Tuesday, April 21, 2009

ನಾಗರಹೊಳೆ ಮತ್ತು ಇರ್ಪು ಜಲಪಾತ

ನಾಗರಹೊಳೆ ಮತ್ತು ಇರ್ಪು ಜಲಪಾತ - ೨೦ ಏಪ್ರಿಲ್ ೨೦೦೮ ಭಾನುವಾರ
ಶನಿವಾರ ತುಂಬಾ ಬೋರ್ ಆಗಿ ಕಳೆದ ನಮಗೆ ಭಾನುವಾರವನ್ನೂ ವೇಸ್ಟು ಮಾಡಲು ಮನಸ್ಸಿರಲಿಲ್ಲ. ಇಂಟರ್ನೆಟ್ ನಲ್ಲಿ ಅಲ್ಪ ಸ್ವಲ್ಪ ತಡಕಾಡಿ ನಾಗರಹೊಳೆ ಒಂದು ದಿನದ ಪ್ರವಾಸಕ್ಕೆ ಯೋಗ್ಯವಾಗಿದ್ದು, ಅಲ್ಲಿ ಕಾಡುಪ್ರಾಣಿಗಳು ನೋಡಲು ಸಿಗುವುದೆಂದು ತಿಳಿದು ಅಲ್ಲಿಗೇ ಹೋಗುವುದೆಂದು ತೀರ್ಮಾನಿಸಿದೆವು. ಸಂತು, ಅರವಿಂದ, ಬನವಾಸಿ ಶನಿವಾರ ನಮ್ಮ ರೂಮಿನಲ್ಲಿ ಉಳಿದರು.

ಭಾನುವಾರ ಮುಂಜಾನೆ ೬ ಗಂಟೆಗೆ ಡಿಂಗನ ಕಾರಿನಲ್ಲಿ ನಮ್ಮ ಪ್ರಯಾಣ ಪ್ರಾರಂಭಿಸಿದೆವು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಶ್ರೀರಂಗಪಟ್ಟಣ ನಂತರ ಬಲಗಡೆ ತಿರುಗಿ ಹುಣಸೂರು ತಲುಪಿದೆವು. ಅಲ್ಲಿ ಹೋಟೆಲೊಂದರಲ್ಲಿ ಬೆಳಗಿನ ಉಪಾಹಾರ ಮುಗಿಸಿದೆವು. ಪ್ಲೈನ್-ದೋಸೆ ಮತ್ತು ಕಾಫಿ ಅಷ್ಟೇನೂ ಚೆನ್ನಾಗಿಲ್ಲದಿದ್ದರೂ ಹಸಿವಾಗಿದ್ದರಿಂದ ಬೇರೆ ವಿಧಿ ಇಲ್ಲದೆ ತಿಂದು ಮುಗಿಸಿದೆವು. ನಾಗರಹೊಳೆ ಅಭಯಾರಣ್ಯ ಭಾಗದಲ್ಲಿ ಸ್ವಲ್ಪ ಮಳೆಯಾಗಿದ್ದರಿಂದ ರಸ್ತೆಯ ಪಕ್ಕ ಹಸಿರು ಕಂಗೊಳಿಸುತ್ತಿತ್ತು. ಅಂದಿನ ವಾತಾವರಣವೂ ತಣ್ಣಗಿದ್ದು, ಬಿಸಿಲಿನ ಧಗೆಯ ಬೆಂಗಳೂರಿಂದ ಹೋಗಿದ್ದ ನಮಗೆ ಹಸಿರಿನ ತಣ್ಣನೆಯ ಪರಿಸರ ಆಹ್ಲಾದಕರವಾಗಿತ್ತು.


ನಾಗರಹೊಳೆಯ ಆನೆ ಖೆಡ್ಡದಲ್ಲಿ ಒಂದು ವಾರದ ಹಿಂದೆ ಹಾಸನದಿಂದ ಹಿಡಿದು ತಂದಿದ್ದ ಸಲಗವನ್ನು ಕೂಡಿ ಹಾಕಿದ್ದರು. ನೋಡಿದರೆ ಭಯವೆನಿಸುತಿದ್ದ ಈ ಸಲಗ ಹಾಸನದ ಸುತ್ತಮುತ್ತ ೪ ಜನರನ್ನು ಬಲಿ ತೆಗೆದುಕೊಂಡಿತ್ತು. ಬಂಧನದಲ್ಲಿದ್ದ ಅದರ ಘೀಳಿಡುವಿಕೆ ಎದೆಯಲ್ಲಿ ನಡುಕ ಹುಟ್ಟಿಸಿತ್ತು.


ರಸ್ತೆಯ ಪಕ್ಕದಲ್ಲಿ ಜಿಂಕೆಗಳ ಹಿಂಡು ಕಾಣಿಸುತ್ತದೆ. ಇದು ಇಲ್ಲಿ ಸಾಮಾನ್ಯ. ಅವು ಕಾಡಿನ ಮಧ್ಯಭಾಗಕ್ಕೆ ಹೋಗುವುದಿಲ್ಲವಂತೆ. ಅಲ್ಲಿನ ಅರಣ್ಯ ಸಿಬ್ಬಂಧಿಯ ಮನೆಗಳ ಪಕ್ಕದಲ್ಲಿಯೇ ತಿರುಗಾಡಿಕೊಂಡಿದ್ದವು.

ನಾಗರಹೊಳೆ ಸಫಾರಿ ಯ ಬಳಿ ಬಂದಾಗ ಮಧ್ಯಾನ್ನ ೧೧ ಗಂಟೆ ಆಗಿತ್ತು. ಅಲ್ಲಿ ಕಾಡಿನ ಸಫಾರಿಯ ಬಗ್ಗೆ ವಿಚಾರಿಸಿದಾಗ ಆ ಸಮಯದಲ್ಲಿ ಹೆಚ್ಚು ಕಾಡುಪ್ರಾಣಿಗಳು ಕಾಣಸಿಗುವುದಿಲ್ಲ ಅಂತ ಗೊತ್ತಾಯಿತು. ಅಲ್ಲಿನ ಸಿಬ್ಬಂದಿ ಬಳಿ ಹತ್ತಿರದ ಬೇರೆ ಸ್ಥಳ ಬಗ್ಗೆ ಕೇಳಿದಾಗ, ಇರ್ಪು ಜಲಪಾತದ ಬಗ್ಗೆ ಹೇಳಿದರು. ನಾಗರಹೊಳೆಯಿಂದ ಸುಮಾರು ೩೦ ಕಿ.ಮೀ. ದೂರದ "ಕುಟ್ಟ" ಊರ ಬಳಿ ಬಂದಾಗ ೧ ಗಂಟೆ ಆಗಿತ್ತು. ಅಲ್ಲಿ ಇರ್ಪುಗೆ ಹೋಗುವ ದಾರಿ ಕೇಳಿ ಮುಂದೆ ಹೊರಟೆವು. ದಾರಿಯುದ್ದಕ್ಕೂ ಕಾಫೀ ತೋಟ ಸಿಗುತ್ತದೆ. ಅಲ್ಲಿ ಮರದ ನೆರಳಿನಲ್ಲಿ ಸ್ವಲ್ಪ ಹೊತ್ತು ವಿರಮಿಸಿದೆವು.

ಕಾರಿನ ಸ್ಟೀರಿಯೋದಿಂದ ಹಾಡು ಕೇಳಿ ಬರುತ್ತಾ ಇತ್ತು....'ಹಾಡು ಸಂತೋಷಕ್ಕೆ.......!!' ಸಂತು, ಡಿಂಗ ಅಲ್ಲೇ ಹಾಡಿಗೆ ಸ್ಟೆಪ್ ಹಾಕಲು ಶುರು ಮಾಡಿದ್ದರು...!!!


ಅದೇ ಹುರುಪಿನಲ್ಲಿ ಅಲ್ಲಿಂದ ಹೊರಟಾಗ, ಡಿಂಗ ಕಾರಿನ ಗ್ಲಾಸ್ ತೆಗೆದು, ಬಾಗಿಲ ಮೇಲೆ ಕುಳಿತುಕೊಂಡ...!

ಉಳಿದವರೂ ಹಾಗೆ ಕಾರಿನ ಮೇಲೆ ಹತ್ತಿ ಕುಣಿದಾಡಿದರು...ಜೋರಾಗಿ ಹಾಡು ಹೇಳುತ್ತಾ..ಸಾಗಿದ್ದೆವು....ಫುಲ್ ಜೋಶ್...!!

ಸ್ವಲ್ಪ ದೂರ ಹೋಗುವಷ್ಟರಲ್ಲಿ ಕಾರಿನ ಹಿಂಭಾಗದ ಟೈರ್ ಪಂಕ್ಚರ್ ಆಯಿತು...!! ಎಲ್ಲರ ಜೋಶ್ ಕಡಿಮೆ ಆಯಿತು...!!ಟೈರ್ ಬದಲಿಸಿ, ತೆಪ್ಪಗೆ ಕಾರಿನ ಒಳಗಡೆ ಕುಳಿತು ಇರ್ಪುಗೆ ಹೋದಾಗ ಗಂಟೆ ೧.೩೦ ಆಗಿತ್ತು.
ಇರ್ಪು ಜಲಪಾತ : ಇರ್ಪು ಅಥವಾ ಇರುಪ್ಪು ಜಲಪಾತವು ದಕ್ಷಿಣ ಕೊಡಗು, ಬ್ರಹ್ಮಗಿರಿ ಪರ್ವತ ಸರಣಿಯಲ್ಲಿ ಇದೆ.

ಲಕ್ಷ್ಮಣ ತೀರ್ಥ ನದಿಯು ಸುಮಾರು ೫೦ ಮೀ. ಎತ್ತರದಿಂದ ೨ ಸ್ಥರದಲ್ಲಿ ಧುಮುಕುತ್ತದೆ.

ಇಲ್ಲಿಯೇ ಶ್ರೀ ರಾಮನ ದೇವಸ್ಥಾನ ಕೂಡ ಇದೆ. ರಾಮ ಲಕ್ಷ್ಮಣರು ಸೀತೆಯನ್ನು ಹುಡುಕುವ ಸಮಯದಲ್ಲಿ ಈ ಕಾಡಿನ ಭಾಗದಲ್ಲಿ ಸಂಚರಿಸುತ್ತಿದ್ದರು...ರಾಮನ ಬಾಯಾರಿಕೆಯನ್ನು ತಣಿಸಲು ಲಕ್ಷ್ಮಣನು ನೆಲಕ್ಕೆ ಬಾಣವನ್ನು ಹೊಡೆದು ನೀರನ್ನು ಚಿಮ್ಮಿಸಿದನು...ಆಗ ಹುಟ್ಟಿದ ನದಿಯು ಲಕ್ಷ್ಮಣ ತೀರ್ಥವಾಗಿ ಇರ್ಪು ಜಲಪಾತವನ್ನು ಸೃಷ್ಟಿಸಿತೆಂಬ ಪ್ರತೀತಿ ಇದೆ..!


ಮಳೆಗಾಲದಲ್ಲಿ ತುಂಬಿ ಹರಿಯುವ ನದಿಯ ನೀರು ಬೇಸಿಗೆಯಲ್ಲಿ ಕಡಿಮೆ ಇರುತ್ತಾದರೂ, ಸಂಪೂರ್ಣ ಬತ್ತುವುದಿಲ್ಲ. ಸುತ್ತಲೂ ಹಸಿರಿನ ಕಾಡು, ಕಾಫೀ ತೋಟ, ಚಂದದ ಮಲೆನಾಡಿನ ದೃಶ್ಯಗಳು ಒಂದು ದಿನದ ಪ್ರವಾಸಕ್ಕೆ ಯೋಗ್ಯವಾಗಿದೆ. ಇರ್ಪು ಬೆಂಗಳೂರಿಂದ ಸುಮಾರು ೨೮೦ ಕಿ.ಮೀ ದೂರ, ಕೊಡಗಿನ "ಕುಟ್ಟ" ಊರಿಂದ ೭ ಕಿ. ಮೀ ಅಂತರ. ನಾಗರಹೊಳೆಯವರೆಗೂ ರಸ್ತೆ ಉತ್ತಮವಾಗಿದ್ದು, ಅಭಯಾರಣ್ಯದಲ್ಲಿ ಆನೆ, ಕಾಡುಹಂದಿ, ಮಂಗಗಳು, ಜಿಂಕೆ ವೀಕ್ಷಣೆ ಪ್ರಯಾಣಕ್ಕೆ ಉತ್ಸಾಹ ಮತ್ತೆ ಅಷ್ಟೇ ರೋಮಾಂಚನವಾಗಿರುತ್ತೆ...ಕೆಲವರಿಗೆ ಹುಲಿ ಕೂಡ ಸಿಕ್ಕ ಅನುಭವ ಆಗಿದೆ....! ಸಂಜೆ ೬ ಗಂಟೆಯ ನಂತರ ವಾಹನ ಓಡಾಟವನ್ನು ನಿಲ್ಲಿಸಲಾಗುತ್ತದೆ. ಇರ್ಪುನಲ್ಲಿ ಒಂದೇ ಹೋಟೆಲ್ ಇದ್ದು, ಊಟಕ್ಕೆ ಮುಂಚಿತವಾಗಿ ತಿಳಿಸಿರಬೇಕಾಗುತ್ತದೆ..
ಜಲಪಾತದಲ್ಲಿ ಸುಮಾರು ೨ ತಾಸು ಸ್ನಾನ ಮಾಡಿ, ಮೈ -ಮನವನ್ನು ಹಗುರಾಗಿಸಿಕೊಂಡೆವು.

ರುಚಿಯಾದ ಊಟ ಮಾಡಿ ಅಲ್ಲಿಂದ ವಾಪಾಸು ಹೊರಟೆವು. ನಾಗರಹೊಳೆಯಲ್ಲಿ ಟೀ ಕುಡಿದು ಸ್ವಲ್ಪ ಹೊತ್ತು ವಿರಮಿಸಿದೆವು. ವಾಪಸು ಬರುವಾಗ ಕಾಡಾನೆಗಳ ದರ್ಶನ ಭಾಗ್ಯ ಸಿಕ್ಕಿತು.


ಮೈಸೂರ್-ಬೆಂಗಳೂರು ಹೆದ್ದಾರಿಯಲ್ಲಿನ ಧಾಭ ಒಂದರಲ್ಲಿ ರಾತ್ರಿಯ ಊಟ ಮುಗಿಸಿ, ಸುಂದರ ನೆನಪುಗಳೊಂದಿಗೆ ಮನೆಗೆ ವಾಪಸಾದೆವು.

4 comments:

Arvi said...

Bhatta..
it was an awesome trip, chennagi serehididiiya.
keep blogging maga..
you have nice writting skills.
chill maadi
-Arvi

shivu.k said...

ಪ್ರಶಾಂತ ಭಟ್,

ನಿಮ್ಮ ಪ್ರವಾಸ ಕಥನವನ್ನೂ ಓದುವಾಗಲೆಲ್ಲಾ ನನಗೆ ಪ್ರತಿ ನಿಮಿಷ, ಪ್ರತಿ ಪ್ರಯಾಣದ ಅನುಭವವಾಗುತ್ತಿರುತ್ತದೆ...ಚೆನ್ನಾಗಿ ವಿವರಿಸುತ್ತೀರಿ...
ನಾನು ನಾಗರಹೊಳೆಗೆ ಹೋಗಿದ್ದೇನೆ...ಅಲ್ಲಿ ಕ್ಲಿಕ್ಕಿಸಿದ್ದೇನೆ...

ನಿಮ್ಮ ಫೋಟೊಗಳು ಚೆನ್ನಾಗಿರುತ್ತವೆ...

ಧನ್ಯವಾದಗಳು..

ಪಾಚು-ಪ್ರಪಂಚ said...

Hi Arvi,

Thanks for nice comliment.

ಪಾಚು-ಪ್ರಪಂಚ said...

ಶಿವೂ ಅವರೇ,

ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು.

-ಪ್ರಶಾಂತ್ ಭಟ್