Tuesday, April 28, 2009

ಮಡಿಕೇರಿ ಪ್ರವಾಸ

೩೧ ಡಿಸೆಂಬರ್ ೨೦೦೭ ಇಡೀ ಬೆಂಗಳೂರು ಹೊಸ ವರ್ಷದ ಸ್ವಾಗತಕ್ಕೆ ಸಿದ್ಧವಾಗುತ್ತ ಇತ್ತು. ಮರುದಿನ ನಮ್ಮ ಆಫೀಸ್ ಗೆ ಕೂಡ ರಜ ಘೋಷಿಸಿದ್ದರು. ಸಂಜೆ ಸುಮಾರು ೮ ಗಂಟೆಗೆ ಆನಂದ ಆಫೀಸ್ ನಿಂದ ಫೋನ್ ಮಾಡಿದ್ದ, ಅವನ server ಮ್ಯಾನೇಜರ್ ಹತ್ರ ಹೊಡೆದಾಡಿ ಬೇಗ ಮನೆಗೆ ಬರ್ತೀನಿ, ನೀವು ರೆಡಿ ಇರಿ, ಮೈಸೂರ್ ಗೆ ಹೋಗೋಣ ಅಂತ ಹೇಳಿದ. ನಾನು ಅರವಿಂದನಿಗೆ ಫೋನ್ ಮಾಡಿ ನಮ್ಮ ಮನೆಗೆ ಬರಲು ಹೇಳಿದೆ. ಆನಂದ ಮತ್ತು ಅವನ ಗೆಳೆಯ ಸುಧೀರ ಮನೆಗೆ ಬಂದಾಗ ೧೦ ಗಂಟೆ ಆಗಿತ್ತು. ಎಲ್ಲರು ರೆಡಿ ಆಗಿ, ಬೇಕರಿಯಲ್ಲಿ ಕೇಕು ಖರೀದಿಸಿ, ವಿಜಯನಗರ ಬಿಟ್ಟಾಗ ರಾತ್ರಿ ೧೧ ಗಂಟೆ.

ಅಂದು ಮೈಸೂರು ರಸ್ತೆ ವಾಹನಗಳಿಂದ ತುಂಬಿತ್ತು...ಎಲ್ಲರೂ ಹೊಸ ವರ್ಷದ ಆಚರಣೆಯಲ್ಲಿ ತೇಲುತಿದ್ದರು. ಕಾರುಗಳು ವೇಗದ ಮಿತಿಯನ್ನು ಮೀರಿ ಹೋಗುತ್ತಿದ್ದವು. ರಾಮನಗರದ ಸಮೀಪ ಹೋಗುವಷ್ಟರಲ್ಲಿ ೧೨ ಗಂಟೆ ಆಗಿತ್ತು. ಅಲ್ಲೇ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ, ದೀಪ ಬೆಳಗಿಸಿ, ಕೇಕ್ ಕತ್ತರಿಸಿ, ಅಪ್ಪುಗೆಯ ಹಾರೈಕೆಗಳೊಂದಿಗೆ ಹೊಸವರ್ಷವನ್ನು ಸ್ವಾಗತಿಸಿದೆವು. ಮದ್ದೂರಿನ ಕಾಫೀ-ಡೇ ಗೆ ನುಗ್ಗಿ ಅರವಿಂದನಿಗೆ ಪ್ರಿಯವಾದ ಕೆಪೆಚಿನೋ ಕುಡಿದು, ಬನ್ ತಿಂದು ಮೈಸೂರಿನತ್ತ ಹೊರಟಾಗ ರಾತ್ರಿ ೨.೩೦.


ಮೈಸೂರಿನಲ್ಲಿ ನನ್ನ ಭಾವ-ಗೆಳೆಯ ರಂಗನಾಥ ನಿಗೆ ಫೋನ್ ಮಾಡಿ ಅವನ ಮನೆಗೆ ಬರುತ್ತಿದ್ದೇವೆ ಎಂದು ಹೇಳಿದೆ. ಶ್ರೀರಂಗಪಟ್ಟಣದ ಹತ್ತಿರ ಎದುರಾದ ವೇಗನಿಯಂತ್ರಕ (hump) ಗಮನಿಸದೆ ಆನಂದ ವೇಗವಾಗಿ ಕಾರನ್ನು ಹತ್ತಿಸಿದ...!! ಒಂದು ಸಲ ಭೂಕಂಪ ಆದ ಹಾಗಾಯಿತು..!! ಸಧ್ಯ ಕಾರಿಗೆ ಹೆಚ್ಚೇನು ತೊಂದರೆ ಆಗಿರಲಿಲ್ಲ...! ಮರಳಿ ಬಂದು ಕಾರನ್ನು ಸರ್ವಿಸ್ ಗೆ ಕೊಟ್ಟಾಗಲೇ ಗೊತ್ತಾಗಿದ್ದು..ಅದರ (suspension) ಹೋಗಿತ್ತು...!!!ಮೈಸೂರಿನಲ್ಲಿ ನಮ್ಮ ಪ್ಲಾನ್ ಬದಲಾವಣೆ ಆಯಿತು. ಸೀದಾ ಮಡಿಕೇರಿಗೆ ಹೋಗುವುದೆಂದು ತೀರ್ಮಾನಿಸಿದೇವು. ಆನಂದ ಮಡಿಕೇರಿಯ ರಾಜ-ಸೀಟ್ ನಲ್ಲಿ ಸೂರ್ಯೋದಯವನ್ನು ನೋಡಲೇ ಬೇಕೆಂದು ಹೇಳಿದ...!! ಮೈಸೂರಿನಲ್ಲಿ ಮಡಿಕೇರಿಯ ದಾರಿ ಹುಡುಕುತ್ತ ೫ ರೌಂಡು ಹೊಡೆದು, ಹುಣಸೂರು ರಸ್ತೆಗೆ ಸೇರಿದಾಗ ಬೆಳಗಿನ ಜಾವ ೩.೩೦ ಆಗಿತ್ತು. ನಾನು, ಅರವಿಂದ, ಸುಧೀರ ನಿಧಾನವಾಗಿ ನಿದ್ದೆಗೆ ಜಾರಿದ್ದೆವು.

ಕುಶಾಲನಗರದ ಬಳಿ ಜೋರಾಗಿ ಬೀಸಿದ ಗಾಳಿ, ಮಳೆಗೆ ಮರವೊಂದು ಮುರಿದು, ಸೀದಾ ಕರೆಂಟು ಕಂಬದ ಮೇಲೆಯೇ ಬಿದ್ದಿತ್ತು. ಕರೆಂಟು ಲೈನುಗಳು ರಸ್ತೆಯ ಮೇಲೆ..!! ಎಲ್ಲ ವಾಹನಗಳೂ ಮುಂದೆ ಸಾಗುವ ಧೈರ್ಯವಿಲ್ಲದೆ ನಿಂತಿದ್ದವು..ಸುಮಾರು ದೂರದವರೆಗೂ ಟ್ರಾಫಿಕ್ ಜಾಮ್ ಆಗಿತ್ತು...ನಾವೂ ಸ್ವಲ್ಪ ಹೊತ್ತು ಕಾದೆವು. ಆಗ ಒಂದು ಟ್ರಕ್ ನವನು ತಂತಿಗಳ ಮೇಲೆ ಹತ್ತಿಸಿಕೊಂಡು ಹೋದ....ನಾವೂ ಅವನನ್ನ ಹಿಂಬಾಲಿಸಿ, ಸ್ವಲ್ಪ ರಿಸ್ಕ್ ತಗೊಂಡು ತಂತಿಗಳನ್ನು ಹಾದು ಹೋದೆವು...!! ಮಡಿಕೇರಿಯ ಚುಮು ಚುಮು ಚಳಿಯ ಅನುಭವ ಆಗುತ್ತ ಇತ್ತು...ಕುಶಾಲನಗರ ದಾಟಿದ ನಂತರ ರಸ್ತೆ ಪಕ್ಕದ ಟೀ ಅಂಗಡಿಯಲ್ಲಿ ಬಿಸಿ ಬಿಸಿ ಟೀ ಕುಡಿದು ಚಳಿಯನ್ನು ದೂರ ತಳ್ಳಿ, ಹುರುಪಿನಲ್ಲಿದ್ದ ಆನಂದ ಮತ್ತು ರಂಗನನ್ನು ಕಾರು ಓಡಿಸಲು ಹೇಳಿ ನಾವು ಮತ್ತೆ ನಿದ್ದೆಗೆ ಶರಣು... ಮಡಿಕೇರಿ ರಾಜ-ಸೀಟ್ ಗೆ ತಲುಪಿದಾಗ ಸಮಯ ೫.೪೫.


ತಂಪಾದ ಗಾಳಿ, ಚುಮು ಚುಮು ಚಳಿ, ಮಡಿಕೇರಿಯ ನಿಸರ್ಗ ಸೌಂದರ್ಯ...ನಿಧಾನಕ್ಕೆ ಉದಯಿಸುತಿದ್ದ ಸೂರ್ಯ.. ಮನಸ್ಸಿಗೆ ಹಿತವಾಗಿತ್ತು...ಪ್ರಯಾಣದ ಆಯಾಸ ಗಮನಕ್ಕೆ ಬರಲೇ ಇಲ್ಲ.


ಅಲ್ಲಿಯವರೆಗೂ ಒಂದೂ ಶಬ್ದಕೂಡ ಆಡದ ಸುಧೀರ, ಮಡಿಕೇರಿಯ ಇಬ್ಬನಿ, ಸುಂದರ ದೃಶ್ಯಗಳನ್ನು ನೋಡಿ ಜಿಗಿದಾಡಿಬಿಟ್ಟ. ಎಲ್ಲಿಂದಲೋ ಹೊಸ ಹುರುಪು ಬಂದಿತ್ತು ಅವನಿಗೆ...ಒಳ್ಳೊಳ್ಳೆ ಜೋಕ್ ಮಾಡುತ್ತ..ಸಕತ್ ಡೈಲಾಗ್ ಹೊಡೆಯುತ್ತ, ನಮ್ಮೆಲ್ಲರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಲು ಪ್ರಾರಂಭಿಸಿದ...ಅವನ ಟ್ಯಾಲೆಂಟ್ ಗೊತ್ತಾಗಿದ್ದೆ ಆವಾಗ..!


ತುಂಬಾ ಮೋಡ ಕವಿದಿದ್ದರಿಂದ ಚಂದದ ಸೂರ್ಯೋದಯದ ಭಾಗ್ಯ ನಮಗೆ ಆಗಲಿಲ್ಲ..! ಸೂರ್ಯ ಮರೆ ಮರೆಯಾಗಿ ಕಾಣಿಸುತ್ತಿದ್ದ..

ರಾಜ-ಸೀಟ್ ಬಗ್ಗೆ : ಕೊಡಗಿನ ಮಹಾರಾಜರು ತಮ್ಮ ಪರಿವಾರದವರೊಂದಿಗೆ ಇಲ್ಲಿಗೆ ಸಂಜೆಯನ್ನು ಕಳೆಯಲು ಬರುತಿದ್ದರು ಎಂಬ ಪ್ರತೀತಿ ಇದೆ. ಹಸಿರಿನ ಉದ್ಯಾನವನ, ಸುತ್ತಲಿನ ಪರ್ವತ ಶ್ರೇಣಿಗಳ ದೃಶ್ಯ, ವಿಶಾಲವಾದ ಹಸಿರು ಗದ್ದೆಗಳು, ಕಾಫಿ ತೋಟ ನೋಡುಗರನ್ನ ತಕ್ಷಣಕ್ಕೆ ಇಷ್ಟವಾಗುವ ಹಾಗೆ ಮಾಡುತ್ತವೆ. ಹಿತವಾದ ತಂಗಾಳಿ, ಮನಮೋಹಕ ಸೂರ್ಯೋದಯದ ದೃಶ್ಯ ಎಲ್ಲರ ಹೃದಯದಲ್ಲಿ ಶಾಶ್ವತವಾಗಿ ಮನೆಮೂಡುತ್ತದೆ.

ಮಡಿಕೇರಿಯಲ್ಲಿ ಒಂದು ರೂಮು ಮಾಡಿ ೧೦ ಗಂಟೆಯ ತನಕ ಗಡದ್ದಾಗಿ ನಿದ್ದೆ ಮಾಡಿದೆವು. ಫೋನು ಬಡಿದುಕೊಳ್ಳ ಲಾರಂಭಿಸಿದಾಗಲೇ ಎಚ್ಚರ ಆಗಿದ್ದು. ಸ್ನಾನ ಕರ್ಮಾದಿಗಳನ್ನು ಮುಗಿಸಿ, ಹೊಸ ವರ್ಷದ ದಿನ "ಓಂಕಾರೇಶ್ವರ ದೇವಸ್ಥಾನಕ್ಕೆ" ಬಂದು ಶಿವನ ದರ್ಶನ ಮಾಡಿದೆವು.

ಓಂಕಾರೇಶ್ವರ ದೇವಸ್ಥಾನದ ಬಗ್ಗೆ: ಮಡಿಕೇರಿಯ ಹೃದಯ ಭಾಗದಲ್ಲಿರುವ ಈ ದೇವಸ್ಥಾನವನ್ನ ೧೮೨೦ ರಲ್ಲಿ ರಾಜ 'ಲಿಂಗರಾಜೇಂದ್ರ' ರಿಂದ ಕಟ್ಟಲ್ಪಟ್ಟಿದ್ದು. ತನ್ನ ರಾಜಕೀಯ ಹಿತಕ್ಕೋಸ್ಕರ ಬ್ರಾಹ್ಮಣ ಪುರೋಹಿತರೋಬ್ಬರನ್ನ ರಾಜನು ಕೊಲ್ಲಿಸಿದ. ಆ ಬ್ರಾಹ್ಮಣ ಮರಣದ ನಂತರ "ಬ್ರಹ್ಮರಾಕ್ಷಸ" ಆಗಿ ರಾಜನನ್ನು ಕಾಡಲು ಶುರುಮಾಡಿದ. ಇದರಿಂದ ಬೇಸತ್ತ ರಾಜನು ಕಾಶಿಯಿಂದ ಶಿವಲಿಂಗವನ್ನು ತಂದು ಇಲ್ಲಿ ಪ್ರತಿಷ್ಟಾಪಿಸಿ ದೇವಸ್ಥಾನವನ್ನು ಕಟ್ಟಿಸಿದ ನಂತರ ರಾಕ್ಷಸನ ಸಂಹಾರವಾಗಿ, ಅವನ ಕಾಟದಿಂದ ರಾಜನು ಮುಕ್ತನಾದನು ಎನ್ನುವ ಕಥೆ ಇದೆ.


ದೇವಸ್ಥಾವವು ಇಸ್ಲಾಮಿಕ್ ಮತ್ತು ಕೇರಳ ಮಾದರಿಯಲ್ಲಿ ಕಟ್ಟಲ್ಪಟ್ಟಿದ್ದು, ಕಿಟಕಿಯ ಸರಳುಗಳನ್ನ ಪಂಚಲೋಹದಿಂದ ಮಾಡಲಾಗಿದೆ.
ಮುಂಭಾಗದಲ್ಲಿ ವಿಶಾಲವಾದ ಪುಷ್ಕರಣಿ ಇದ್ದು, ಮಧ್ಯದಲ್ಲಿ ಮಂಟಪ ಇದೆ. ಗೋಡೆಗಳಲ್ಲಿ ಸುಂದರವಾದ ಚಿತ್ರಗಳನ್ನು ಬಿಡಿಸಲಾಗಿದ್ದು, ಇವು ಇತಿಹಾಸವನ್ನು ಸಾರುತ್ತವೆ.


ಅಬ್ಬೆ ಜಲಪಾತ ಅಥವಾ ಅಬ್ಬಿ ಜಲಪಾತ : ಮಡಿಕೇರಿಯಿಂದ ಸುಮಾರು ೮ ಕಿ.ಮೀ ದೂರದಲ್ಲಿರುವ ಕಾಫಿ ತೋಟದ ಮಧ್ಯೆ, ಕಾವೇರಿ ನದಿಯು ಕಪ್ಪು ಬಂಡೆಗಳ ಮೇಲೆ ಹರಡಿಕೊಂಡು, ಸುಮಾರು ೫೦ ಅಡಿ ಎತ್ತರದಿಂದ ಧುಮ್ಮಿಕ್ಕಿ ಅಬ್ಬಿ ಸುಂದರ ಜಲಪಾತವನ್ನು ಸೃಷ್ಟಿಸಿದೆ. ಸುತ್ತಲಿನ ಹಸಿರು ಪರಿಸರ, ನಯನ ಮನೋಹರ ಜಲಪಾತ ಕಣ್ಣಿಗೆ ಹಬ್ಬ. ಜಲಪಾತಕ್ಕೆ ಎದುರಾಗಿ ತೂಗುಸೇತುವೆ ಕಟ್ಟಲಾಗಿದ್ದು, ಜಲಪಾತದ ಉತ್ತಮ ವೀಕ್ಷಣೆಗೆ ಅನುಕೂಲವಾಗಿದೆ. ಇಲ್ಲಿ ನೀರಿನಲ್ಲಿ ಇಳಿಯುವುದನ್ನು ನಿಷೇಧಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗುತ್ತಿದೆ.ಮಡಿಕೇರಿಯಲ್ಲಿ ಊಟ ಮಾಡಿ, ಕಾವೇರಿ ನಿಸರ್ಗ ಧಾಮಕ್ಕೆ ಹೋದೆವು.





ಕಾವೇರಿ ನಿಸರ್ಗ ಧಾಮ : ಮಡಿಕೇರಿಯಿಂದ ೩೫ ಕಿ.ಮೀ, ಕುಶಾಲನಗರದಿಂದ ೨ ಕಿ.ಮೀ ದೂರ ಇರುವ ನಿಸರ್ಗ ಧಾಮವನ್ನು ೧೯೮೮ ರಲ್ಲಿ ಕಟ್ಟಲಾಗಿದೆ. ೩೫ ಎಕರೆ ಸುಂದರ ಪರಿಸರದಲ್ಲಿರುವ ನಿಸರ್ಗ ಧಾಮ ಸುತ್ತಲೂ ಕಾವೇರಿ ನದಿಯಿದೆ. ಬಿದಿರಿನ ಮರಗಳ ಮೇಲೆ ಕಟ್ಟಿದ ಮನೆಗಳು, ಆನೆ ಸವಾರಿ, ಜಿಂಕೆ ವನ, ಕಾಡಿನಲ್ಲಿ ನಡಿಗೆ, ದೋಣಿ ವಿಹಾರ ಇಲ್ಲಿನ ವಿಶೇಷ.



ಕುಟುಂಬ ಸಮೇತ ಒಂದು ದಿನದ ರಜೆಯನ್ನು ಕಳೆಯಲು ಸೂಕ್ತ ಸ್ಥಳ. ಇಲ್ಲಿ ಕಾವೇರಿ ನದಿಯಲ್ಲಿ ಸ್ನಾನ ಮಾಡಿ, ಸುಮಾರು ಹೊತ್ತು ನೀರಲ್ಲಿ ಆಟ ಆಡಿದೆವು. ನಿಸರ್ಗ ಧಾಮದಲ್ಲಿ ಒಂದು ರೌಂಡು ಹಾಕಿ, ಜಿಂಕೆಗಳನ್ನು ಮಾತಾಡಿಸಿ, ಹೊರಟಾಗ ಸಂಜೆ ಆಗುತ್ತಲಿತ್ತು.


ಮೈಸೂರಿನಲ್ಲಿ ರಾತ್ರಿಯ ಊಟ ಮಾಡಿ, ರಂಗನನ್ನು ಮನೆಗೆ ಬಿಟ್ಟು ಬೆಂಗಳೂರಿನತ್ತ ಸಾಗಿದೆವು.

10 comments:

Nadig said...

ಸೂಪರ್ ಮಗ...........
ನನ್ನ ಲಿಫೆನಲ್ಲಿ 2008 ಮರಿಯೋಕಗಲ್ಲ ...... ಇದೆ ಟ್ರಿಪ್ ನಿಂದನೆ ಶುರು ಮಾಡಿದ್ದೂ, ಈ ಟ್ರಿಪ್ ನಂತು ಮರಿಯೋಕಗಲ್ಲ .... ನಾನ್ ಕಾರ್ ಥಗೊಂದಿದ್ದಕ್ಕು ಸಾರ್ಥಕ ಮಗ ...

ಒಂದೊಂದ್ ಟ್ರಿಪ್ ನೆನುಸ್ಕೊಂದ್ರು ಮತ್ತೆ ಮತ್ತೆ ಹೋಗೋಣ ಅನ್ಸುತೆ ..

ಸಕಥಾಗಿ ಬರ್ದಿದಿಯ ಮಗ ...

ಇನ್ನು ನನ್ನ ಸುಸ್ಪೆನ್ಸಿಒನ್ ದುಡ್ಡು ಬಂದಿಲ್ಲ ...........

PARAANJAPE K.N. said...

chennaagide photo-lekhana

ಪಾಚು-ಪ್ರಪಂಚ said...

ನಾಡಿಗರೆ,

ನಿಮ್ಮ ಮಾತು ನಿಜ, ೨೦೦೮ ರಲ್ಲಿ ಹೋದ ಯಾವ ಪ್ರವಾಸವನ್ನು ಮರೆಯುವ ಹಾಗಿಲ್ಲ..
ಅದಕ್ಕೆ ನಿಮ್ಮ ಕಾರು ಕೂಡ ಕಾರಣ..
ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

ಪಾಚು-ಪ್ರಪಂಚ said...

ಪರಾಂಜಪೆ ಅವರೇ,

ಪಾಚು ಪ್ರಪಂಚಕ್ಕೆ ಸ್ವಾಗತ.
ನಿಮ್ಮ ಪ್ರತಿಕ್ರಿಯೆಗೆ ತುಂಬಾ ಥ್ಯಾಂಕ್ಸ್..
ಹೀಗೆ ಬರುತ್ತಿರಿ..

ವಂದನೆಗಳು
ಪ್ರಶಾಂತ್

Arvi said...

ಲೇಖನ ಅದ್ಭ್ಭುತ ವಾಗಿ ಮೂಡಿ ಬಂದಿದೆ.
ಭಟ್ಟ ಒಳ್ಳೇ research ಮಾಡಿದಾನೆ.
As Ananada mentioned.. its a memorable & awesome trip.. but still we missed our Doodh :(

Good work bhatta, keep blogging...
ನಿನ್ನಿಂದ ಇನ್ನೂ ಉತ್ತ್ತಮವಾದ ಲೇಖನಗಳು ಮೂಡಿ ಬರಲಿ ಎಂದು ಹಾರೈಸುವೆ.
Cheers!
Arvi

Nadig said...

ಲೋ ಅರವಿಂದ , ಭಟ್ಟ ನನ್ನ ಕಾರ್ ಸುಸ್ಪೆನ್ಸಿಒನ್ ಬಗ್ಗೆ ಯಾರು ಏನು ಹೇಳಲೇ ಎಲ್ಲ ...

ಪಾಚು-ಪ್ರಪಂಚ said...

Aravinda...

Thanks for your comments.

Dinga - Car suspension du duddu aagle kottidivallo...!!

Nadig said...

yelli .........?
yavaga..............?

ಮಲ್ಲಿಕಾರ್ಜುನ.ಡಿ.ಜಿ. said...

ನಿಮ್ಮ ಮಡಿಕೇರಿ ಪ್ರವಾಸ ಸಕತ್ತಾಗಿದೆ. ನಿಮ್ಮ ಪ್ರವಾಸದ ಚಿತ್ರ ಲೇಖಗಳನ್ನು ನೋಡಿ ಹೋಗಲು ಉತ್ಸುಕತೆ ಬರುತ್ತದೆ. ನಾವೂ ಕುಶಾಲನಗರಕ್ಕೆ ಪ್ರವಾಸ ಹೋಗಿದ್ದೆವು(http://dgmalliphotos.blogspot.com/2009/02/blog-post.html) ನೋಡಿ.

shivu.k said...

ಪ್ರಶಾಂತ್ ಭಟ್,

ನಿಮ್ಮ ಮಡಿಕೇರಿ ಪ್ರವಾಸ ಚಿತ್ರ ಲೇಖನ ಓದುತ್ತಿದ್ದಂತೆ...ಮತ್ತೆ ನಾವು ಅಲ್ಲಿ ಟ್ರಿಪ್ ಹಾಕುವ ಹುಮ್ಮಸ್ಸು ಬರುತ್ತಿದೆ....ಚಿತ್ರಗಳು ತುಂಬಾ ಚೆನ್ನಾಗಿವೆ...ಮತ್ತು ಬರಹವೂ ಕೂಡ....ನಾವು ಹಿಂದೆ ಹೋಗಿದ್ದೆವು...

ಧನ್ಯವಾದಗಳು...