Tuesday, December 29, 2009

ಸುಂದರ ಸಾಗರ

ಅಂದು ಶುಕ್ರವಾರ ದಿನಾಂಕ ೧೧ ಡಿಸೆಂಬರ್, ನಮ್ಮ ಸಹೋದ್ಯೋಗಿ ಮನೋಜನ ವಿವಾಹ ನಿಮಿತ್ತ ನಾವು ಶಿವಮೊಗ್ಗಕ್ಕೆ ಬಂದಿಳಿದೆವು. ಸಂಭ್ರಮ, ಸಡಗರದ ಮದುವೆಯ ಕಾರ್ಯಕ್ರಮ ಮುಗಿದ ಮೇಲೆ ಸಾಗರದ ಕಡೆ ನಮ್ಮ ಪ್ರಯಾಣ ಬೆಳೆಸಿದೆವು.

ಸಾಗರದ ನಮ್ಮ ಮನೆಯಲ್ಲಿ ಕಾಫೀ ಕುಡಿದು, ಹತ್ತಿರದಲ್ಲೇ ಇರುವ ಕೆಳದಿ ದೇವಸ್ಥಾನ ದರ್ಶನಕ್ಕೆ ಹೋದೆವು. ಸುಮಾರು 500 ವರ್ಷ ಹಳೆಯ ಕಲ್ಲಿನ ಸುಂದರ ದೇವಾಲಯ. "ಕೆಳದಿ" ಇದು ಕೆಳದಿ ಅರಸರ ರಾಜಧಾನಿ. ಶಿವಪ್ಪ ನಾಯಕ ಮತ್ತು ರಾಣಿ ಚೆನ್ನಮ್ಮ ಕೆಳದಿ ಸಾಮ್ರಾಜ್ಯವನ್ನು ಆಳಿದರು. ಕೆಳದಿ ದೇವಾಲಯ ಮುಂಭಾಗ ಮರದ ಬೃಹತ್ ಕಂಬ, ನಾಡಹೆಂಚಿನ ಅರಮನೆಯಂತಿದೆ.

ಸುಂದರ ಹುಲ್ಲು ಹಾಸಿನ ಹೂದೋಟವನ್ನು ದಾಟಿ ಒಳಗೆ ಬಂದರೆ ಕಲ್ಲಿನ ಕೆತ್ತನೆಯ ದೇವಾಲಯ ದೃಶ್ಯ ಲಭ್ಯ.

ರಾಮೇಶ್ವರ, ವೀರಭದ್ರ, ಪಾರ್ವತಿ ದೇವಾಲಯ ಒಳಗೊಂಡ ಕೆಳದಿ ಸಂಕೀರ್ಣವೂ ಹೊಯ್ಸಳ ಮತ್ತು ದ್ರಾವಿಡ ಶೈಲಿಯಲ್ಲಿದೆ. ಪಾರ್ವತಿ ದೇವಸ್ಥಾನದ ಮೇಲ್ಛಾವಣಿಯೂ ಮರದ ಅದ್ಭುತ ಕೆತ್ತನೆಯಿಂದ ಒಳಗೊಂಡಿದೆ.

ಹಾಗೆಯೇ ವೀರಭದ್ರ ದೇವಸ್ಥಾನವು ಕಲ್ಲಿನ ಕೆತ್ತನೆಯಿಂದ ಮನಸೂರೆಗೊಳಿಸುತ್ತದೆ. ಇಲ್ಲಿನ ಇನ್ನೊಂದು ವಿಶೇಷ ಎಂದರೆ, ಒಂದೇ ಕಲ್ಲಿನಲ್ಲಿ ಕೆತ್ತಿದ ಸಂಗೀತ ಕಂಬ. ಈ ಕಂಬವನ್ನು ಮೇಲಿನಿಂದ ಕೆಲವರೆಗೆ ತಟ್ಟಿದಾಗ ಸಪ್ತಸ್ವರ ಬರುತ್ತದೆ. ಪ್ರವಾಸಿಗರು ಕಲ್ಲಿನಲ್ಲಿ ಕುಟ್ಟಿ ಕುಟ್ಟಿ ಈ ಕಂಬ ಶಿಥಿಲವಾಗಿದೆ.

ಸುಮಾರು ೧೦೦ ಎಕರೆ ವಿಸ್ತೀರ್ಣದ ಕೆಳದಿ ಕೆರೆಯು ರಾಣಿ ಚೆನ್ನಮ್ಮಾಜಿ ಕಾಲದಲ್ಲಿ ಕಟ್ಟಲ್ಪಟ್ಟಿದ್ದು. ಮಾಲಿನ್ಯದಿಂದ ಮುಕ್ತವಾಗಿರುವ ಸುಂದರ ಕೆರೆಯ ಪರಿಸರ, ಮನಮೋಹಕ ಸೂರ್ಯಾಸ್ತ ದೃಶ್ಯ, ಸಂಜೆಯ ಸೊಬಗನ್ನು ಇಮ್ಮುಡಿಗೊಳಿಸುತ್ತದೆ.

ಇಕ್ಕೇರಿಯ ಅಘೊರೇಶ್ವರ ದೇವಸ್ಥಾನ :- ಸಾಗರದಿಂದ ೩ ಕೀ ಮೀ ದೂರದಲ್ಲಿರುವ ಇಕ್ಕೇರಿ ಕೇಳದಿ ನಾಯಕರ ರಾಜಧಾನಿ ಆಗಿತ್ತು. ಮಣ್ಣು ಮರದಿಂದ ಕಟ್ಟಲ್ಪಟ್ಟ ಅರಮನೆಯಲ್ಲಿ ಕೆಳದಿ ರಾಜರು ರಾಜ್ಯಭಾರ ಮಾಡಿದರು. ಟಿಪ್ಪು ಸುಲ್ತಾನ್ ನಿಂದ ಆಕ್ರಮಣಕ್ಕೆ ಒಳಗಾದ ಮೇಲೆ ಇಕ್ಕೇರಿಯ ಅರಮನೆ ನಾಶವಾಯಿತು. ಈಗ ಉಳಿದಿರುವುದು ಕಲ್ಲಿನ ಕೆತ್ತನೆಯ ಅಘೊರೇಶ್ವರ ದೇವಾಲಯ.

ಇದು ಕರ್ನಾಟಕದಲ್ಲೇ ಅತೀ ಎತ್ತರ ಮೇಲ್ಛಾವಣಿಯ ಶಿವನ ದೇವಸ್ಥಾನ. ಇಲ್ಲಿನ ಶಿಲ್ಪಕಲೆಯು ಹೊಯ್ಸಳ ಮತ್ತು ವಿಜಯನಗರ ಮಾದರಿಯಲ್ಲಿದೆ. ಒಂದೇ ಕಲ್ಲಿನ ಬೃಹತ್ ನಂದಿ ವಿಗ್ರಹ ಅತೀ ಸುಂದರವಾಗಿದೆ.

ದ್ವಾರಪಾಲಕರು, ಕಂಬದ ಕೆತ್ತನೆ, ವಿಗ್ರಹ ಎಲ್ಲವೂ ಮನಮೋಹಕ. ಎತ್ತರದ ೧೬ ಕೈಗಳ ಶಿವನ ವಿಗ್ರಹ ಇಲ್ಲಿ ಇತ್ತು ಹಾಗೂ ಬಿಜಾಪುರ ಸುಲ್ತಾನರ ಆಕ್ರಮಣದಿಂದ ಆ ಸುಂದರ ವಿಗ್ರಹ ನಾಶವಾಗಿದೆ ಎಂದು ಅರ್ಚಕರು ವಿವರಿಸಿದರು.

ದೇವಸ್ಥಾನದ ಆವರಣದಲ್ಲಿ ಸುಂದರ ಪರಿಸರ, ಸ್ವಚ್ಛತೆಯನ್ನು ಕಾಯ್ದುಕೊಳ್ಳಲಾಗಿದೆ.

ಹೊಳೆಬಾಗಿಲು :- ಸಾಗರದಿಂದ ೩೦ ಕೀ. ಮೀ ದೂರದ ಶರಾವತಿ ಹಿನ್ನೀರಿನ ಪ್ರದೇಶ. ಸಾಗರ ಮತ್ತು ತುಮರಿ ಪ್ರಾಂತ್ಯಕ್ಕೆ ಹೊಳೆಬಾಗಿಲು ಸಂಪರ್ಕ ಕೊಂಡಿ, ಪ್ರವಾಸಿ ತಾಣ.

ಒಂದು ದಡದಿಂದ ಇನ್ನೊಂದು ದಡಕ್ಕೆ ಪ್ರಯಾಣಿಕರನ್ನು, ವಾಹನಗಳನ್ನು ಸಾಗಿಸಲು ಸರಕಾರ ಲಾಂಚ್ನ ವ್ಯವಸ್ಥೆ ಮಾಡಿದೆ. ಒಂದು ಸಲಕ್ಕೆ ಒಂದು ಬಸ್ಸು, ೪-೫ ಕಾರು, ಸುಮಾರು ೧೦೦ ಜನರನ್ನು ಇದು ಸಾಗಿಸುತ್ತದೆ. ೩ ಕೀ. ಮೀ ನೀರಲ್ಲಿ ಲಾಂಚಿನ ಮೇಲೆ ಪ್ರಯಾಣಿಸುವುದು ಖುಷಿಯ ಅನುಭವ.

ಆಚೆಯ ದಡದಿಂದ ಸುಮಾರು ೩ ಕೀ. ಮೀ ದೂರದಲ್ಲಿ ಪ್ರಸಿದ್ಧ ಸಿಗಂದುರೇಶ್ವರಿ ದೇವಾಲಯ ಇದೆ.
ಕಲುಷಿತ ಬೆಂಗಳೂರಿಂದ ದೂರ, ಸುಂದರ ಎರಡು ದಿನಗಳನ್ನು ಕಳೆದ ಖುಷಿ ಸಹೋದ್ಯೋಗಿಗಳಿಗೆ.