Wednesday, May 20, 2009

ಸಾಗರ ಸುತ್ತ ಮುತ್ತ

ಸಾಗರದ ಜಾತ್ರೆಯನ್ನು ನೋಡಲು ಗೆಳೆಯರನ್ನು ಊರಿಗೆ ಕರೆದೊಯ್ದಿದ್ದೆ. ಜಾತ್ರೆಯ ಅಂದ ಸಂಜೆಯ ಮೇಲೆಯೇ. ಹಾಗಾಗಿ ದಿನದ ಸಮಯದಲ್ಲಿ ಸಾಗರದ ಸುತ್ತ ಮುತ್ತ ಇರುವ ಸುಂದರ ತಾಣಗಳಿಗೆ ಹೋಗಿದ್ದೆವು.ಸಾಗರದಿಂದ ನಾನು, ಡಿಂಗ, ಅರವಿಂದ, ದೂದ್ ಮತ್ತು ರಂಗ ನಮ್ಮ ಮಾರುತಿ-800 ನಲ್ಲಿ ಬೆಳಿಗ್ಗೆ ೧೦ ಗಂಟೆಗೆ ಹೊರಟೆವು.

ಹೊಳೆಬಾಗಿಲು : ಸಾಗರದಿಂದ ೨೫ ಕಿ.ಮೀ ದೂರದಲ್ಲಿರುವ ಶರಾವತಿ ನದಿಯ ಹಿನ್ನೀರು ಪ್ರದೇಶಕ್ಕೆ ಹೊಳೆಬಾಗಿಲು ಎಂದು ಹೆಸರು. ಸಾಗರ ಮತ್ತು ತುಮರಿ ಊರುಗಳಿಗೆ ಇದೇ ಸಂಪರ್ಕ ಕೊಂಡಿ. ನೂರಾರು ಎಕರೆ ಪ್ರದೇಶದಲ್ಲಿ ಎಲ್ಲೆಲ್ಲೂ ನೀರು.



ಲಾಂಚಿನಲ್ಲಿ ಬಸ್ಸು, ಕಾರು ಮತ್ತು ಜನರನ್ನ ಒಂದು ದಡದಿಂದ ಇನ್ನೊಂದು ದಡಕ್ಕೆ ಸಾಗಿಸಲಾಗುತ್ತದೆ.


ಸಣ್ಣ ಸಣ್ಣ ದ್ವೀಪದಂತೆ ಕಾಣುವ ಗುಡ್ಡಗಳು ಹೊಳೆಬಾಗಿಲಿನ ಸೌಂದರ್ಯಕ್ಕೆ ಕಾರಣ. ನೀರಿನ ಒಡಲಲ್ಲಿ ಅದೆಷ್ಟೋ ಊರು, ಮನೆ, ಕೇರಿಗಳು, ಅಗಾಧ ಕಾಡು ಮುಳುಗಿವೆ. ನೀರ ಮೇಲೆ ತೇಲುತ್ತಾ ಸುಮಾರು ೩ ಕಿ.ಮೀ ಸಾಗುವಾಗಿನ ಅನುಭವ ಸುಂದರ. ನಮ್ಮ ಕಾರನ್ನು ಹೊಳೆಬಾಗಿಲ ಈಚೆ ದಡದಲ್ಲಿ ನಿಲ್ಲಿಸಿ, ಲಾಂಚಿನಲ್ಲಿ ಹೊರಟೆವು. ಒಬ್ಬರಿಗೆ ೧ ರೂಪಾಯಿ ಚಾರ್ಜು...!!


ಸಿಗಂದೂರು : ಲಾಂಚಿಂದ ಇಳಿದು, ಬಸ್ಸು ಅಥವಾ ಜೀಪು ಹತ್ತಿ ಸಿಗಂದೂರಿಗೆ ಹೋಗಬಹುದು. ೩ ಕಿ.ಮೀ ರಸ್ತೆ ಸ್ವಲ್ಪ ದುರಸ್ತಿಯಲ್ಲಿದೆ. "ಸಿಗಂದೂರೆಶ್ವರಿ" ಅಮ್ಮನವರ ದೇವಸ್ಥಾನವು ಸುಂದರ ಪ್ರಕೃತಿಯ ಮಧ್ಯೆ, ದಟ್ಟ ಕಾನನದಲ್ಲಿದೆ. ತನ್ನ ಶಕ್ತಿಯಿಂದಲೇ ತುಂಬಾ ಪ್ರಸಿದ್ಧಿಯಾದ ಅಮ್ಮನವರ ದೇವಸ್ಥಾನದಲ್ಲಿ ದರ್ಶನ ಮುಗಿಸಿ, ಮಂಗಳಾರತಿ, ಪ್ರಸಾದ ಸ್ವೀಕರಿಸಿ ಅಲ್ಲಿಂದ ವಾಪಾಸು ಹೊಳೆಬಾಗಿಲಿಗೆ ಬಂದೆವು. ಹಿನ್ನೀರಿನ ತೀರದಲ್ಲಿ ಸ್ವಲ್ಪ ಸಮಯ ಕಳೆದೆವು. ಮನೆಯಿಂದ ತಂದಿದ್ದ ಕೋಡುಬಳೆ, ಅವಲಕ್ಕಿ ತಿಂದು ಸಾಗರಕ್ಕೆ ವಾಪಾಸು ಬಂದೆವು.

ಸಾಗರದಿಂದ ೧೫ ಕಿ.ಮೀ ದೂರ ಇರುವ ನನ್ನ ಅಜ್ಜನಮನೆ ಸುಂದರ ಹಳ್ಳಿ, ಮನೆಯ ಮುಂದೆ ಹಸಿರು ಅಡಿಕೆ ತೋಟ, ಸಣ್ಣ ಹೊಳೆ. ಮನೆಯ ಹಿಂಭಾಗ ಎತ್ತರದ ಬೆಟ್ಟ. ಅಲ್ಲಿ ಹೋದರೆ ಶರಾವತಿ ಹಿನ್ನೀರಿನ ದೃಶ್ಯ ಲಭ್ಯ. ಅಷ್ಟೇ ಸುಂದರ ಸೂರ್ಯಾಸ್ತ ಕೂಡ.



ಮನೆಯಿಂದ ಸೌತೆಕಾಯಿ, ಬಾಳೆಹಣ್ಣು, ಚಕ್ಕುಲಿ, ನೀರಿನ ಬಾಟಲ್ ತೆಗೆದುಕೊಂಡು ಗುಡ್ಡ ಹತ್ತಲು ಶುರು ಮಾಡಿದೆವು.ಮಧ್ಯಾನ್ನ ಪುಷ್ಕಳ ಊಟ ಮಾಡಿದ್ದರಿಂದ ಎಲ್ಲರೂ ಗುಡ್ಡ ಹತ್ತಲು ಸ್ವಲ್ಪ ಪ್ರಯಾಸ ಪಡಬೇಕಾಯಿತು. ಸುಮಾರು ಒಂದು ಗಂಟೆಯ ನಡಿಗೆ, ನಾವು ಬೆಟ್ಟದ ತುದಿ ತಲುಪಿದ್ದೆವು. ಸೂರ್ಯ ಮುಳುಗಲು ತಯಾರಿ ನಡೆಸುತಿದ್ದ.



ಸುಂದರ ಶರಾವತಿ ಕಣಿವೆಯ ದೃಶ್ಯ ಮನಸ್ಸಿಗೆ ಹಿತವಾಗಿತ್ತು. ತಂದಿದ್ದ ತಿನಿಸೆಲ್ಲವನ್ನು ಖಾಲಿ ಮಾಡುತ್ತಾ ಸೂರ್ಯಾಸ್ತ ದೃಶ್ಯವನ್ನು ಸವಿದೆವು. ತಣ್ಣಗಿನ ಗಾಳಿ, ಸುತ್ತಲ ಪರಿಸರ ನಮ್ಮೆಲ್ಲರನ್ನು ಮೈಮರೆಯುವಂತೆ ಮಾಡಿತ್ತು. ಕೇಸರಿ ಬಿಳಿ ಹಸಿರು ಹೋಲಿಕೆಯ ಚಿತ್ರ.


ಅಜ್ಜನಮನೆಯಲ್ಲಿ ರಾತ್ರಿಯ ಊಟ ಮಾಡಿ, ಸಾಗರ ಜಾತ್ರೆ ನೋಡಲು ಹೋದೆವು. ಜಾತ್ರೆಯಲ್ಲಿ ಅಂದು ಜನವೋ ಜನ..!ಜಾತ್ರೆಯಲ್ಲಿ ನೋಡುವುದನ್ನೆಲ್ಲ ನೋಡಿ, ತಿನ್ನುವುದನ್ನೆಲ್ಲ ತಿಂದು, ತಿರುಗಾಡಿ, ಜಾತ್ರೆಯ ಮಜ ಅನುಭವಿಸಿದೆವು.

ಗುಡವಿ ಪಕ್ಷಿಧಾಮ : ಸೊರಬ ಪಟ್ಟಣದ ಹತ್ತಿರ ಇರುವ ಗುಡವಿ ಪಕ್ಷಿಧಾಮ ಕರ್ನಾಟಕದ ಉತ್ತಮ ೫ ಪಕ್ಷಿಧಾಮಗಳಲ್ಲೊಂದು.ಪಕ್ಷಿ ವೀಕ್ಷಕರಿಗೆ ಇದು ಸ್ವರ್ಗ. ಮೇ ತಿಂಗಳಿಂದ, ಡಿಸೆಂಬರ್ ವರೆಗೆ ಸುಮಾರು ೧೯೦ ಕ್ಕೂ ವಿವಿಧ ಬಗೆಯ ಹಕ್ಕಿಗಳನ್ನು ಇಲ್ಲಿ ನೋಡಬಹುದು. ೭೫ ಹೆಕ್ಟೇರು ವಿಶಾಲ ಗುಡವಿ ಕೆರೆ, ವಿಶಾಲವಾದ ಮರಗಳು, ಕಾಡು ವಲಸೆ ಬರುವ ಹಕ್ಕಿಗಳಿಗೆ ನೆಮ್ಮದಿಯ ಆಶ್ರಯ ತಾಣ.

ನಾವು ಇಲ್ಲಿಗೆ ಹೋದಾಗ ಕೊಕ್ಕರೆ, ನೀರು ಕಾಗೆ ಇನ್ನು ಕೆಲವು ಹಕ್ಕಿಗಳನ್ನು ಬಿಟ್ಟರೆ ಹೆಚ್ಚೇನು ಇರಲಿಲ್ಲ. ಕೆರೆಯಲ್ಲಿ ನೀರು ಕೂಡ ಕಡಿಮೆ ಆಗಿತ್ತು. ಇಲ್ಲಿನ ನಿರ್ಜನ ಪ್ರದೇಶದಲ್ಲಿ "ಜೋಡಿ-ಹಕ್ಕಿ" ಗಳು ಅಲ್ಲಲ್ಲಿ ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನವಾಗಿದ್ದವು.

ಕೆಳದಿ : ಕೆಳದಿ ನಾಯಕರ ರಾಜಧಾನಿ 'ಕೆಳದಿ'. ಶಿವಪ್ಪ ನಾಯಕ ಮತ್ತು ರಾಣಿ ಚೆನ್ನಮ್ಮ ರ ಸುವರ್ಣಯುಗದ ಆಡಳಿತ ಕಂಡ ನಾಡು. ಇವರು ಕಟ್ಟಿಸಿದ ರಾಮೇಶ್ವರ ದೇವಾಲಯ ಹೊಯ್ಸಳ-ದ್ರಾವಿಡ' ಶೈಲಿಯಲ್ಲಿದೆ. ಸುಂದರ ಕೆತ್ತನೆಗಳು ಇಲ್ಲಿನ ಪ್ರಮುಖ ಆಕರ್ಷಣೆ. ಒಂದೇ ಕಲ್ಲಿನಲ್ಲಿ ಪಂಚವಾದ್ಯದ ವಿವಿಧ ಸ್ವರ ಹೊರಡಿಸುವ ವಿಶಿಷ್ಟ ಕಂಬ ಇಲ್ಲಿದೆ. ಸರಕಾರದವರು ಒಂದು ಮ್ಯೂಸಿಯಂ ಕಟ್ಟಿಸಿ, ಪುರಾತನ ಗ್ರಂಥ ಮತ್ತು ಅವಶೇಷಗಳನ್ನು ರಕ್ಷಿಸಿದ್ದಾರೆ.


ಹೊನ್ನೇಮರಡು : ಶರಾವತಿ ಹಿನ್ನೀರಿನ ಅದ್ಭುತ ತಾಣಗಳಲ್ಲಿ ಇದು ಒಂದು ಸ್ವಚ್ಛ ಪರಿಸರ, ಜನರ ಒಡನಾಟದಿಂದ ದೂರ, ಬಿದಿರಿನ ಪೊದೆಗಳು, ಹಕ್ಕಿಗಳ ಕಲರವ, ಕಣ್ಣಳತೆಯುದ್ದಕ್ಕೂ ನೀರು, ಮದ್ಯೆ ನಡುಗದ್ದೆಗಳು, ನೀರವ ಮೌನ..ಇದು ಹೊನ್ನೇಮರಡುವಿನ ಚಿತ್ರಣ...

ಸ್ವಾಮಿ ಮತ್ತು ನೋಮಿಟೋ ದಂಪತಿಗಳು ಕಟ್ಟಿದ ಕೂಸು, ಪ್ರವಾಸಿ ತಾಣ. ಇಲ್ಲಿ ಅನೇಕ ಬಗೆಯ ಪರಿಸರಕ್ಕೆ ಸಂಬಂಧಿಸಿದ ವಿಷಯಗಳು ಲಭ್ಯ. ಹಾಗೆ ಬೋಟ್ ರೈಡಿಂಗ್, ಸ್ವಿಮ್ಮಿಂಗ್ ಕ್ಯಾಂಪ್ ಎಲ್ಲದಕ್ಕೂ ಮುಂಚಿತವಾಗಿ ತಿಳಿಸಿರಬೇಕಾಗುತ್ತದೆ.

ಸಂಜೆ ತಂಪಾದ ಗಾಳಿಯಲ್ಲಿ, ನೀರವತೆಯಲ್ಲಿ ಮಿಂದೆದ್ದು, ಎಷ್ಟೋ ಹೊತ್ತಿನ ತನಕ ಪ್ರಪಂಚವನ್ನೇ ಮರೆತಿದ್ದೆವು. ಹೊಸ ಉತ್ಸಾಹದಿಂದ ಮತ್ತೊಮ್ಮೆ ಜಾತ್ರೆಯನ್ನ ತಿರುಗಲು ಸಾಗರದ ಕಡೆ ಹೊರಟೆವು.

Thursday, April 30, 2009

ನಂದಿ ಬೆಟ್ಟ

೦೮-ಸಪ್ಟೆಂಬರ್-೨೦೦೭, ಬೆಂಗಳೂರಿಗರಿಗೆ ತುಂಬಾ ಹತ್ತಿರದ, ಹಾಗೆ ಸುಮ್ಮನೆ ಸಂಜೆಯನ್ನು ಕಳೆಯಲು ಸೂಕ್ತವಾದ, ಪ್ರೇಮಿಗಳ ಸ್ವರ್ಗ ನಂದಿ ಬೆಟ್ಟ ದರ್ಶನಕ್ಕೆ ನಾವು ತಯಾರಾಗಿದ್ದೆವು. ಅಂದು ಶನಿವಾರ ಅರವಿಂದ ನಂದಿ ಬೆಟ್ಟಕ್ಕೆ ಹೋಗೋಣ ಅಂದಾಗ ಮಳೆಯ ನಿರೀಕ್ಷೆಯ ನಡುವೆಯೂ ನಾನು, ಕಿರಣ್, ಸುಹಾಸ್ ಹೊರಡಲು ತಯಾರಾದೆವು. ೨ ಬೈಕ್ ನಲ್ಲಿ, ವಿಜಯನಗರದಿಂದ ಹೊರಟಾಗ ೩ ಗಂಟೆ. ಹೆಬ್ಬಾಳ ದಾಟಿ, ದೇವನಹಳ್ಳಿ ಕ್ರಾಸ್ ಬಳಿ ಎಳನೀರು ಕುಡಿದು ಬೈಕನ್ನ ನಂದಿ ಬೆಟ್ಟದತ್ತ ತಿರುಗಿಸಿದೆವು.


ಇಲ್ಲಿನ ಬೆಟ್ಟದ ರಸ್ತೆಯಲ್ಲಿ ಬೈಕು ಓಡಿಸುವುದು ಒಂದು ಅದ್ಭುತ ಅನುಭವ. ತುಂತುರು ಮಳೆಯಿಂದ ವಾತಾವರಣ ಕೂಡ ತಂಪಾಗಿತ್ತು. ನಾನು "ಶಿರಕವಚ"ವನ್ನು () ತೆಗೆದು ತಂಪಾದ ಗಾಳಿ, ಸುಂದರ ದೃಶ್ಯಗಳು, ಅಂಕು-ಡೊಂಕಾದ ರಸ್ತೆಯಲ್ಲಿ ಬೈಕ್ ಓಡಿಸುವ ಮಜವನ್ನು ಅನುಭವಿಸುತ್ತಿದ್ದೆ.


ಮಾರ್ಗ ಮಧ್ಯೆ ಎದುರಾಗುವ ಸುಂದರ ಸೇವಂತಿಗೆ ಹೂದೋಟ, ದ್ರಾಕ್ಷಿ, ದಾಳಿಂಬೆ ಹಣ್ಣಿನ ತೋಟಗಳು ಮನಸೂರೆಗೊಂಡವು. ಚಂದನೆಯ ಸೇವಂತಿಗೆ ತೋಟವಂತೂ ನಮ್ಮೆಲ್ಲರನ್ನು ಬಹಳವಾಗಿ ಆಕರ್ಷಿಸಿತ್ತು. ನಾವೆಲ್ಲ ಬೇರೆಯದೇ ಲೋಕದಲ್ಲಿದ್ದ ಹಾಗೆ ಅನ್ನಿಸಿತ್ತು. ತೋಟದಲ್ಲಿ ನಿಂತು ಫೋಟೋ ತೆಗೆಸಿಕೊಂಡು, ದ್ರಾಕ್ಷಿ ತೋಟದಲ್ಲಿ ತಾಜಾ ಹಣ್ಣುಗಳನ್ನು ತಿಂದೆವು.



ನಂದಿ ಬೆಟ್ಟ ಸದಾ ಕಾಲ ಪ್ರವಾಸಿಗರಿಂದ ತುಂಬಿರುತ್ತದೆ. ಸರ್ವ ಋತುಗಳೂ ಇಲ್ಲಿಗೆ ಭೇಟಿ ನೀಡಲು ಯೋಗ್ಯ. ಸಮುದ್ರ ಮಟ್ಟದಿಂದ ಸುಮಾರು ೧೫೦೦ ಮೀ ಎತ್ತರದಲ್ಲಿರುವ ನಂದಿ ಬೆಟ್ಟಕ್ಕೆ ನಂದಿ ದುರ್ಗ ಅಂತಲೂ ಹೆಸರಿದೆ. ಈ ಹೆಸರಿಗೆ ಕಾರಣ ಇಲ್ಲಿ ಬಂಡೆಗಳ ನಡುವೆ ಕಟ್ಟಲಾದ ಕೋಟೆ. ಅರ್ಕಾವತಿ ಮತ್ತು ಪಾಲಾರ್ ನದಿಗಳ ಉಗಮ ಸ್ಥಾನ.ಟಿಪ್ಪ ಸುಲ್ತಾನನು ತನ್ನ ಬೇಸಿಗೆಯ ದಿನಗಳನ್ನು ಕಳೆಯಲು ಇಲ್ಲಿಗೆ ಬರುತ್ತಿದ್ದ ಎಂದು ಹೇಳಲಾಗುತ್ತದೆ. ಟಿಪ್ಪು ಇಲ್ಲಿ ಅರಮನೆ ಮತ್ತು ಕೋಟೆ ಕಟ್ಟಿಸಿದ. ನಂತರ ಬ್ರಿಟಿಷರ ಕಾಲದಲ್ಲಿ ಇಲ್ಲಿ ಉದ್ಯಾನವನ ಮತ್ತು ಬಂಗಲೆಯನ್ನು ಕಟ್ಟಿಸಲಾಯಿತು. ಇಂದು ಇದೇ ಬಂಗಲೆ ಇಂದು ಸರಕಾರದ ವಸತಿ ಗೃಹವಾಗಿದೆ.


ಚೋಳ ಶೈಲಿಯ ಯೋಗ ನಂದೀಶ್ವರ ದೇವಸ್ಥಾನ, ಮಂಟಪ, ನಂದಿ, ನೆಹರು ಬಂಗಲೆ ಟಿಪ್ಪು ಡ್ರಾಪ್ ಇಲ್ಲಿನ ವಿಶೇಷತೆಗಳು.ಟಿಪ್ಪು ಸುಲ್ತಾನನು, ೬೦೦ ಅಡಿ ಎತ್ತರದಲ್ಲಿರುವ ಅಪಾಯ ಕಣಿವೆಯಿಂದ ಸೆರೆಹಿಡಿದ ಸೈನಿಕರನ್ನು ಕೆಳಕ್ಕೆ ತಳ್ಳಿ ಕೊಲ್ಲಿಸುತಿದ್ದ..ಅದಕ್ಕೆ ಟಿಪ್ಪು ಡ್ರಾಪ್ ಅಂತ ಹೆಸರು. ಕರ್ನಾಟಕ ತೋಟಗಾರಿಕೆ ಇಲಾಖೆಯು ಸುಂದರವಾದ ಉದ್ಯಾನವನ ಮತ್ತು ಮಕ್ಕಳ ಆಟದ ಮೈದಾನವನ್ನು ನಿರ್ಮಿಸಿದೆ.


ಟಿಪ್ಪು ಡ್ರಾಪ್ ಬಳಿ ಹೋದಾಗ ಸಂಜೆಯಾಗುತ್ತಲಿತ್ತು. ಮೋಡ ಮುಸುಕಿದ್ದರಿಂದ ಸೂರ್ಯ ಕಣ್ಣುಮುಚ್ಚಾಲೆ ಆಡುತ್ತಲಿದ್ದ. ಅಲ್ಲಿನ ಸುಂದರ ಪರಿಸರ, ದೂರ ದೂರದವರೆಗಿನ ದೃಶ್ಯ, ತಣ್ಣಗಿನ ಗಾಳಿ ಎಲ್ಲವೂ ಹಿತವಾಗಿತ್ತು.. ಬಂಡೆಯ ಮೇಲೆ ಕುಳಿತು ಸೂರ್ಯಾಸ್ತವನ್ನು ವೀಕ್ಷಿಸಿದೆವು. ಅಲ್ಲಿ ಹೊತ್ತು ಕಳೆದಿದ್ದೆ ಗೊತ್ತಾಗಲಿಲ್ಲ.








ಬೆಟ್ಟದ ಮೇಲಿದ್ದ ಹೋಟೆಲಿನಲ್ಲಿ ಕಾಫಿ ಕುಡಿದು, ಉದ್ಯಾನವನವನ್ನು ಒಂದು ರೌಂಡು ಹಾಕಿದೆವು. ಒಲ್ಲದ ಮನಸ್ಸಿಂದ ಬೆಟ್ಟದಿಂದ ಇಳಿದು ಬೆಂಗಳೂರಿನತ್ತ, ಟ್ರಾಫಿಕ್ ಮಧ್ಯೆ ಬೈಕ್ ಓಡಿಸಿದೆ.!

Tuesday, April 28, 2009

ಮಡಿಕೇರಿ ಪ್ರವಾಸ

೩೧ ಡಿಸೆಂಬರ್ ೨೦೦೭ ಇಡೀ ಬೆಂಗಳೂರು ಹೊಸ ವರ್ಷದ ಸ್ವಾಗತಕ್ಕೆ ಸಿದ್ಧವಾಗುತ್ತ ಇತ್ತು. ಮರುದಿನ ನಮ್ಮ ಆಫೀಸ್ ಗೆ ಕೂಡ ರಜ ಘೋಷಿಸಿದ್ದರು. ಸಂಜೆ ಸುಮಾರು ೮ ಗಂಟೆಗೆ ಆನಂದ ಆಫೀಸ್ ನಿಂದ ಫೋನ್ ಮಾಡಿದ್ದ, ಅವನ server ಮ್ಯಾನೇಜರ್ ಹತ್ರ ಹೊಡೆದಾಡಿ ಬೇಗ ಮನೆಗೆ ಬರ್ತೀನಿ, ನೀವು ರೆಡಿ ಇರಿ, ಮೈಸೂರ್ ಗೆ ಹೋಗೋಣ ಅಂತ ಹೇಳಿದ. ನಾನು ಅರವಿಂದನಿಗೆ ಫೋನ್ ಮಾಡಿ ನಮ್ಮ ಮನೆಗೆ ಬರಲು ಹೇಳಿದೆ. ಆನಂದ ಮತ್ತು ಅವನ ಗೆಳೆಯ ಸುಧೀರ ಮನೆಗೆ ಬಂದಾಗ ೧೦ ಗಂಟೆ ಆಗಿತ್ತು. ಎಲ್ಲರು ರೆಡಿ ಆಗಿ, ಬೇಕರಿಯಲ್ಲಿ ಕೇಕು ಖರೀದಿಸಿ, ವಿಜಯನಗರ ಬಿಟ್ಟಾಗ ರಾತ್ರಿ ೧೧ ಗಂಟೆ.

ಅಂದು ಮೈಸೂರು ರಸ್ತೆ ವಾಹನಗಳಿಂದ ತುಂಬಿತ್ತು...ಎಲ್ಲರೂ ಹೊಸ ವರ್ಷದ ಆಚರಣೆಯಲ್ಲಿ ತೇಲುತಿದ್ದರು. ಕಾರುಗಳು ವೇಗದ ಮಿತಿಯನ್ನು ಮೀರಿ ಹೋಗುತ್ತಿದ್ದವು. ರಾಮನಗರದ ಸಮೀಪ ಹೋಗುವಷ್ಟರಲ್ಲಿ ೧೨ ಗಂಟೆ ಆಗಿತ್ತು. ಅಲ್ಲೇ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ, ದೀಪ ಬೆಳಗಿಸಿ, ಕೇಕ್ ಕತ್ತರಿಸಿ, ಅಪ್ಪುಗೆಯ ಹಾರೈಕೆಗಳೊಂದಿಗೆ ಹೊಸವರ್ಷವನ್ನು ಸ್ವಾಗತಿಸಿದೆವು. ಮದ್ದೂರಿನ ಕಾಫೀ-ಡೇ ಗೆ ನುಗ್ಗಿ ಅರವಿಂದನಿಗೆ ಪ್ರಿಯವಾದ ಕೆಪೆಚಿನೋ ಕುಡಿದು, ಬನ್ ತಿಂದು ಮೈಸೂರಿನತ್ತ ಹೊರಟಾಗ ರಾತ್ರಿ ೨.೩೦.


ಮೈಸೂರಿನಲ್ಲಿ ನನ್ನ ಭಾವ-ಗೆಳೆಯ ರಂಗನಾಥ ನಿಗೆ ಫೋನ್ ಮಾಡಿ ಅವನ ಮನೆಗೆ ಬರುತ್ತಿದ್ದೇವೆ ಎಂದು ಹೇಳಿದೆ. ಶ್ರೀರಂಗಪಟ್ಟಣದ ಹತ್ತಿರ ಎದುರಾದ ವೇಗನಿಯಂತ್ರಕ (hump) ಗಮನಿಸದೆ ಆನಂದ ವೇಗವಾಗಿ ಕಾರನ್ನು ಹತ್ತಿಸಿದ...!! ಒಂದು ಸಲ ಭೂಕಂಪ ಆದ ಹಾಗಾಯಿತು..!! ಸಧ್ಯ ಕಾರಿಗೆ ಹೆಚ್ಚೇನು ತೊಂದರೆ ಆಗಿರಲಿಲ್ಲ...! ಮರಳಿ ಬಂದು ಕಾರನ್ನು ಸರ್ವಿಸ್ ಗೆ ಕೊಟ್ಟಾಗಲೇ ಗೊತ್ತಾಗಿದ್ದು..ಅದರ (suspension) ಹೋಗಿತ್ತು...!!!ಮೈಸೂರಿನಲ್ಲಿ ನಮ್ಮ ಪ್ಲಾನ್ ಬದಲಾವಣೆ ಆಯಿತು. ಸೀದಾ ಮಡಿಕೇರಿಗೆ ಹೋಗುವುದೆಂದು ತೀರ್ಮಾನಿಸಿದೇವು. ಆನಂದ ಮಡಿಕೇರಿಯ ರಾಜ-ಸೀಟ್ ನಲ್ಲಿ ಸೂರ್ಯೋದಯವನ್ನು ನೋಡಲೇ ಬೇಕೆಂದು ಹೇಳಿದ...!! ಮೈಸೂರಿನಲ್ಲಿ ಮಡಿಕೇರಿಯ ದಾರಿ ಹುಡುಕುತ್ತ ೫ ರೌಂಡು ಹೊಡೆದು, ಹುಣಸೂರು ರಸ್ತೆಗೆ ಸೇರಿದಾಗ ಬೆಳಗಿನ ಜಾವ ೩.೩೦ ಆಗಿತ್ತು. ನಾನು, ಅರವಿಂದ, ಸುಧೀರ ನಿಧಾನವಾಗಿ ನಿದ್ದೆಗೆ ಜಾರಿದ್ದೆವು.

ಕುಶಾಲನಗರದ ಬಳಿ ಜೋರಾಗಿ ಬೀಸಿದ ಗಾಳಿ, ಮಳೆಗೆ ಮರವೊಂದು ಮುರಿದು, ಸೀದಾ ಕರೆಂಟು ಕಂಬದ ಮೇಲೆಯೇ ಬಿದ್ದಿತ್ತು. ಕರೆಂಟು ಲೈನುಗಳು ರಸ್ತೆಯ ಮೇಲೆ..!! ಎಲ್ಲ ವಾಹನಗಳೂ ಮುಂದೆ ಸಾಗುವ ಧೈರ್ಯವಿಲ್ಲದೆ ನಿಂತಿದ್ದವು..ಸುಮಾರು ದೂರದವರೆಗೂ ಟ್ರಾಫಿಕ್ ಜಾಮ್ ಆಗಿತ್ತು...ನಾವೂ ಸ್ವಲ್ಪ ಹೊತ್ತು ಕಾದೆವು. ಆಗ ಒಂದು ಟ್ರಕ್ ನವನು ತಂತಿಗಳ ಮೇಲೆ ಹತ್ತಿಸಿಕೊಂಡು ಹೋದ....ನಾವೂ ಅವನನ್ನ ಹಿಂಬಾಲಿಸಿ, ಸ್ವಲ್ಪ ರಿಸ್ಕ್ ತಗೊಂಡು ತಂತಿಗಳನ್ನು ಹಾದು ಹೋದೆವು...!! ಮಡಿಕೇರಿಯ ಚುಮು ಚುಮು ಚಳಿಯ ಅನುಭವ ಆಗುತ್ತ ಇತ್ತು...ಕುಶಾಲನಗರ ದಾಟಿದ ನಂತರ ರಸ್ತೆ ಪಕ್ಕದ ಟೀ ಅಂಗಡಿಯಲ್ಲಿ ಬಿಸಿ ಬಿಸಿ ಟೀ ಕುಡಿದು ಚಳಿಯನ್ನು ದೂರ ತಳ್ಳಿ, ಹುರುಪಿನಲ್ಲಿದ್ದ ಆನಂದ ಮತ್ತು ರಂಗನನ್ನು ಕಾರು ಓಡಿಸಲು ಹೇಳಿ ನಾವು ಮತ್ತೆ ನಿದ್ದೆಗೆ ಶರಣು... ಮಡಿಕೇರಿ ರಾಜ-ಸೀಟ್ ಗೆ ತಲುಪಿದಾಗ ಸಮಯ ೫.೪೫.


ತಂಪಾದ ಗಾಳಿ, ಚುಮು ಚುಮು ಚಳಿ, ಮಡಿಕೇರಿಯ ನಿಸರ್ಗ ಸೌಂದರ್ಯ...ನಿಧಾನಕ್ಕೆ ಉದಯಿಸುತಿದ್ದ ಸೂರ್ಯ.. ಮನಸ್ಸಿಗೆ ಹಿತವಾಗಿತ್ತು...ಪ್ರಯಾಣದ ಆಯಾಸ ಗಮನಕ್ಕೆ ಬರಲೇ ಇಲ್ಲ.


ಅಲ್ಲಿಯವರೆಗೂ ಒಂದೂ ಶಬ್ದಕೂಡ ಆಡದ ಸುಧೀರ, ಮಡಿಕೇರಿಯ ಇಬ್ಬನಿ, ಸುಂದರ ದೃಶ್ಯಗಳನ್ನು ನೋಡಿ ಜಿಗಿದಾಡಿಬಿಟ್ಟ. ಎಲ್ಲಿಂದಲೋ ಹೊಸ ಹುರುಪು ಬಂದಿತ್ತು ಅವನಿಗೆ...ಒಳ್ಳೊಳ್ಳೆ ಜೋಕ್ ಮಾಡುತ್ತ..ಸಕತ್ ಡೈಲಾಗ್ ಹೊಡೆಯುತ್ತ, ನಮ್ಮೆಲ್ಲರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಲು ಪ್ರಾರಂಭಿಸಿದ...ಅವನ ಟ್ಯಾಲೆಂಟ್ ಗೊತ್ತಾಗಿದ್ದೆ ಆವಾಗ..!


ತುಂಬಾ ಮೋಡ ಕವಿದಿದ್ದರಿಂದ ಚಂದದ ಸೂರ್ಯೋದಯದ ಭಾಗ್ಯ ನಮಗೆ ಆಗಲಿಲ್ಲ..! ಸೂರ್ಯ ಮರೆ ಮರೆಯಾಗಿ ಕಾಣಿಸುತ್ತಿದ್ದ..

ರಾಜ-ಸೀಟ್ ಬಗ್ಗೆ : ಕೊಡಗಿನ ಮಹಾರಾಜರು ತಮ್ಮ ಪರಿವಾರದವರೊಂದಿಗೆ ಇಲ್ಲಿಗೆ ಸಂಜೆಯನ್ನು ಕಳೆಯಲು ಬರುತಿದ್ದರು ಎಂಬ ಪ್ರತೀತಿ ಇದೆ. ಹಸಿರಿನ ಉದ್ಯಾನವನ, ಸುತ್ತಲಿನ ಪರ್ವತ ಶ್ರೇಣಿಗಳ ದೃಶ್ಯ, ವಿಶಾಲವಾದ ಹಸಿರು ಗದ್ದೆಗಳು, ಕಾಫಿ ತೋಟ ನೋಡುಗರನ್ನ ತಕ್ಷಣಕ್ಕೆ ಇಷ್ಟವಾಗುವ ಹಾಗೆ ಮಾಡುತ್ತವೆ. ಹಿತವಾದ ತಂಗಾಳಿ, ಮನಮೋಹಕ ಸೂರ್ಯೋದಯದ ದೃಶ್ಯ ಎಲ್ಲರ ಹೃದಯದಲ್ಲಿ ಶಾಶ್ವತವಾಗಿ ಮನೆಮೂಡುತ್ತದೆ.

ಮಡಿಕೇರಿಯಲ್ಲಿ ಒಂದು ರೂಮು ಮಾಡಿ ೧೦ ಗಂಟೆಯ ತನಕ ಗಡದ್ದಾಗಿ ನಿದ್ದೆ ಮಾಡಿದೆವು. ಫೋನು ಬಡಿದುಕೊಳ್ಳ ಲಾರಂಭಿಸಿದಾಗಲೇ ಎಚ್ಚರ ಆಗಿದ್ದು. ಸ್ನಾನ ಕರ್ಮಾದಿಗಳನ್ನು ಮುಗಿಸಿ, ಹೊಸ ವರ್ಷದ ದಿನ "ಓಂಕಾರೇಶ್ವರ ದೇವಸ್ಥಾನಕ್ಕೆ" ಬಂದು ಶಿವನ ದರ್ಶನ ಮಾಡಿದೆವು.

ಓಂಕಾರೇಶ್ವರ ದೇವಸ್ಥಾನದ ಬಗ್ಗೆ: ಮಡಿಕೇರಿಯ ಹೃದಯ ಭಾಗದಲ್ಲಿರುವ ಈ ದೇವಸ್ಥಾನವನ್ನ ೧೮೨೦ ರಲ್ಲಿ ರಾಜ 'ಲಿಂಗರಾಜೇಂದ್ರ' ರಿಂದ ಕಟ್ಟಲ್ಪಟ್ಟಿದ್ದು. ತನ್ನ ರಾಜಕೀಯ ಹಿತಕ್ಕೋಸ್ಕರ ಬ್ರಾಹ್ಮಣ ಪುರೋಹಿತರೋಬ್ಬರನ್ನ ರಾಜನು ಕೊಲ್ಲಿಸಿದ. ಆ ಬ್ರಾಹ್ಮಣ ಮರಣದ ನಂತರ "ಬ್ರಹ್ಮರಾಕ್ಷಸ" ಆಗಿ ರಾಜನನ್ನು ಕಾಡಲು ಶುರುಮಾಡಿದ. ಇದರಿಂದ ಬೇಸತ್ತ ರಾಜನು ಕಾಶಿಯಿಂದ ಶಿವಲಿಂಗವನ್ನು ತಂದು ಇಲ್ಲಿ ಪ್ರತಿಷ್ಟಾಪಿಸಿ ದೇವಸ್ಥಾನವನ್ನು ಕಟ್ಟಿಸಿದ ನಂತರ ರಾಕ್ಷಸನ ಸಂಹಾರವಾಗಿ, ಅವನ ಕಾಟದಿಂದ ರಾಜನು ಮುಕ್ತನಾದನು ಎನ್ನುವ ಕಥೆ ಇದೆ.


ದೇವಸ್ಥಾವವು ಇಸ್ಲಾಮಿಕ್ ಮತ್ತು ಕೇರಳ ಮಾದರಿಯಲ್ಲಿ ಕಟ್ಟಲ್ಪಟ್ಟಿದ್ದು, ಕಿಟಕಿಯ ಸರಳುಗಳನ್ನ ಪಂಚಲೋಹದಿಂದ ಮಾಡಲಾಗಿದೆ.
ಮುಂಭಾಗದಲ್ಲಿ ವಿಶಾಲವಾದ ಪುಷ್ಕರಣಿ ಇದ್ದು, ಮಧ್ಯದಲ್ಲಿ ಮಂಟಪ ಇದೆ. ಗೋಡೆಗಳಲ್ಲಿ ಸುಂದರವಾದ ಚಿತ್ರಗಳನ್ನು ಬಿಡಿಸಲಾಗಿದ್ದು, ಇವು ಇತಿಹಾಸವನ್ನು ಸಾರುತ್ತವೆ.


ಅಬ್ಬೆ ಜಲಪಾತ ಅಥವಾ ಅಬ್ಬಿ ಜಲಪಾತ : ಮಡಿಕೇರಿಯಿಂದ ಸುಮಾರು ೮ ಕಿ.ಮೀ ದೂರದಲ್ಲಿರುವ ಕಾಫಿ ತೋಟದ ಮಧ್ಯೆ, ಕಾವೇರಿ ನದಿಯು ಕಪ್ಪು ಬಂಡೆಗಳ ಮೇಲೆ ಹರಡಿಕೊಂಡು, ಸುಮಾರು ೫೦ ಅಡಿ ಎತ್ತರದಿಂದ ಧುಮ್ಮಿಕ್ಕಿ ಅಬ್ಬಿ ಸುಂದರ ಜಲಪಾತವನ್ನು ಸೃಷ್ಟಿಸಿದೆ. ಸುತ್ತಲಿನ ಹಸಿರು ಪರಿಸರ, ನಯನ ಮನೋಹರ ಜಲಪಾತ ಕಣ್ಣಿಗೆ ಹಬ್ಬ. ಜಲಪಾತಕ್ಕೆ ಎದುರಾಗಿ ತೂಗುಸೇತುವೆ ಕಟ್ಟಲಾಗಿದ್ದು, ಜಲಪಾತದ ಉತ್ತಮ ವೀಕ್ಷಣೆಗೆ ಅನುಕೂಲವಾಗಿದೆ. ಇಲ್ಲಿ ನೀರಿನಲ್ಲಿ ಇಳಿಯುವುದನ್ನು ನಿಷೇಧಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗುತ್ತಿದೆ.ಮಡಿಕೇರಿಯಲ್ಲಿ ಊಟ ಮಾಡಿ, ಕಾವೇರಿ ನಿಸರ್ಗ ಧಾಮಕ್ಕೆ ಹೋದೆವು.





ಕಾವೇರಿ ನಿಸರ್ಗ ಧಾಮ : ಮಡಿಕೇರಿಯಿಂದ ೩೫ ಕಿ.ಮೀ, ಕುಶಾಲನಗರದಿಂದ ೨ ಕಿ.ಮೀ ದೂರ ಇರುವ ನಿಸರ್ಗ ಧಾಮವನ್ನು ೧೯೮೮ ರಲ್ಲಿ ಕಟ್ಟಲಾಗಿದೆ. ೩೫ ಎಕರೆ ಸುಂದರ ಪರಿಸರದಲ್ಲಿರುವ ನಿಸರ್ಗ ಧಾಮ ಸುತ್ತಲೂ ಕಾವೇರಿ ನದಿಯಿದೆ. ಬಿದಿರಿನ ಮರಗಳ ಮೇಲೆ ಕಟ್ಟಿದ ಮನೆಗಳು, ಆನೆ ಸವಾರಿ, ಜಿಂಕೆ ವನ, ಕಾಡಿನಲ್ಲಿ ನಡಿಗೆ, ದೋಣಿ ವಿಹಾರ ಇಲ್ಲಿನ ವಿಶೇಷ.



ಕುಟುಂಬ ಸಮೇತ ಒಂದು ದಿನದ ರಜೆಯನ್ನು ಕಳೆಯಲು ಸೂಕ್ತ ಸ್ಥಳ. ಇಲ್ಲಿ ಕಾವೇರಿ ನದಿಯಲ್ಲಿ ಸ್ನಾನ ಮಾಡಿ, ಸುಮಾರು ಹೊತ್ತು ನೀರಲ್ಲಿ ಆಟ ಆಡಿದೆವು. ನಿಸರ್ಗ ಧಾಮದಲ್ಲಿ ಒಂದು ರೌಂಡು ಹಾಕಿ, ಜಿಂಕೆಗಳನ್ನು ಮಾತಾಡಿಸಿ, ಹೊರಟಾಗ ಸಂಜೆ ಆಗುತ್ತಲಿತ್ತು.


ಮೈಸೂರಿನಲ್ಲಿ ರಾತ್ರಿಯ ಊಟ ಮಾಡಿ, ರಂಗನನ್ನು ಮನೆಗೆ ಬಿಟ್ಟು ಬೆಂಗಳೂರಿನತ್ತ ಸಾಗಿದೆವು.