Monday, March 9, 2009

ಸಕಲೇಶಪುರ ರೈಲು ಹಳಿಯ ಚಾರಣ - ಭಾಗ ೨

ಬ್ರಿಡ್ಜ್ ನ ಮೇಲೆ ಸಾಗುವ ರೈಲಿನ ಚಿತ್ರ....!! ಆಗ ನಾವು ಬ್ರಿಡ್ಜ್ ನ ಕೆಳಗಿದ್ದೆವು...

ಬಿಸಿಲು ನಿಧಾನವಾಗಿ ಹೆಚ್ಚಾಗುತ್ತಾ ಇತ್ತು. ಆಗಾಗ ನೆರಳಿನಲ್ಲಿ ವಿರಮಿಸಿಕೊಂಡು ನಾವು ಮುಂದೆ ಸಾಗಿದ್ದೆವು. ಚಾರ್ಮಾಡಿ ಘಟ್ಟದ ದ್ರಶ್ಯವಂತೂ ಅಧ್ಬುತವಾಗಿತ್ತು. ಅಲ್ಲಲ್ಲಿ ಸಿಗುತ್ತಿದ್ದ ಸಣ್ಣ ಸಣ್ಣ ಹಳ್ಳದಲ್ಲಿ ಬೇಸಿಗೆಯಲ್ಲೂ ಸಹ ನೀರು ಹರಿಯುತ್ತಿತ್ತು. ಝರಿಯ ನೀರು ತುಂಬಾ ಸಿಹಿಯಾಗಿತ್ತು. ದಾರಿಯುದ್ದಕ್ಕೂ ನೀರು ಸಿಗುವುದು ಮೊದಲೇ ಗೊತ್ತಿದ್ದರೆ ಮಣಭಾರದ ನೀರಿನ ಬಾಟಲ್ ಹೊತ್ತುಕೊಂಡು ಹೋಗುವುದು ತಪ್ಪುತ್ತಿತ್ತು.

ನಮಗೆ ಎದುರಾದದ್ದು ೬ ರೈಲುಗಳು. ಅಲ್ಲಿ ಸಿಗುತ್ತಿದ್ದ ಬ್ರಿಡ್ಜ್ ಗಳು ಒಂದಕ್ಕಿಂತ ಒಂದು ಅದ್ಭುತವಾಗಿತ್ತು. ಅಷ್ಟೇ ಅಪಾಯಕಾರಿ ಕೂಡ...ಸ್ವಲ್ಪ ಅಜಾಗರೂಕತೆ ತೋರಿದರೂ ೧೦೦-೨೦೦ ಅಡಿ ಕೆಳಕ್ಕೆ ಬೀಳುವುದು ಖಂಡಿತ. ಗೂಡ್ಸ್ ರೈಲುಗಳು ಆಗಾಗ ಬರುತ್ತಿರುತ್ತೆ. ಹಾಗಾಗಿ ಬ್ರಿಡ್ಜ್ ದಾಟುವಾಗ ಎಚ್ಚರ ಅಗತ್ಯ...ಸರಸರನೆ ಬ್ರಿಡ್ಜ್ ನ ದಾಟಿ ಬಿಡಬೇಕು..ಸುರಂಗದಲ್ಲಿ ನಡೆಯುವುದು ಸಕತ್ ಥ್ರಿಲ್ಲಿಂಗ್...ಟಾರ್ಚ್ ಇಲ್ಲದೆ ಸುರಂಗದಲ್ಲಿ ನಡೆಯಲು ಸಾಧ್ಯವಿಲ್ಲ... ನಮಗೆ ಸಿಕ್ಕ ಅತೀ ಉದ್ದದ ಸುರಂಗ ಅಂದರೆ ೭೫೦ ಮೀ. ಸುರಂಗದ ಒಳಗೆ ನಮಗೆ ರೈಲು ಸಿಗಲಿಲ್ಲ. ಅಲ್ಲಿ ಬಿಸಿಲಿನ ಧಗೆ ಇರುವುದಿಲ್ಲ, ಹಾಗಾಗಿ ಸ್ವಲ್ಪ ಫಾಸ್ಟ್ ಆಗಿ ನಡೆಯಲು ಸಾಧ್ಯ. ಸುರಂಗದ ಬಾಗಿಲಲ್ಲಿ ನಮ್ ಟೀಮ್. ನಾವು ಸುಮಾರು ೧೨ ಕಿ. ಮೀ. ನಡೆದಿದ್ದೆವು. ಸಂತು ಕಂಬಿಯ ಮಧ್ಯೆ ಕಾಲು ಸಿಕ್ಕಿಸಿಕೊಂಡು, ಕಾಲನ್ನು ಉಳುಕಿಸಿಕೊಂಡು ಬಿಟ್ಟ. ಅಲ್ಲಿಂದ ಅವನಿಗೆ ನಡೆಯಲು ಕಷ್ಟವಾಯಿತು. ಅಂತು ಇಂತೂ ಕಾಲೆಳೆದುಕೊಂಡು ಕುಂಟುತ್ತ ೩ ಗಂಟೆಯ ವರೆಗೆ ನಡೆಸಿದೆವು. ಅವನ ಪರಿಸ್ಥಿತಿ ತುಂಬಾ ಕಷ್ಟವಾಗಿತ್ತು, ಭಾರದ ಬ್ಯಾಗು, ಬಿಸಿಲು, ಒಂದು ಕಾಲು ಕುಂಟು... !! ಜಲ್ಲಿ ಕಲ್ಲಿನ ಮೇಲೆ ನಡೆಯಲು ಕಷ್ಟಪಡ್ತಾ ಇದ್ದ. ನಮ್ಮ ಗುರಿ ಇದ್ದಿದ್ದು "ಎಡಕುಮೇರಿ" ಎಂಬ ಸ್ಟೇಷನ್. ಇನ್ನೂ ಸುಮಾರು ೪ ಕಿ. ಮೀ. ಬಾಕಿ ಇತ್ತು. ಎಡಕುಮೇರಿ ಇಂದ ಸಕಲೇಶಪುರ - ಸುಬ್ರಮಣ್ಯ ಹೈವೇ ಸೇರಲು ಮತ್ತೂ ೪ ಕಿ. ಮೀ ನಡೆಯಬೇಕಿತ್ತು...ಅದನ್ನು ಕೇಳಿ ಸಂತು "ಉಸ್ಸಪ್ಪ" ಎಂದು ಮಲಗಿಬಿಟ್ಟ..! ನಮಗೆ ಸನಿಹದ ದಾರಿ ಹುಡುಕುವುದು ಅನಿವಾರ್ಯವಾಯಿತು.
ಅಲ್ಲಿಯೇ ಕೆಲಸ ಮಾಡುತಿದ್ದ "ಪುಟ್ಟಸ್ವಾಮಿ" ಎಂಬ ಪ್ರಚಂಡ ಆಸಾಮಿಯ ಬಳಿ ಹೈವೇ ಸೇರಲು ಬೇರೆ ದಾರಿ ಇದೆಯೇ ಅಂತ ಕೇಳಿದೆವು. ಆತ ಹತ್ತಿರದಲ್ಲಿಯೇ ಮರ ಸಾಗಿಸುವ ಲಾರಿ ಬರುತ್ತದೆ ಅದರಲ್ಲಿ ಹೋಗಬಹುದೆಂದು ತಿಳಿಸಿದ.. ನಮ್ಮ ಚಾರಣವನ್ನು ಅಲ್ಲಿಯೇ ಮೊಟಕುಗೊಳಿಸಿ ಅವನನ್ನೂ ಕರೆದುಕೊಂಡು ಕಾಡಿನ ದಾರಿಯಲ್ಲಿ ನಡೆದೆವು. ಗುಡ್ಡ ಹತ್ತಲು ಏದುಸಿರು ಬಿಡುತ್ತಾ, ಅಂತೂ ಇಂತೂ ಅವನು ಹೇಳಿದ ಜಾಗಕ್ಕೆ ಬಂದು ಸೇರಿದೆವು. ದಾರಿಯುದ್ದಕ್ಕೂ ಪುಟ್ಟಸ್ವಾಮಿ ವಟಗುಟ್ಟುತ್ತಲೇ ಇದ್ದ...!! ಬಹುಶ: ಮರದ ಬಾಯಿಯಾಗಿದ್ದರೆ ಒಡೆದೆ ಹೋಗುತ್ತಿತ್ತೇನೋ...!! ಪುಟ್ಟಸ್ವಾಮಿ ಫೋಟೋಕ್ಕೆ ಪೋಸು ಕೊಟ್ಟಿದ್ದು ಹೀಗೆ..

ಲಾರಿ ಬರುವುದು ಸ್ವಲ್ಪ ಸಮಯವಾಗುತ್ತದೆಂದು ಹೇಳಿದ. ಅಲ್ಲಿ ಸ್ವಲ್ಪ ಹೊತ್ತು ಮಲಗಿ ನಿದ್ದೆ ಮಾಡಿದೆವು...ಆ ಜಾಗ ತುಂಬಾ ಸುಂದರವಾಗಿತ್ತು... ಸುತ್ತಲೂ ಕಾಡು. ಚಂದದ ಚಾರ್ಮಾಡಿ ಘಟ್ಟ ಪ್ರದೇಶ.. !! ಅಲ್ಲಿಂದ ಮುಂದೆ ನಮ್ಮ ಪ್ರಯಾಣ ಲಾರಿಯಲ್ಲಿ ಸಾಗಿತು. ಲಾರಿಯಲ್ಲಿ "ಹೆತ್ತೂರು" ಎಂಬ ಹಳ್ಳಿಗೆ ತಲುಪಿದೆವು..ಅಲ್ಲಿಂದ ಸಕಲೇಶಪುರಕ್ಕೆ ಹೋಗುವ ಕೊನೇಯ ಬಸ್ಸು ಹೋಗಿಯಾಗಿತ್ತು...ಮಾರುತಿ ವ್ಯಾನ್ ಒಂದನ್ನು ಬಾಡಿಗೆಗೆ ಪಡೆದು "ಕೂಡುರಸ್ತೆ" ಗೆ ಬಂದೆವು.. ಅಲ್ಲಿಂದ ೧೦ ಕಿ. ಮೀ. ಬಸ್ಸಿನಲ್ಲಿ ಪ್ರಯಾಣಿಸಿ ಯಾವುದೂ ಊರಿಗೆ ಬಂದು ಸೇರಿದೆವು. ಅಲ್ಲಿಂದ ಬಾಡಿಗೆ ರಿಕ್ಷ ಒಂದನ್ನು ಪಡೆದು ಸಕಲೇಶಪುರಕ್ಕೆ ಬಂದಾಗ ೮.೩೦. ಸಕಲೇಶಪುರದಲ್ಲಿ ರೂಮ್ ಮಾಡಿ, ಪರೋಟ ಊಟಮಾಡಿ ಮಲಗಿದಾಗ ೯.೩೦. ಕಾಲುಗಳು ಆಗಲೇ ಡಾನ್ಸ್ ಮಾಡುತ್ತಿದ್ದವು... ಯಾರಿಗೂ ನಿಲ್ಲಲೂ ತ್ರಾಣ ಇರಲಿಲ್ಲ..:-) ಎತ್ತಿ ಬಿಸಾಕಿದರೂ ನಮಗೆ ಎಚ್ಚರ ಆಗುತ್ತಿರಲಿಲ್ಲ..ಅಂತಹ ಘಾಡ ನಿದ್ರೆ...!! ಹುರುಪಿನಿಂದ ಶುರುವಾಗಿ, ಸುಸ್ತು, ಪರದಾಟ ದಲ್ಲಿ ನಮ್ಮ ಚಾರಣ ಮುಗಿದಿತ್ತು...!!
ಕಾಲು ಉಳುಕಿಸಿಕೊಂಡ ಸಂತು...

ಮರುದಿನ ಭಾನುವಾರ, ೨೨ ನೆ ತಾರೀಕು. ಸ್ನಾನ, ತಿಂಡಿ ಮುಗಿಸಿದಾಗ ೯ ಗಂಟೆ. ಅಲ್ಲಿಂದ " ಮೂಕನಮನೆ ಅಬ್ಬಿ ಜಲಪಾತ" ಕ್ಕೆ ಬಾಡಿಗೆ ರಿಕ್ಷ ದಲ್ಲಿ ಹೊರಟೆವು. ಸಕಲೇಶಪುರದಿಂದ ಸುಬ್ರಮಣ್ಯ ರಸ್ತೆಯಲ್ಲಿ ೨೦ ಕಿ.ಮೀ ದೂರ ಸಾಗಿದರೆ "ಹೆತ್ತೂರು" ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ೪ ಕಿ. ಮೀ. ದೂರಕ್ಕೆ ಕೂಡುರಸ್ತೆ ಸಿಗುತ್ತದೆ. ಅಲ್ಲಿಂದ ಬಲಕ್ಕೆ ತಿರುಗಿ "ಬ್ಯಾಡರಹಳ್ಳಿ" ಮುಖಾಂತರ ಹೋದರೆ "ಮೂಕನಮನೆ ಅಬ್ಬಿ ಜಲಪಾತ" ಅಂತ ಬೋರ್ಡ್ ಸಿಗುತ್ತದೆ. ಅಲ್ಲಿಂದ ಬಲಕ್ಕೆ ೧ ಕಿ. ಮೀ ಹೋದರೆ ಒಂದು ಮನೆ ಸಿಗುತ್ತದೆ.. ಆ ಮನೆಯ ಪಕ್ಕದಲ್ಲೇ ಇಳಿಜಾರಿನಲ್ಲಿ ಅಬ್ಬಿ ಜಲಪಾತ ಸಿಗುತ್ತದೆ. ಜಲಪಾತದ ತನಕ ವಾಹನದಲ್ಲಿ ಹೋಗಬಹುದು... !

ಜಲಪಾತ ಮಳೆಗಾಲದಲ್ಲಿ ತುಂಬಿ ಹರಿಯುತ್ತಿರುತ್ತದೆ..ಅಂತರ್ಜಾಲದಲ್ಲಿ ಸಿಕ್ಕಿದ ಅಬ್ಬಿ ಜಲಪಾತದ ಮಳೆಗಾಲದ ವೈಭವದ ಫೋಟೋ. ಬೇಸಿಗೆಯಲ್ಲಿ ನೀರಿನ ಹರಿವು ಕಡಿಮೆ ಇತ್ತಾದರೂ ಮೈ-ಮನ ತಣಿಸುವಷ್ಟಿತ್ತು..! ಸುಮಾರು ೧೫ ಅಡಿ ಎತ್ತರದಿಂದ ನೀರು ಬೀಳುತ್ತದೆ. ನೀರಿನಲ್ಲಿ ಅಪಾಯ ಇಲ್ಲ. ದಟ್ಟ ಕಾಡಿನ ನಡುವೆ ಇರುವ ಜಲಪಾತ ಇನ್ನೂ ಪ್ರಪಂಚಕ್ಕೆ ಹೆಚ್ಚಿನ ಪರಿಚಯ ಆಗಿಲ್ಲ...ಪ್ಲಾಸ್ಟಿಕ್ ಹಾಗೂ ಇತರೆ ಮಧ್ಯದ ಬಾಟಲಿಗಳ ಸುಳಿವಿರಲಿಲ್ಲ...ಸ್ವಚ್ಛ ಪರಿಸರದ ಸುಂದರ ಜಲಪಾತ...!!

ನಮಗೆ ಇಲ್ಲೂ ಸಹ ಪರದಾಟ ತಪ್ಪಲಿಲ್ಲ...ದಾರಿಯಲ್ಲಿ ಸಿಕ್ಕವರನ್ನು ಕೇಳುತ್ತಾ, ಜಲಪಾತದ ದಾರಿಯ ಬೋರ್ಡ್ ಏನೂ ಸಿಕ್ಕಿತ್ತು...ಅಲ್ಲಿಂದ ಮುಂದೆ ಮಣ್ಣು ರಸ್ತೆಯಲ್ಲಿ ಸಾಗಿದಾಗ ದಾರಿ ಇದ್ದಕ್ಕಿದ್ದ ಹಾಗೆ ಕೊನೆಗೊಳ್ಳುತ್ತೆ...ಅಲ್ಲಿಯೇ ಹೊಳೆ ಇರುವುದು... ಆದರೆ ನಮಗೆ ಜಲಪಾತ ಸಿಗಲಿಲ್ಲ...ಸುಮಾರು ಹೊತ್ತು ಎಲ್ಲ ಕಡೆ ಹುಡುಕಿದರೂ ಜಲಪಾತದ ಶಬ್ದ ಕೂಡ ಕೇಳಿಸಲಿಲ್ಲ..ಅಲ್ಲಿನ ಮನೆಯಲ್ಲೂ ಯಾರೂ ಇರಲಿಲ್ಲ...ಅಕ್ಕಪಕ್ಕದಲ್ಲಿ ಜನರ ಸುಳಿವೇ ಇಲ್ಲ...!!.ಕೊನೆಗೆ ಅದೇ ನೀರಲ್ಲಿ ಆಟ ಆಡಿ ವಾಪಾಸ್ ಹೋಗುವ ನಿರ್ಧಾರಕ್ಕೆ ಬಂದಿದ್ದೆವು..ಎಲ್ಲರಲ್ಲೂ ನಿರಾಸೆ...:-( ಕೊನೇಯ ಪ್ರಯತ್ನ ಎಂಬಂತೆ ಅರವಿಂದ ಮತ್ತೆ ದೂದ್ ನೀರಿನ ಹರಿವು ಕಡೆ ಸಾಗಿದರು... ಅಲ್ಲಿ ಸಿಕ್ಕಿತ್ತು ಜಲಪಾತ...!! ಜಲಪಾತ ನೋಡಿದ ನಮಗೆ ನಿರಾಸೆ ಆಗಲಿಲ್ಲ. ಸಾಕಷ್ಟು ನೀರು ಇತ್ತು...ಅಚ್ಚ ಬಿಳುಪಿನ ಜಲಧಾರೆ..!




ನೀರಿನ ರಭಸಕ್ಕೆ ಮೈ-ಒಡ್ಡಿ ನಿಂತು ಪುಕ್ಸಟ್ಟೆ ಮಸಾಜ್ ಮಾಡಿಕೊಂಡ್ವಿ...ಹಿಂದಿನ ದಿನದ ನೋವೆಲ್ಲ ಮಾಯವಾಗಿತ್ತು...!! ಸುಮಾರು ೨ ತಾಸು ಅಲ್ಲಿನ ಶಾಂತ ಪರಿಸರದಲ್ಲಿದ್ದು ಅಲ್ಲಿಂದ ಹೊರಟು ಸಕಲೇಶಪುರಕ್ಕೆ ಬಂದು ರಿಕ್ಷ ಡ್ರೈವರ್ ಕೃಪೆ ಇಂದ ಅಪರೂಪದ "ಹಲಸಿನ ಕಾಯಿ ಹುಳಿ" ಊಟ ಮಾಡಿ ಬೆಂಗಳೂರು ಬಸ್ಸನ್ನು ಹಿಡಿದೆವು.
ನಮ್ಮ ಟೀಮ್ ನ ಫೋಟೋ....ನಾನು, ಸಂತು, ಅರವಿಂದ, ಕಿರಣ್ ಮತ್ತು ಸುಹಾಸ್.

Tuesday, March 3, 2009

ಸಕಲೇಶಪುರ ರೈಲು ಹಳಿಯ ಚಾರಣ..ಭಾಗ 1

೨೦೦೯ ನೇ ಇಸವಿಯ ಮೊದಲ ಚಾರಣ...ರೂಪುರೇಷೆ..
ಫೆಬ್ರವರಿ ತಿಂಗಳು ಕಳೆಯುತ್ತಾ ಬಂದಿದ್ದರೂ ನಾವು ಯಾವುದೇ ಪ್ರವಾಸ ಅಥವಾ ಚಾರಣಕ್ಕೆ ಹೋಗಿರಲಿಲ್ಲ. ಎಲ್ಲರೂ ಕೆಲಸದಲ್ಲಿ ಭಾರಿ ಬ್ಯುಸಿ. ಆದರೂ ಚಾರಣಕ್ಕೆ ಹೋಗುವ ತುಡಿತ ದಿನೇ ದಿನೇ ಜಾಸ್ತಿ ಆಗುತ್ತಾ ಇತ್ತು. ಅಸಲು ಮೈ-ಕೈ ನೋಯಿಸಿಕೊಳ್ಳದೆ ತುಂಬಾ ದಿನಗಳೇ ಆಗಿತ್ತು. ಇದ್ದಕ್ಕಿದ್ದ ಹಾಗೆ ಅರವಿಂದ ಸಕಲೇಶಪುರದ ರೈಲು ಹಳಿಯ ಚಾರಣದ ಬಗ್ಗೆ ಹೇಳಿದ. ನಾನು ಇಂಟರ್ನೆಟ್ ನಲ್ಲಿ ಅಲ್ಲಿಯ ಫೋಟೋಗಳನ್ನು ನೋಡಿದ್ದೆ. ಗೂಡ್ಸ್ ರೈಲಿನ ಓಡಾಟ ಜಾಸ್ತಿ ಇದೆ ಎಂದೂ, ಬಿಸಿಲು ಜಾಸ್ತಿ ಹಾಗು ಹಸಿರು ಕಡಿಮೆ ಆಗಿದೆ ಎಂದೂ ಪ್ರಾಥಮಿಕ ವಿಚಾರಣೆ ಇಂದ ಗೊತ್ತಾಯಿತು. ದಿನ ಕಳೆದರೆ ಅಲ್ಲಿಗೆ ಹೋಗುವುದು ಸಾಧ್ಯವೇ ಇಲ್ಲ, ಏನಾದರೂ ಅಗಲಿ, ಹೊಟ್ಟೆ ಕರಗಿಸಲು ಅಲ್ಲಿಗೇ ಚಾರಣಕ್ಕೆ ಹೋಗೋಣ ಎಂದೂ ನಾನು ಹೇಳಿದೆ. ಅದರಂತೆ ಫೆಬ್ರವರಿ ೨೧ ರಾತ್ರಿ ಬೆಂಗಳೂರಿಂದ ಹೊರಡುವುದೆಂದು ತೀರ್ಮಾನಿಸಲಾಯಿತು. ನಾನು ಇಂಟರ್ನೆಟ್ ನಲ್ಲಿ ಜಾಲಾಡಿ ಉಪಯುಕ್ತ ಮಾಹಿತಿಯನ್ನ ಕಲೆ ಹಾಕಿದೆ. ಮಿತ್ರ ವಿನಾಯಕ ಭಟ್ ಅಲ್ಲಿನ ಬಗ್ಗೆ ತುಂಬಾ ವಿವರವಾಗಿ ಮಾಹಿತಿಯನ್ನು ಕೊಟ್ಟ. ಅವನು ೨ ಬಾರಿ ನಡೆದು ಬಂದಿದ್ದ..! ದಿನಾಂಕ ೨೧ ಶುಕ್ರವಾರ ಸಂಜೆ ನಾನು ಆಫೀಸ್ ಬಿಟ್ಟಾಗ ೮ ಗಂಟೆ..! ಉಳಿದವರು ಬೇಗ ಬಂದಿರಬಹುದು ಎಂದು ಊಹಿಸಿದವನಿಗೆ ನಿರಾಸೆ...ಎಲ್ಲರೂ ಲೇಟ್...! ದೂದ್ ಒಬ್ಬ ಬೇಗ ರೆಡಿ ಆಗಿದ್ದು ೯.೩೦ ಕ್ಕೆ ಮೆಜೆಸ್ಟಿಕ್ ಗೆ ಬರುತ್ತೇನೆಂದು ಹೇಳಿದ. ಸಂತು ಕೂಡ ಮೆಜೆಸ್ಟಿಕ್ ಗೆ ಬರುತ್ತೇನೆಂದು ಹೇಳಿದ್ದ. ದೂದ್, ೪ ಮಲಗುವ ಮ್ಯಾಟ್ ಅನ್ನು ಅವನ ಮಿತ್ರರಿಂದ ಎರವಲು ತಂದಿದ್ದ. ಅರವಿಂದ ಮತ್ತು ಬನವಾಸಿ ಊಟ ಮತ್ತು ತಿಂಡಿಯ ವ್ಯವಸ್ಥೆ ಮಾಡಿದರು...ತಲಾ ೩ ಚಪಾತಿ, ಚಟ್ನಿಪುಡಿ, ಜಾಮ್ ಬಾಟಲ್, ೧/೨ ಪೌಂಡು ಬ್ರೆಡ್ಡು, ೨ ಬನ್ನು, ೧ ಸೇಬು ಹಣ್ಣು, ೨ ಕಿತ್ತಳೆ, ೧ ಕೇಕು, ೨ ಬಿಸ್ಕತ್ತು ಪೊಟ್ಟಣ, ಚಿಪ್ಸ್, ಕೋಡುಬಳೆ, ಗ್ಲೂಕೋಸು ನಮ್ಮ ನಮ್ಮ ಬ್ಯಾಗು ಸೇರಿತು...!!ನಾನು, ಬನವಾಸಿ, ಅರವಿಂದ, ಅವನ ಮನೆಯಲ್ಲಿ ಊಟ ಮಾಡಿ ಮೂಡಲಪಾಳ್ಯ ಬಿಟ್ಟಾಗ ೧೧ ಗಂಟೆ..!! ಆಗಲೇ ದೂದ್ ಎಲ್ಲರಿಗೂ ಎರಡೆರಡು ಬಾರಿ ಫೋನ್ ಮಾಡಿದ್ದ...! ಯಾಕೋ ಗೊತ್ತಿಲ್ಲ ಪ್ರತೀ ಪ್ರವಾಸದಲ್ಲೂ ದೂದ್ ಗೆ ಹೀಗಾಗುತ್ತೆ..!! ಸುಮಾರು ೨ ತಾಸು ಮೆಜೆಸ್ಟಿಕ್ ನಲ್ಲಿ ನಮಗಾಗಿ ಕಾಯುತ್ತ ಕುಳಿತಿದ್ದ..ನಾನು ಎದುರು ಸಿಕ್ಕಾಗ ನನಗೆ ಹೇಳಿದ್ದು...." ಇನ್ನು ೫ ನಿಮಿಷ ನೋಡ್ತಾ ಇದ್ದೆ..ಬರಲಿಲ್ಲ ಅಂದಿದ್ದರೆ 'ಎಂಜಾಯ್ ಯುವರ್ ಟ್ರಿಪ್' ಅಂತ ಮೆಸೇಜ್ ಮಾಡಿ ಮನೆಗೆ ಹೋಗ್ತಾ ಇದ್ದೆ.." ಸಿಟ್ಟಿನಿಂದ ಅವನ ಮುಖ ಕೆಂಪಾಗಿತ್ತು...!! ನಾನು, ಬನವಾಸಿ, ಅರವಿಂದ, ಸಂತು, ದೂದ್ ರಾಜಹಂಸ ಬಸ್ಸಿನಲ್ಲಿ ಬೆಂಗಳೂರು ಬಿಟ್ಟಾಗ ೧೨ ಗಂಟೆ. ನಿದ್ದೆ ಮಾಡಿ, ಹಾಸನ ತಲುಪಿದಾಗ ಬೆಳಗಿನ ಜಾವ ೪.೩೦. ಅಲ್ಲಿಂದ ಧರ್ಮಸ್ಥಳಕ್ಕೆ ಹೋಗುವ ಬಸ್ಸಿಗೆ "ದೋಣಿಗಲ್" ಗೆ ರಿಕ್ವೆಸ್ಟ್ ಸ್ಟಾಪ್ ಕೇಳಿ ದೋಣಿಗಲ್ಲು ತಲುಪಿದಾಗ ೬ ಗಂಟೆ ಆಗಿತ್ತು. ಅಲ್ಲಿನ ಮಲೆಯಾಳಿ ಅಂಗಡಿಯಲ್ಲಿ ಟೀ ಕುಡಿದು ನಮ್ಮ ಚಾರಣವನ್ನು ಆರಂಭ ಮಾಡಿದ್ವಿ.


ಮುಂಜಾನೆಯ ತಂಪಾದ ವಾತಾವರಣ ಮನಸ್ಸಿಗೆ ಹಿತವಾಗಿತ್ತು.. ತುಂಬಾ ದಿನದ ನಂತರದ ಚಾರಣ ಎಲ್ಲರಲ್ಲೂ ಉತ್ಸಾಹ ತಂದಿತ್ತು. ರೈಲು ಹಳಿಯನ್ನು ಸೇರಲು ಕಾಫಿ ತೋಟದ ನಡುವೆ ನಡೆದು ಹೋದೆವು. ಮುತ್ತು ಪೋಣಿಸಿದ ಹಾಗೆ ಕಾಣುವ ಕಾಫಿ ಹೂವು ನಮ್ಮ ನಡಿಗೆಯನ್ನ ಸ್ವಲ್ಪ ನಿಧಾನವಾಗಿಸಿತ್ತು.


ಸೂರ್ಯೋದಯದ ದೃಶ್ಯ..



ಸೂರ್ಯೋದಯದ ಸೊಬಗನ್ನು ಸವಿಯುತ್ತ, ಹಸಿರಿನ ಬದಿಯಲ್ಲಿ ಸಾಗುವ ರೈಲು ಹಳಿಯಲ್ಲಿ ನಡೆಯುವುದು ಚಾರಣದ ಮೊದಲ ಅನುಭವ. ಸುತ್ತಲೂ ಇರುವುದು ಚಾರ್ಮಾಡಿ ಘಟ್ಟ ಪ್ರದೇಶ. ಅಲ್ಲಿನ ನಡಿಗೆ ಮನಸ್ಸಿಗೆ ಹುರುಪು ತರುತ್ತದೆ. ಸ್ವಲ್ಪ ದೂರ ನಡೆದಾಗ ಸಿಕ್ಕಿದ್ದು ಮೊದಲ ಬ್ರಿಡ್ಜ್. ಸುಮಾರು ೫೦ ಅಡಿ ಆಳ.

ಅದನ್ನು ದಾಟುತ್ತಿದ್ದ ಹಾಗೆ ರೈಲಿನ ಶಬ್ದ ಕೇಳಿಸಿತು. ಹಿಂತಿರುಗಿ ನೋಡಿದರೆ ರೈಲು ಬ್ರಿಡ್ಜ್ ನ ಇನ್ನೊದು ತುದಿಯಲ್ಲಿ ಬರುತ್ತಾ ಇತ್ತು...!! ನಾವು ಸ್ವಲ್ಪ ನಿಧಾನ ಮಾಡಿದ್ರೆ, ಬ್ರಿಡ್ಜ್ ನ ಮಧ್ಯದಲ್ಲಿ ಇರುತ್ತಿದ್ವಿ..ಕೆಳಗೆ ಹಾರಿದರೆ ೫೦ ಅಡಿ ಆಳ...! ಸಕತ್ ತ್ರಿಲ್ಲಿಂಗು..ಅದನ್ನ ಅನುಭವಿಸಿಯೇ ತೀರಬೇಕು...ಇದು ಚಾರಣದ ಇನ್ನೊಂದು ಅನುಭವ.





ಜಲ್ಲಿ ಕಲ್ಲಿನ ಮಧ್ಯೆ ಭಾರದ ಬ್ಯಾಗನ್ನು ಹೊತ್ತು, ನಮ್ಮ ದೇಹ ತೂಕವನ್ನು ಬ್ಯಾಲೆನ್ಸ್ ಮಾಡಿಕೊಂಡು ನಡೆಯುವುದು ಮತ್ತೊಂದು ಅನುಭವ....! ೫ ಕಿ. ಮೀ. ನಡೆಯುವುದರಲ್ಲೇ ನಾವೆಲ್ಲ ಸುಸ್ತು...! ಅಲ್ಲಿಯವರೆಗೆ ಪ್ರಕೃತಿಯ ಮಧ್ಯೆ ನಮ್ಮನ್ನ ನಾವು ಮರೆತು ಬಿಟ್ಟಿದ್ವಿ...ಹೊಟ್ಟೆ ತನ್ನ ಇರುವಿಕೆಯನ್ನ ಹೇಳಿದಾಗ ನಮಗೆ ಸುಸ್ತಾಗಿದ್ದು ಅರಿವಿಗೆ ಬಂದಿದ್ದು...!ನಾವೆಲ್ಲ ಆಗಲೇ ಹಳಿಯನ್ನು ಬಿಟ್ಟು ಅದರ ಪಕ್ಕದಲ್ಲಿ ನಡೆಯಲು ಜಾಗ ಇದೆಯೋ ಅಂತ ಹುಡುಕುತ್ತ ಇದ್ವಿ..ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಹಳಿಯ ಪಕ್ಕದಲ್ಲೇ ನಡೆದಿದ್ದು...೯.೩೦ ಗಂಟೆಯಾ ಹೊತ್ತಿಗೆ ನಮಗೆ ಒಂದು ಹಳ್ಳ ಸಿಕ್ಕಿತು. ನೀರು ಕೂಡ ತುಂಬಾ ಶುದ್ಧವಾಗಿತ್ತು. ಅಲ್ಲಿಯೇ ಸ್ನಾನ ಮಾಡಿ, ಬೆಳಗಿನ ತಿಂಡಿ ತಿಂದ್ವಿ.

ಕಾಡಿನಿಂದ ಹರಿದು ಬರುವ ತಣ್ಣೀರಿನ ಸ್ನಾನದಿಂದ ಮನಸ್ಸು ಮತ್ತು ದೇಹ ಉಲ್ಲಾಸವಾಯಿತು. ಮುಂದಿನ ನಡಿಗೆಯನ್ನ ಉತ್ಸಾಹದಿಂದಲೇ ಮತ್ತೆ ಶುರುಮಾಡಿದ್ವಿ... ಅಲ್ಲಿಂದ ಮುಂದೆ ಇರುವುದೇ ನಡಿಗೆಯ ನಿಜವಾದ ಸಾಹಸ...!! ಸುಡು ಬಿಸಿಲು..! ಕಾದ ಜಲ್ಲಿ ಕಲ್ಲು..! ಒಟ್ಟು ೧೮ ಬ್ರಿಡ್ಜ್, ೧೭ ಸುರಂಗ..