪಹಾರ, ಸಾಕಷ್ಟು ಮಾತು ಕತೆಯ ನಂತರ ಹೈದರಾಬಾದು ಸುತ್ತಲು ಹೊರಟೆವು. ಹೆಚ್ಚೇನು ವಿಶೇಷತೆ ಇಲ್ಲದ ನಗರದ ಅರ್ಧ ಭಾಗ ಸಾಫ್ಟವೇರ್ ಕಂಪೆನಿಗಳಿಂದ ತುಂಬಿದೆ. "ಬಿರಿಯಾನಿ-ಹೌಸ್" ರುಚಿಕಟ್ಟಾದ ಹೈದರಾಬಾದ್ ಬಿರಿಯಾನಿಗೆ ಫೇಮಸ್, ಪುಲ್ಲರೆಡ್ಡಿ ಅಂಗಡಿ ಬಾಯಲ್ಲಿ ನೀರೂರಿಸುವ ಸಿಹಿ ಖಾದ್ಯಗಳಿಗೆ ಪ್ರಸಿದ್ಧ. ಇದು ಬಿಟ್ಟರೆ ವರಟು ಜನ, ರಸ್ತೆ ಸಂಚಾರದ ನಿಯಮಗಳು ತಿಳಿದಿದ್ದರೂ ಅನುಸರಿಸುವ ವ್ಯವಧಾನ ಯಾರಿಗೂ ಇದ್ದ ಹಾಗೆ ಕಾಣುವುದಿಲ್ಲ. ಎಲ್ಲೆಂದರಲ್ಲಿ ಕಾಣಿಸುವುದು ಚಿತ್ರಮಂದಿರಗಳು. ಎಲ್ಲವೂ ಭರ್ತಿ..!


ನಗರದ ಮಧ್ಯ ಭಾಗದಲ್ಲಿರುವ ಮಹಾವಿಷ್ಟುವಿನ "ಬಿರ್ಲಾ ಮಂದಿರ" ಸುಂದರವಾದ ದೇವಾಲಯ. ಸಂಪೂರ್ಣ ಮಾರ್ಬಲ್ ನಿಂದ ಕಟ್ಟಿದ ದೇವಾಲಯದಲ್ಲಿ ಕ್ಯಾಮೆರಾ ಮತ್ತು ಮೊಬೈಲ್ ಫೋನುಗಳು ನಿಷಿದ್ಧ.


ಜನರಲ್ ಬಜಾರು ಹೆಣ್ಣು ಮಕ್ಕಳಿಗೆ ಪ್ರಿಯವಾದ ಜಾಗ. ಇಲ್ಲಿ ಅತಿ ಕಡಿಮೆ ಬೆಲೆಗೆ ಗುಣಮಟ್ಟದ ಡ್ರೆಸ್ ಮೆಟೀರಿಯಲ್ ಸಿಗುತ್ತದೆ.


ಚಾರ್-ಮಿನಾರ್ ಒಂದು ಅದ್ಭುತ ಶಿಲ್ಪಕಲೆ. ಇಸ್ಲಾಂ ಶೈಲಿಯ ಸುಂದರ ಕೆತ್ತನೆಗಳು, ೪ ಜನ ಪ್ರವಾದಿಗಳ ನೆನಪಿಗೋಸ್ಕರ ಕಟ್ಟಿದ ೪ ಕಂಬಗಳು ವಿಶಿಷ್ಟತೆಯನ್ನು ಸಾರುತ್ತವೆ.


ಮೊಹಮ್ಮದ್ ಕುತುಬ್ ಷಾ ಎಂಬುವನು ೧೫೯೧ ನೇ ಇಸವಿಯಲ್ಲಿ ಕಟ್ಟಿದ ಚಾರ್-ಮಿನಾರ್ ನ ಒಂದೊಂದು ಕಂಬಗಳು ಸುಮಾರು ೪೮.೭ ಮೀ ಎತ್ತರ ಇದೆ.


ಚಾರ್-ಮಿನಾರಿನ ಸುತ್ತಲು ಇರುವ ಬೀದಿಗಳು ಹೈದರಾಬಾದ್ ಮುತ್ತಿಗೆ ಪ್ರಸಿದ್ಧ. ಅತಿ ಸುಂದರ ಮುತ್ತಿನ ಹಾರ, ಕಿವಿಯೋಲೆ ತುಂಬಾ ಕಡಿಮೆ ಬೆಲೆಗೆ ಸಿಗುತ್ತದೆ. ೧೫೦೦ ರೂಪಾಯಿ ಹಾರ ಚೌಕಾಸಿ ನಂತರ ೩೦೦ ಕ್ಕೆ ದೊರಕಿತು.

ಹೈದರಾಬಾದಿನ ಪ್ರಮುಖ ಆಕರ್ಷಣೆ "ರಾಮೋಜಿ ಫಿಲಂ ಸಿಟಿ". ನಗರದಿಂದ ೩೦ ಕಿ. ಮೀ ದೂರ ವಿಶಾಲವಾದ ೨೦೦೦ ಎಕರೆ ಪ್ರದೇಶದಲ್ಲಿ ಇರುವ ರಾಮೋಜಿ ಫಿಲಂ ಸಿಟಿಯು ಊಹೆಗೂ ನಿಲುಕದ ವಿಶಿಷ್ಟತೆಗಳ ಪ್ರಪಂಚ. ರಾಮೋಜಿ ರಾವ್ ಎಂಬ ದೂರದೃಷ್ಟಿಯ, ಪಕ್ಕಾ ವ್ಯವಹಾರಸ್ಥನ ಬುದ್ಧಿಯಿಂದ ಅರಳಿದ ಕಲಾಗಾರ. ಚಿತ್ರರಂಗಕ್ಕೆ ಏನೇನು ಬೇಕೋ ಅದೆಲ್ಲ ಇಲ್ಲಿ ಲಭ್ಯ. ಅರಮನೆಯಿಂದ ಹಿಡಿದು ಗುಡಿಸಲು ತನಕ , ವಿಮಾನ, ರೈಲ್ವೆ ನಿಲ್ದಾಣ, ಮೈಸೂರು ಬೃಂದಾವನ, ಜೈಲು, ವಿವಿಧ ತಂತ್ರಜ್ಞಾನ ಪಂಚತಾರಾ ಹೋಟೆಲು, ವಸತಿ ಗೃಹ, ಮಕ್ಕಳ ಆಟದ ಮೈದಾನ ಎಲ್ಲವೂ ಒಂದೇ ಸ್ಥಳದಲ್ಲಿ ಲಭ್ಯ.
ಮುಖದ್ವಾರ
ಕೃತಕ ಅರಮನೆಕಾರಂಜಿ ಮಧ್ಯೆ ನೃತ್ಯ ಮಾಡುವ ಹುಡುಗಿ


ಸಂಚಾರಕ್ಕೆ, ಫಿಲಂ ಸಿಟಿಯ ದರ್ಶನಕ್ಕೆ ವಿಶೇಷವಾಗಿ ನಿರ್ಮಿಸಿದ ಬಸ್ಸು.

ಸುಂದರ ಶ್ರೀಮಂತಿಕೆಯ ನಗರದ ಬೀದಿ.
ಇಲ್ಲಿರುವ ಎಲ್ಲ ಮನೆಗಳೂ ಕೃತಕ, ಪ್ಯಾರಿಸ್ ಆಫ್ ಪ್ಲಾಸ್ಟರ್ ನಿಂದ ನಿರ್ಮಿಸಿದ ಮನೆಗಳು.
ಈ-ಟಿವಿ ಕಾರ್ಯವಾಹಿನಿಯ ಕೇಂದ್ರ ಕಚೇರಿ, ಇದು ನಿಜವಾದದ್ದು..!!ರಾಮೋಜಿ ರಾವ್ ಬಳಸುತಿದ್ದ ಕಾರು

ಗಾರ್ದನ್ನು, ಇಲ್ಲಿನ ಹುಲ್ಲು, ಗಿಡಗಳು ಕೃತಕವಲ್ಲ.. :-)

ದರ್ಪಣ ಸುಂದರಿಫಿಲಂ ಸಿಟಿಯನ್ನು ಪೂರ್ತಿ ನೋಡಲು ೨ ದಿನ ಬೇಕು. ಇಲ್ಲಿನ ಪ್ರಮುಖವಾದವುಗಳನ್ನು ನೋಡಿ, ವಾಪಾಸು ನಗರಕ್ಕೆ ಬಂದೆವು.

ಹುಸ್ಸೇನ್ ಸಾಗರ ಕೆರೆ. ಕೃತಕವಾಗಿ ನಿರ್ಮಿಸಿದ ಈ ಕೆರೆಯ ಮಧ್ಯದಲ್ಲಿ ಬುದ್ಧನ ವಿಗ್ರಹ ಇದೆ. ಇಲ್ಲಿ ಬೋಟಿಂಗ್ ವ್ಯವಸ್ಥೆಯೂ ಇದೆ. ಕೆರೆಯ ಸುತ್ತಲೂ ಇರುವ ಸುಂದರವಾದ ಉದ್ಯಾನವನವನ ಸಂಜೆಯ ವೇಳೆ ಕಳೆಯಲು ಸೂಕ್ತವಾದ ಜಾಗ.

ಅನೇಕ ವರ್ಷದ ನಂತರ ಮತ್ತೆ ಸಿಕ್ಕಿದ ನಾವು ಮನಸ್ಸು ತೃಪ್ತಿಯಾಗುವಷ್ಟು ಹರಟೆ ಹೊಡೆದೆವು. ಹಳೆಯ ನೆನಪುಗಳನ್ನು ಒಂದೊಂದಾಗಿ ಕೆದಕುತ್ತ, ಸುಂದರ ಸಂಜೆಯನ್ನು ಕಳೆದೆವು.

Wednesday, July 29, 2009

ಗೋಕಾಕ ಮತ್ತು ಅಂಬೋಲಿ ಜಲಪಾತ

ಈ ವರ್ಷದ ಮಳೆಗಾಲದಲ್ಲಿ ಗೋಕಾಕ ಜಲಪಾತ ತುಂಬಿ ಹರಿಯುತ್ತಿರುವುದನ್ನು ಕೇಳಿದ್ದೆ. ಒಮ್ಮೆ ನೋಡಿಬರುವ ಎಂದು ಗೆಳೆಯರಲ್ಲಿ ಹೇಳಿದ್ದೆ. ಅದಕ್ಕೆ ಕಳೆದ ವಾರ ಮುಹೂರ್ತ ಬಂದಿತ್ತು (೧೮ ಮತ್ತು ೧೯ ಜುಲೈ ). ಎರಡು ದಿನದ ಪ್ರವಾಸವನ್ನು ನಿಗದಿಗೊಳಿಸಿ ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ಪಟ್ಟಿಮಾಡಿಕೊಂಡೆ. ಶುಕ್ರವಾರ ಆಫೀಸ್ ಕೆಲಸ ಮುಗಿಸಿ, ಅಂತೂ ಇಂತೂ ಬಸ್ಸು ಹೊರಡುವುದಕ್ಕೆ ೧ ನಿಮಿಷ ಮುಂಚೆ ನವರಂಗ್ ತಲುಪಿಕೊಂಡೆವು.
ಅಲ್ಲಿಂದ ನಮ್ಮ ಪ್ರಯಾಣ ಬಸ್ಸಿನಲ್ಲಿ ನಿಗದಿಯಾಗಿತ್ತು. ದೀರ್ಘ ಪ್ರಯಾಣದ ನಂತರ ಮರುದಿನ ಬೆಳಿಗ್ಗೆ ೧೦.೩೦ ಕ್ಕೆ ಗೋಕಾಕ ತಲುಪಿದೆವು. ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ "ಪ್ರಶಾಂತ್" ಲಾಡ್ಜ್ ನಲ್ಲಿ ಒಂದು ರೂಮು ಬುಕ್ ಮಾಡಿ, ಸ್ನಾನ ಕ್ರಿಯೆಯನ್ನು ಮುಗಿಸಿದೆವು. ಲಾಡ್ಜ್ ಮಾಲೀಕರ ನೆರವಿನಿಂದ ಬಾಡಿಗೆಗೆ ಕಾರನ್ನು ಗೊತ್ತುಮಾಡಿದೆವು. ಅಲ್ಲಿನ ನಾಮಫಲಕಗಳು ಸ್ವಲ್ಪ ವಿಚಿತ್ರ ಅನ್ನಿಸುತಿತ್ತು. ಯಥಾವತ್ ಬಯಲುಸೀಮೆ ಭಾಷೆಯಲ್ಲಿ ಉಚ್ಚರಿಸಿದ ಹಾಗೆ ಫಲಕಗಳನ್ನು ಬರೆದಿದ್ದಾರೆ. ಉದಾ - " ಸ್ಯೆಯದ ಸಾಯಿಕಲ ಶಾಪ.....! ಛಾಯ ಹೋಟೆಲ..ದಮ್ಮರಗಿ ಟೆಕ್ಸ್ಟ್ ಟಾಯಿಲ್ಸ..! ಬಜಾಜ ಅಲಿಯೇನ್ಸ ಫೈನಾನ್ಸಿಯಲ...! ಇವುಗಳನ್ನ ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯವೇ ಬೇಕಾಯಿತು.

ಮಹಾಲಿಂಗೇಶ್ವರ ದೇವಸ್ಥಾನ : ಗೋಕಾಕ ಜಲಪಾತದ ಬದಿಯಲ್ಲಿಯೇ ಇರುವ ಪುರಾತನ ಮಹಾಲಿಂಗೇಶ್ವರ ದೇವಸ್ಥಾನವು ಚಾಲುಕ್ಯ ಶೈಲಿಯಲ್ಲಿದ್ದು ೧೦ ನೇ ಶತಮಾನದ್ದೆಂದು ಅಂದಾಜಿಸಲಾಗಿದೆ. ಈ ದೇವಸ್ಥಾನವು ಗರ್ಭಗೃಹ, ಅರ್ಧಮಂಟಪ ಮತ್ತು ವಿಶಾಲ ಮುಖಮಂಟಪ ಹೊಂದಿದೆ. ಸ್ಥಳೀಯರು ಈ ದೇವಸ್ಥಾನವನ್ನು ತಾರಕೇಶ್ವರ ದೇವಸ್ಥಾನ ಅಂತಲೂ ಕರೆಯುತ್ತಾರೆ. ದೇವಸ್ಥಾನದ ಮುಂಭಾಗದಲ್ಲೇ ಜಲಪಾತ ಇರುವುದು.


ಗೋಕಾಕ್ ಜಲಪಾತ ಪಟ್ಟಣದಿಂದ ೭ ಕಿ.ಮೀ ದೂರದಲ್ಲಿದೆ. ನೀರಿನ ಭೋರ್ಗರೆತ ದೂರದವರೆಗೂ ಕೇಳಿಸುತ್ತಿರುತ್ತದೆ. ಈ ಜಲಪಾತವನ್ನು " ಕರ್ನಾಟಕದ ನಯಾಗಾರ" ಎಂತಲೂ ಬ್ರಿಟಿಷರು ಕರೆದಿದ್ದರು.

ಘಟಪ್ರಭಾ ನದಿಯು ೧೮೦ ಮೀ ಎತ್ತರದಿಂದ ಭೋರ್ಗರೆಯುತ್ತಾ ಆಳಕ್ಕೆ ಧುಮುಕುವ ನೋಟವೇ ಭಯಂಕರ..ಮಳೆಗಾಲದ ಕೆಂಪು ನೀರು ಜಲಪಾತದ ರೌದ್ರವನ್ನು ಇನ್ನು ಹೆಚ್ಚಿಸಿತ್ತು.

ತೂಗು ಸೇತುವೆ ಇಲ್ಲಿನ ಪ್ರಮುಖ ಆಕರ್ಷಣೆ. ಊರ ನಾಗರಿಕರಿಗೆ ಅನುಕೂಲ ಆಗಲೆಂದು ಮರ ಮತ್ತು ಕಬ್ಬಿಣದಿಂದ ನಿರ್ಮಾಣವಾದ ಈ ಸೇತುವೆಯ ಮೇಲೆ ನಡೆದುಕೊಂಡು ಹೋಗುವುದು ಅದ್ಭುತ ಅನುಭವ. ಕಾಲ ಕೆಳಗೆ ಘಟಪ್ರಭ ನದಿಯ ರಭಸದ ಅನುಭವ.ತೂಗು ಸೇತುವೆ ಮೇಲೆ ನಡೆಯುವಾಗ ಕುಲುಕಾಟ ಶುರು ಆಗುತ್ತದೆ, ಬಹಳ ಜನ ಪ್ರವಾಸಿಗರು ಅರ್ಧಕ್ಕೇ ವಾಪಾಸು ಹೋಗುತ್ತಾರೆ..ಅಷ್ಟು ಹೆದರಿಕೆ ಆಗುತ್ತದೆ...!!


ಈ ಜಲಪಾತವನ್ನು ಎಲ್ಲ ಬದಿಯಲ್ಲೂ ನಿಂತು ಸೌಂದರ್ಯವನ್ನು ಸವಿಯಬಹುದು. ಅಗಾಧ ಪ್ರಮಾಣದ ನೀರು ಒಮ್ಮೆಲೇ ಧುಮ್ಮಿಕ್ಕುವುದು ನಿಜಕ್ಕೂ ರೋಮಾಂಚನ. ವಿಶಾಲವಾಗಿ ಹರಡಿರುವ, ಒಮ್ಮೆಲೇ ಭೋರ್ಗರೆಯುತ್ತಾ ಎದೆ ನಡುಗಿಸುವ ಗೋಕಾಕ ನಿಜಕ್ಕೂ ಗಂಡು ಮೆಟ್ಟಿದ ನಾಡಿನ ಜಲಪಾತ...!! ಜೂನ್ ನಿಂದ ಅಕ್ಟೋಬರ್ ತಿಂಗಳ ಕಾಲ ಗೋಕಾಕ ಜಲಪಾತದ ವೀಕ್ಷಣೆಗೆ ಉತ್ತಮ ಸಮಯ. ಜಲಪಾತದ ತಳದಲ್ಲಿ ಜಲ-ವಿದ್ಯುತ್ ಸ್ಥಾವರ ಇದೆ. ಹಾಗೆಯೇ ಗೋಕಾಕ ಬಟ್ಟೆ ಮಿಲ್ಲು ಕೂಡ ನೋಡಬೇಕಾದ ಕಟ್ಟಡ. ಇದನ್ನು ೧೮೮೫ ರಲ್ಲಿ ಬ್ರಿಟಿಷರು ಪ್ರಾರಂಭಿಸಿದರು.


ಗೊಡಚಿನಮಲ್ಕಿ ಜಲಪಾತ - ಗೋಕಾಕ ದಿಂದ ಸುಮಾರು 2೦ ಕಿ.ಮೀ ಮಾರ್ಕಂಡೇಯ ನದಿಯು ಈ ಸುಂದರ ಜಲಪಾತವನ್ನು ಸೃಷ್ಟಿಸಿದೆ. ಎಲ್ಲ ಜಲಪಾತದಂತೆ ಇಲ್ಲಿ ಒಮ್ಮೆಲೇ ನೀರು ಆಳಕ್ಕೆ ಬೀಳುವುದಿಲ್ಲ. ಹಂತ ಹಂತವಾಗಿ ವಿವಿಧ ಸ್ಥರಗಳಲ್ಲಿ ನದಿಯು ಹರಿದು, ಸುಂದರ ಜಲಧಾರೆಯನ್ನು ಸೃಷ್ಟಿಸಿದೆ. ಇಲ್ಲಿ ನೀರಿನ ಹತ್ತಿರದವರೆಗೂ ಹೋಗಬಹುದು.

ಊರಿನಲ್ಲಿ ವಾಹನವನ್ನು ನಿಲ್ಲಿಸಿ, ಸುಮಾರು ೨ ಕಿ.ಮೀ ನಡೆಯಬೇಕು. ಹಸಿರು ಹೊಲ ಗದ್ದೆಗಳು ನಮ್ಮನ್ನ ಸ್ವಾಗತಿಸುತ್ತವೆ.

ಮಳೆ ಬಂದಾಗ ಕಪ್ಪು ಮಣ್ಣಿನಲ್ಲಿ ನಡೆಯುವುದು ಸ್ವಲ್ಪ ಕಷ್ಟ...ಜಿಡ್ಡು ಮಣ್ಣು, ಬೇಗನೆ ಕಾಲು ಜಾರುತ್ತದೆ. ಮೊದಲು ೫೦ ಮೀ ನಂತರ ೨೫ ಮೀ ಎತ್ತರದಿಂದ ಇಳಿಜಾರಿನಂತೆ ಹರಿವ ನದಿಯು ಕೆಂಪನೆಯ ಜಲಪಾತದ ಸೊಬಗನ್ನು ಉಣಿಸುತ್ತದೆ.

ಮಂಟಪದಂತೆ ಇರುವ ಕಲ್ಲಿನ ಮೇಲೆ ಕುಳಿತು ಸುಂದರ ಜಲಪಾತವನ್ನು ವೀಕ್ಷಿಸಬಹುದು. ತನ್ನದೇ ವಿಶಿಷ್ಟ ಸೌಂದರ್ಯವನ್ನು ಹೊಂದಿರುವ ಈ ಜಲಪಾತದ ಬಳಿ ಹೆಚ್ಚಿನ ಸಮಯ ಕಳೆದೆವು..!


ಹಿಡಕಲ್ ಡ್ಯಾಮ್ : ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಹಿಡಕಲ್ ಡ್ಯಾಮ್ ಶ್ರೀಯುತ ಜೀ. ಎಸ್ ಬಾಳೆಕುಂದ್ರಿ ಅವರ ಕನಸಿನ ಕೂಸು. ಸುಮಾರು ೧೩೪೦೦ ಹೆಕ್ಟೇರು ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸಿರುವ ಈ ಜಲಾಶಯವನ್ನು ೧೯೭೭ ರಲ್ಲಿ ಅಂದಾಜು ೯.೪೭ ಕೋಟಿ ವೆಚ್ಚದಲ್ಲಿ ಕಟ್ಟಲಾಗಿದೆ. ಸಧ್ಯಕ್ಕೆ ಭದ್ರತೆಯ ಕಾರಣ ಪ್ರವಾಸಿಗರ ವೀಕ್ಷಣೆಗೆ ಅನುಮತಿ ನೀಡುತ್ತಿಲ್ಲ.

ಹಿಡಕಲ್ ನಿಂದ ಹೊರಟು, ಗೋಕಾಕ್ ತಲುಪಿದಾಗ ಸಂಜೆ ೫ ಗಂಟೆ ಆಗಿತ್ತು. ಮಧ್ಯಾನ್ನ ಊಟ ಎಲ್ಲೂ ದೊರೆಯದ ಕಾರಣ ಗೋಕಾಕ್ ನಲ್ಲಿ ತಿಂಡಿ ತಿಂದು ಬೆಳಗಾವಿಗೆ ಬಸ್ ಹಿಡಿದೆವು. ದಿನಪೂರ್ತಿ ನಮಗೆ ಮಳೆಯ ಅಡಚಣೆ ಉಂಟಾಗಲಿಲ್ಲ. ಬೆಳಗಾವಿ ತಲುಪಿದಾಗ ಮಳೆಯು ರಚ್ಚೆ ಹಿಡಿದಂತೆ ಸುರಿಯುತ್ತಿತ್ತು. ಸಂತೋಷ್ ಬಾವ ಮೊದಲೇ ಸನ್ಮಾನ್ ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿದ್ದರು. ಅದಿಲ್ಲದಿದ್ದರೆ ನಾವು ಬಹಳ ಪರದಾಡಬೇಕಾಗಿತ್ತು. ಅದೇ ಹೋಟೆಲಿನಲ್ಲಿ ರಾತ್ರಿಯ ಊಟ ಮುಗಿಸಿ ಬೇಗನೆ ನಿದ್ರೆಗೆ ಜಾರಿದೆವು.


ಭಾನುವಾರ ಮುಂಜಾನೆ ೬.೨೦ ಕ್ಕೆ ಡ್ರೈವರ್ ಅರುಣ ಸಂತೋಷ್ ಬಾವನ ಸಾಂಟ್ರೋ ಕಾರಿನಲ್ಲಿ ಹಾಜರ್. ನಾವು ಬೇಗ ಬೇಗನೆ ರೆಡಿ ಆಗಿ, ಹೋಟೆಲ್ ಗ್ರಾಂಡ್ ನಲ್ಲಿ ಇಡ್ಲಿ-ವಡ ತಿಂದು ಅಂಬೋಲಿ ಕಡೆಗೆ ಹೊರಟೆವು.ಆಗಲೇ ಮಳೆಯಿಂದಾಗಿ ವಾತಾವರಣ ಮುಸುಕು ಮುಸುಕಾಗಿತ್ತು. ಹಿತವಾದ ಛಳಿ, ಮಂಜು ನಮಗೆ ಎಲ್ಲಿಲ್ಲದ ಉತ್ಸಾಹವನ್ನು ತಂದಿತ್ತು. ಬೆಳಗಾವಿ ಅಂದರೆ ಬಯಲುಸೀಮೆ ಅಂತಾನೆ ಅಂದುಕೊಂಡಿದ್ದ ನಮಗೆ ಬೇರೆಯದೇ ಪ್ರಪಂಚವನ್ನು ತೆರೆದಿತ್ತು. ಇದು ಅಪ್ಪಟ ಮಲೆನಾಡಿನ ಸೆರಗಿನ ಊರು. ಹಚ್ಚ ಹಸಿರಿನ ಮರಗಳು, ಕಬ್ಬು, ಭತ್ತದ ಗದ್ದೆ, ಬಿಡದೆ ಸುರಿಯುತ್ತಿದ್ದ ಮಳೆ..ಆಹಾ ಪ್ರವಾಸಕ್ಕೆ ಹೇಳಿಮಾಡಿಸಿದ ಊರು.. ಸಿಂಪ್ಲಿ ಸೂಪರ್..!

ಅನುಭವಿ ಅರುಣ ನಮ್ಮನ್ನು ಮೊದಲು ಕರೆದೊಯ್ದಿದ್ದು " ನನ್ಗರ್ತ ಜಲಪಾತಕ್ಕೆ.." ಹಿಂದಿನ ದಿನ ಕೆಂಪು ನೀರನ್ನು ಕಂಡಿದ್ದ ನಮಗೆ ಇಂದು ಸ್ವಚ್ಛ ಗುಡ್ಡಗಾಡಿನ ಮಳೆಯ ನೀರು.

ಕಡಿದಾದ ಚಿಕ್ಕ ಸುರಂಗದ ಮಧ್ಯೆ ಅತ್ಯಂತ ರಭಸವಾಗಿ ಧುಮ್ಮಿಕ್ಕುವ ಈ ಜಲಪಾತ ನಾನು ನೋಡಿದ ಈ ವರೆಗಿನ ಎಲ್ಲ ಜಲಪಾತಗಳಿಗಿಂತ ವಿಭಿನ್ನ. ಇದರ ಆಳ ಇದುವರೆಗೂ ತಿಳಿದಿಲ್ಲ. ಮೇಲ್ನೋಟಕ್ಕೆ ಸಹಜವಾಗಿಯೇ ಕಾಣುವ ಕಂದಕ, ಹತ್ತಿರದಿಂದ ಬಗ್ಗಿ ನೋಡಿದಾಗಲೇ ಉಸಿರು ನಿಲ್ಲುವಂತಾಗಿದ್ದು. ಇದರ ಸಂಪೂರ್ಣ ಚಿತ್ರವನ್ನು ತೆಗೆಯಲು ಸಾಧ್ಯವಾಗಲಿಲ್ಲ..!
ಹಿರಣ್ಯಕೆಷಿ : ಮಾರ್ಕಂಡೇಯ ನದಿಯ ಉಗಮ ಸ್ಥಾನ. ಚಿಕ್ಕದಾದ ಗುಹೆಯ ಒಳಗಿಂದ ಉದ್ಭವಿಸಿ ಬರುವ ಮಾರ್ಕಂಡೇಯ ನದಿಯು ಮುಂದೆ ಗೊಡಚಿನಮಲ್ಕಿ ಜಲಪಾತವನ್ನು ಸೃಷ್ಟಿಸುತ್ತದೆ.

ಶಿವ ಪಾರ್ವತಿಯರ ಪ್ರತಿಮೆಯ ಸುತ್ತಲೂ ಸದಾ ಕಾಲ ನೀರು ಹರಿಯುತ್ತಿರುತ್ತದೆ. ವಾಹನವನ್ನು ನಿಲ್ಲಿಸಿ ೧/೨ ಕಿ,ಮೀ ಗುಡ್ಡದ ಮಧ್ಯೆ ನಡೆಯಬೇಕು. ಪ್ರವಾಸಿಗರಿಗೆ ಅನುಕೂಲಕ್ಕಾಗಿ ಅಚ್ಚುಕಟ್ಟಾದ ಮೆಟ್ಟಿಲು ವ್ಯವಸ್ಥೆ ಇದೆ.

ಅಂಬೋಲಿ: ಬೆಳಗಾವಿ ಗೋವಾ ನಡುವಿನ ಸಹ್ಯಾದ್ರಿ ಘಟ್ಟದ ರಸ್ತೆ ಮಧ್ಯದಲ್ಲಿ ಸಿಗುವ ಸುಂದರ ಜಲಪಾತ. ಅಂಬೋಲಿ ಘಟ್ಟದ ದಾರಿಯುದ್ದಕ್ಕೂ ಚಿಕ್ಕಪುಟ್ಟ, ಸುಂದರ ಜಲಪಾತಗಳು. ವ್ಯೂ ಪಾಯಿಂಟ್, ಎಲ್ಲವೂ ಪ್ರಕೃತಿಯ ಸುಂದರ ದೃಶ್ಯಗಳು.

ಬೆಳಗಾವಿಯಿಂದ ೮೦ ಕಿ.ಮೀ ದೂರ. ಇದಕ್ಕೆ ಗ್ರೀನ್ ವ್ಯಾಲಿ ಅಂತಲೇ ಹೆಸರು. ರಸ್ತೆಯ ಪಕ್ಕದಲ್ಲಿಯೇ ಇರುವ ಅಂಬೋಲಿ ಜಲಪಾತವು ಅತ್ಯಂತ ಸುಂದರವಾಗಿದೆ. ಬಿಳುಪಿನ ಜಲಧಾರೆ ನಯನ ಮನೋಹರ. ೨೦೦ ಅಡಿ ಎತ್ತರದಿಂದ ಕವಲಾಗಿ ಧುಮ್ಮಿಕ್ಕುವ ಈ ಜಲಪಾತ ಪ್ರವಾಸಿಗರಿಗೆ ಹಬ್ಬ.

ಮಳೆಯ ಪ್ರಮಾಣ ಜಾಸ್ತಿ ಇದ್ದರಿಂದ ಪ್ರವಾಸಿಗರು ಕೂಡ ಹೆಚ್ಚಿದ್ದರು. ಜಲಪಾತದ ಅಂದವನ್ನು ಎಷ್ಟು ಹೊತ್ತು ನೋಡಿದರೂ ತೃಪ್ತಿ ಆಗುತ್ತಿರಲಿಲ್ಲ..ಹಾಗೆ ಸುಮ್ಮನೆ ನೋಡುತ್ತಲೇ ಇದ್ದೆವು. ಹೆಚ್ಚಿನ ಮಳೆ ಮತ್ತು ಮಂಜು ಮುಸುಕಿದ್ದರಿಂದ ಹೆಚ್ಚಿನ ಚಿತ್ರಗಳನ್ನು ತೆಗೆಯಲಾಗಲಿಲ್ಲ. ಮೈ-ಮನ ತೃಪ್ತಿ ಆಗುವಷ್ಟು ಕಾಲ ಸ್ನಾನ ಮಾಡಿ, ಜಲಪಾತದ ಬುಡದವರೆಗೆ ಹೋಗಿ ಅದರ ಸೌಂದರ್ಯವನ್ನು ಕಣ್ತುಂಬಿಕೊಂಡೆವು.


ಮುಂದೆ ವ್ಯೂ ಪಾಯಿಂಟ್ ನಲ್ಲಿ ನಿಂತು ನೋಡಿದರೆ ಸುತ್ತ ಮುತ್ತ ಜಲಪಾತಗಳೇ ಕಾಣಿಸುತಿದ್ದವು. ಇಂತಹ ಒಂದು ಅದ್ಭುತ ದೃಶ್ಯವನ್ನು ನಾನು ನೋಡಿರಲಿಲ್ಲ. ಮೋಡಗಳ ಅಡಚಣೆ ಇಲ್ಲದಿದ್ದರೆ ಅದ್ಭುತವಾದ ವೀಕ್ಷಣೆ ಸಾಧ್ಯ. ಮನಸ್ಸಿಗೆ ಅಂತ್ಯಂತ ಖುಷಿ ಕೊಡುವ ತಾಣ.ಹಸಿರಿನ ದಟ್ಟ ಕಾನನ, ಬೆಳ್ಳಿ ಗೆರೆಯಂತೆ ಕಾಣಿಸುವ ಜಲಧಾರೆಗಳು, ಹಿತವಾದ ಮಳೆ, ಸ್ವರ್ಗವೇನೂ ಅಂತ ಅನ್ನಿಸುತ್ತಿತ್ತು.


ಸಾವಂತವಾಡಿ: ಸಾವಂತವಾಡಿ ಭೋಂಸಲೇ ಅರಸರ ರಾಜಧಾನಿ. ಸುಂದರ ಕೆರೆ, ಕೋಟೆ, ರಾಜಮಹಲ್, ದರ್ಬಾರ್ ಹಾಲ್, ಅರಮನೆ ಇನ್ನೂ ರಾಜಮನೆತನದ ಜೀವಂತಿಕೆಯನ್ನು ಉಳಿಸಿವೆ. ಮರದ ಗೊಂಬೆಗಳು, ಸುಂದರ ಕೆತ್ತನೆಗಳು, ಗಂಜಿಫಾ (ಮೊಘಲ್ ) ಮಾದರಿಯ ಚಿತ್ರಕಲೆ ಇಲ್ಲಿನ ವಿಶೇಷ.

ಚಿತ್ರಕಲೆಯನ್ನು ರಾಜಮಾತೆ ಸತ್ವಶೀಲ ದೇವಿ ಇಂದಿಗೂ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಅರಮನೆಯ ಸಂಗ್ರಹಾಲಯದಲ್ಲಿ ರಾಜಮನೆತನದ ಚಿತ್ರಪಟಗಳು, ಆಯುಧ, ನಿತ್ಯೋಪಯೋಗಿ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.


ಸಾವಂತವಾಡಿಯಲ್ಲಿ ಊಟ ಮುಗಿಸಿ, ವಾಪಾಸು ಬೆಳಗಾವಿಯತ್ತ ಹೊರಟೆವು. ಹೆಚ್ಚಿನ ಪ್ರವಾಸಿಗರು, ವಾಹನ ದಟ್ಟಣೆಯಿಂದಾಗಿ ಬೆಳಗಾವಿ ತಲುಪಿದಾಗ ಸಂಜೆ ೬ ಗಂಟೆ ಆಗಿತ್ತು. ನನ್ನ ಅನುಭವದ ಪ್ರಕಾರ, ಅಂಬೋಲಿಗೆ ವಾರದ ದಿನಗಳಂದು ಹೋಗುವುದು ಉತ್ತಮ. ಅಥವಾ ಮುಂಜಾನೆ ಬೇಗನೆ ಅಲ್ಲಿಗೆ ತಲುಪುವುದು ಉತ್ತಮ. ಅದಿಲ್ಲದಿದ್ದರೆ ವಾರದ ಕೊನೆಯ ದಿನಗಳು, ರಜಾ ದಿನಗಳಂದು ವಿಪರೀತ ಜನ ದಟ್ಟನೆ, ವಾಹನ ದಟ್ಟನೆ ಇರುತ್ತದೆ. ಜಲಪಾತದ ತುಂಬೆಲ್ಲ ಪ್ರವಾಸಿಗರು ಗಿಜಿಗುಟ್ಟುತ್ತಿರುತ್ತಾರೆ. ನಮಗಂತೂ ವಾಪಾಸು ಬರುವಾಗ ಸಾಕಾಗಿ ಹೋಗಿತ್ತು...!!

ಸಂಜೆ ಸಂತೋಷ್ ಬಾವನ ಮನೆಯಲ್ಲಿ ಕರದಂಟು ಸವಿದು, ಚಹಾ ಕುಡಿದು, ಅವರ ಸಹಕಾರಕ್ಕಾಗಿ ಥ್ಯಾಂಕ್ಸ್ ಹೇಳಿ, ಬೆಂಗಳೂರಿಗೆ ಹೋಗುವ VRL ಬಸ್ಸಿನಲ್ಲಿ ವಾಪಾಸು ಹೊರಟೆವು.