ನಿಮಗೂ, ನಿಮ್ಮ ಕುಟುಂಬದವರೆಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.
ಪ್ರಪಂಚ ಎಂಬ ಸಾಗರದಲ್ಲಿ ನೀನೊಂದು ಪುಟ್ಟ ಜೀವ.... ನಿನ್ನನ್ನೇ ನಂಬಿದ ನನ್ನೀ ಜೀವಕ್ಕೆ ನೀನೇ ಪ್ರಪಂಚ...!!!
ಶಕ್ತಿ ದೇವತೆ ಶಾರದಾಂಬೆ, ಭಕ್ತಿ ಪೂರಕ ತೋರಣ ಗಣಪತಿ, ಪರಮ ಪೂಜ್ಯ ಗುರುಗಳ ದರ್ಶನ ಪಡೆದು, ಪ್ರಶಾಂತತೆಯ ತುಂಗೆಯ ತೀರದಲ್ಲಿ ಸ್ವಲ್ಪ ಹೊತ್ತು ವಿರಮಿಸಿದೆವು.
ರಥಬೀದಿಯಲ್ಲಿನ ಹೋಟೆಲೊಂದರಲ್ಲಿ ಬಾಳೆ ಎಲೆಯಲ್ಲಿ ಬಡಿಸಿದ ಇಡ್ಲಿ-ವಡ, ಚಟ್ನಿ ತಿಂದು, ಇನ್ನೊದು ರೌಂಡು ಕಾಫಿ ಕುಡಿದು ಸಿರಿಮನೆ (ಕಿಗ್ಗ) ಜಲಪಾತಕ್ಕೆ ಹೊರಟೆವು.
ಶ್ರಿಂಗೇರಿಯಿಂದ ೮ ಕೀ.ಮೀ. ದೂರದ ಕಿಗ್ಗ ಊರಿನ, ಕಾನನದ ಮಧ್ಯೆ ಸುಂದರ ಸಿರಿಮನೆ ಜಲಪಾತ ಇದೆ. ಸುತ್ತಮುತ್ತಲಿನ ಭಾಗದಲ್ಲಿ ಚೆನ್ನಾಗಿ ಮಳೆಯಾಗಿದ್ದರಿಂದ ಜಲಪಾತ ಮೈದುಂಬಿ, ಸೌಂದರ್ಯ ಇಮ್ಮುಡಿಯಾಗಿತ್ತು.

ಗ್ರಾಮ ಪಂಚಾಯತಿಯವರು ಇಲ್ಲಿ ಪ್ರವೇಶ ಶುಲ್ಕವನ್ನು ವಸೂಲಿ ಮಾಡುತ್ತಾರೆ. ಹಾಗೆಯೇ ಜಲಪಾತಕ್ಕೆ ಹೋಗಲು ಮೆಟ್ಟಿಲಿನ ಅನುಕೂಲ, ವೀಕ್ಷಣಾ ಗೋಪುರ, ಬಟ್ಟೆ ಬದಲಾಯಿಸಲು ಪ್ರತ್ಯೇಕ ಕೊಠಡಿಯ ವ್ಯವಸ್ಥೆಯನ್ನು ಮಾಡಿದ್ದಾರೆ. ಅತೀ ಕಡಿಮೆ ಅಪಾಯದ ಈ ಜಲಪಾತದಲ್ಲಿ ನೀರಿನ ಹತ್ತಿರದವರೆಗೂ ಹೋಗಬಹುದು. ಸಾಕಷ್ಟು ಫೋಟೋ ತೆಗೆದು, ಜಲಪಾತದ ಸೌಂದರ್ಯವನ್ನು ನಾನಾ ವಿಧಗಳಲ್ಲಿ ಕಣ್ತುಂಬಿಕೊಂಡು, ನಾವೆಲ್ಲ ಮಳೆ-ಚಳಿಯನ್ನು ಲೆಕ್ಕಿಸದೆ ನೀರಿಗಿಳಿದೆವು.

ಜಲಪಾತಗಳ ನಿಜವಾದ ಸೌಂದರ್ಯ, ನೀರಿನ ಅಗಾಧತೆ ಗೋಚರಿಸುವುದೇ ಮಳೆಗಾಲದಲ್ಲಿ. ಸುತ್ತಲೂ ಕಾನನದ ಅಚ್ಚ ಬಿಳುಪಿನ ಸಿರಿಮನೆ ಜಲಪಾತ ಮನಸ್ಸನ್ನ ಸೂರೆಗೊಳಿಸುತ್ತದೆ.

ಧುಮ್ಮಿಕ್ಕುತ್ತಿದ್ದ ನೀರಿಗೆ ಬೆನ್ನು ಕೊಟ್ಟು ನಿಂತು, ಉಚಿತ ಮಸಾಜಿನ ಆನಂದ ಅನುಭವಿಸಿದೆವು. ನೀರಲ್ಲಿ ಆಟ ಆಡುತ್ತಿದ್ದವರಿಗೆ ಸಮಯ ಕಳೆದಿದ್ದೆ ಗೊತ್ತಾಗಲಿಲ್ಲ. ಹಸಿವಿನಿಂದ ಕಂಗಾಲಾಗಿದ್ದ ಸುಹಾಸ್ ಆಗಲೇ ತಲೆನೋವು ಎಂದು ಸುಮೋದಲ್ಲಿ ಮಲಗಿಯಾಗಿತ್ತು. ಬೆಳಗಿನ ಉಪಹಾರವು ಅವನಿಗೆ ಸರಿಯಾಗಿರಲಿಲ್ಲ. ೨ ಗಂಟೆಯ ಹೊತ್ತಿಗೆ ಶ್ರಿಂಗೇರಿಗೆ ಬಂದು ಪಂಚೆ ಉಟ್ಟು, ಮಠದಲ್ಲಿ ಪ್ರಸಾದ ಭೋಜನ ಮುಗಿಸಿದೆವು.

ಮರುದಿನದ ಚಾರಣಕ್ಕೆಂದು ಸ್ವಲ್ಪ ಹಣ್ಣು, ಬ್ರೆಡ್, ಒಣ ದ್ರಾಕ್ಷಿ, ಗ್ಲೂಕೋಸ್ ಖರೀದಿಸಿ, ಕಳಸದ ಕಡೆಗೆ ಪ್ರಯಾಣ ಬೆಳೆಸಿದೆವು.

ಶೃಂಗೇರಿ-ಕಳಸದ ಮಾರ್ಗ ಅತ್ಯಂತ ಸುಂದರ. ಭದ್ರ ಮೀಸಲು ಅರಣ್ಯದಲ್ಲಿ ಈ ದಾರಿ ಸಾಗುತ್ತದೆ. ಸುತ್ತಲೂ ದಟ್ಟ ಹಸಿರು ಕಾಡು, ಬಿಟ್ಟೂ ಬಿಡದೆ ಸುರಿಯುವ ಮಳೆ, ಹಸಿರು ಹಾಸಿದಂತೆ ಕಾಣಿಸುವ ಗುಡ್ಡ, ದಾರಿಗುಂಟ ಸಾಗುವ ಭದ್ರ ನದಿ ನಮ್ಮನ್ನ ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ.

ಸೊಗಸಾದ ಊಟವಾದ ಮೇಲೂ ನಾವೆಲ್ಲಾ ಸ್ವಲ್ಪವೂ ಕಣ್ಣು ಮುಚ್ಚದೇ ಪ್ರಕೃತಿಯ ಸೊಬಗನ್ನ ಕಣ್ತುಂಬಿಕೊಳ್ಳುತ್ತಿದ್ದೆವು. ಎಸ್-ಕೆ ಬಾರ್ಡರ್ ನಲ್ಲಿ ಚಹಾ ಕುಡಿಯಲು ನಿಲ್ಲಿಸಿದೆವು. ಅಲ್ಲಿನ ವಾತಾವರಣ ಸಂಪೂರ್ಣ ಮಂಜಿನಿಂದ ಮುಚ್ಚಿತ್ತು.



ಹನುಮನಗುಂಡಿ ಜಲಪಾತವನ್ನು ನೋಡಲಾಗದೆ ನಿರಾಸೆ ಆಗಿದ್ದ ನಮಗೆ, ಮುಂದೆ ರಸ್ತೆ ಅಂಚಿನಲ್ಲಿ ಸಿಕ್ಕ ಜಲಪಾತ ಸ್ವಲ್ಪ ಸಮಾಧಾನ ನೀಡಿತ್ತು.


ಬಾಳೆಕಲ್ಲಿನ "ವಜ್ರ" ಹೋಟೆಲೊಂದರಲ್ಲಿ ಮರುದಿನಕ್ಕೆ ಬೇಕಾಗುವಷ್ಟು ಚಪಾತಿ, ಚಟ್ನಿಪುಡಿ ಕಟ್ಟಿಸಿಕೊಂಡೆವು. ಹಾಗೆಯೇ ಉಂಬಳ ಕಾಟ ನಿಗ್ರಹಿಸಲು ನಶ್ಯ, ತಂಬಾಕಿನ ಎಲೆ, ಸುಣ್ಣ, ಬೇವಿನ ಎಣ್ಣೆ, ಮಳೆಯ ರಕ್ಷಣೆಗೆಂದು ಪ್ಲಾಸ್ಟಿಕ್ ಖರೀದಿಸಿದೆವು. ಸಮಯಕ್ಕೆ ಸರಿಯಾಗಿ ಜಗದೀಶ ತನ್ನ ಜೀಪಿನಲ್ಲಿ ಹಾಜರಾದ. ಬಾಳೆಕಲ್ಲಿಂದ ಮುಂದೆ ಮುಳ್ಳಾಡಿಗೆ ಜೀಪು ಬಿಟ್ಟರೆ ಬೇರೆ ಯಾವುದೇ ವಾಹನ ಹೋಗಲು ಸಾಧ್ಯವೇ ಇಲ್ಲ. ಅಲ್ಲಿನ ರಸ್ತೆಯಲ್ಲಿ ಜೀಪು ಓಡಿಸುವುದು ಒಂದು ಕಲೆಯೇ ಸರಿ. ಇನ್ನೇನು ಮಗುಚಿ ಬಿಟ್ಟಿತು ಅನ್ನುವಷ್ಟು ವಾಲುತಿತ್ತು. ನಮ್ಮಲ್ಲಿ ಯಾರೊಬ್ಬರಿಗೂ ಮಾತು ಹೊರಡುತ್ತಿರಲಿಲ್ಲ. ಅಕ್ಕ ಪಕ್ಕದಲ್ಲಿ ಪ್ರಪಾತ, ಮಧ್ಯೆ ಮಳೆಯಿಂದ ಕೆಸರಾದ ರಸ್ತೆ. ದೊಡ್ಡ ದೊಡ್ಡ ಕಲ್ಲುಗಳು..! ಅಕ್ಷರ ಉಸಿರು ಹಿಡಿದುಕೊಂಡು ಕುಳಿತಿದ್ದೆವು..!
ಮಂಜಪ್ಪ ಗೌಡರ ಆತ್ಮೀಯ ಆಥಿತ್ಯ ನಿಜಕ್ಕೂ ನೆನಪಲ್ಲಿ ಉಳಿಯುವಂತದ್ದು. ಸೊಗಸಾದ ಊಟ, ಬೆಂಕಿಯ ಸುತ್ತಲೂ ಕುಳಿತು ಹರಟೆ, ಗೌಡರ ಮಾತು, ಮತ್ತೊಂದು ಮಧುರವಾದ ಸಂಜೆ ನಮ್ಮದಾಗಿತ್ತು. ಹತ್ತಿರದಲ್ಲೆಲ್ಲೋ ಜಲಪಾತ ಇದೆ ಅಂತ ಅನ್ನಿಸುವಷ್ಟು ಜೋರಾಗಿ ಗೊರಕೆ ಹೊಡೆಯುತ್ತಿದ್ದ ಆನಂದ. ಅದು ಬಿಟ್ಟರೆ ನೆಮ್ಮದಿಯ ನಿದ್ರೆ..!
ಭಾನುವಾರ ೫.೩೦ ಕ್ಕೆ ಎದ್ದು ನಾವು ಚಾರಣಕ್ಕೆ ರೆಡಿ ಆದೆವು. ಗೌಡ್ರು ತಿಂಡಿಗೆಂದು ಅಕ್ಕಿಯ ಕಡಬು, ಕಾಯಿ ಚಟ್ನಿ ಮಾಡಿದ್ದರು. ತಂದಿಟ್ಟಿದ್ದ ಅಷ್ಟೂ ಕಡಬನ್ನು ಖಾಲಿ ಮಾಡಿ, ಒಳ್ಳೆ ಕಾಫಿ ಕುಡಿದು ಮಾರ್ಗದರ್ಶಕ (ಗೈಡ್) ಜೊತೆ ಚಾರಣ ಪ್ರಾರಂಭ ಮಾಡಿದೆವು


ಮನೆಯ ಹಿಂಬದಿಯ ಚಿಕ್ಕ ಗುಡ್ಡವನ್ನು ಹತ್ತಿ ಇಳಿದಾಗಲೇ ಪಶ್ಚಿಮ ಘಟ್ಟಗಳ ಸಾಲು ಸಾಲು ಗೋಚರಿಸುತ್ತಿತ್ತು. ಕಣ್ಣಳತೆ ಉದ್ದಕ್ಕೂ ಎಲ್ಲೆಲ್ಲೊ ಹಸಿರೆ ಹಸಿರು. ಆಗ ತಾನೇ ಚಿಗುರುತಿದ್ದ ಹುಲ್ಲು ಹಾಸು, ಗುಡ್ಡಗಳನ್ನು ಬಾಚಿ ತಬ್ಬಿಕೊಂಡಂತೆ ಅನ್ನಿಸುತಿತ್ತು. ಪ್ರಕೃತಿಯನ್ನ ಅವಳ ಮಡಿಲಿನಲ್ಲಿಯೇ ಅನುಭವಿಸಿ ತೀರಬೇಕು..!! ಶಬ್ದಗಳಲ್ಲಿ ವರ್ಣಿಸಲು ಅಸಾಧ್ಯ.



ಮಳೆಯು ಅಷ್ಟೇನೂ ತೊಂದರೆ ಕೊಡದ ಕಾರಣ ನಾವೆಲ್ಲ ಹುರುಪಿನಿಂದಲೇ ಹಳ್ಳ ಕೊಳ್ಳಗಳನ್ನು ದಾಟಿ, ಚಿಕ್ಕ ಚಿಕ್ಕ ಕಾಡನ್ನು ಬಳಸಿಕೊಂಡು ಮುಂದುವರೆದೆವು. ಅಲ್ಲಲ್ಲಿ ಹಾಳು ಬಿದ್ದ ಮನೆಗಳು, ಗದ್ದೆ ಮಾಡಲು ಹದ ಮಾಡಿದ ಜಾಗ ಎದುರಾಗುತ್ತದೆ. ಕಾಡುಪ್ರಾಣಿಗಳ ವಿಪರೀತ ಕಾಟ, ನಕ್ಸಲರ ಹಾವಳಿ, ಸಂಪರ್ಕಕ್ಕೆ ತುಂಬಾನೇ ದೂರವಾಗಿದ್ದ ಈ ಪ್ರದೇಶಗಳಲ್ಲಿ ವಾಸ ಮಾಡಲು ಬಂದವರು ಹಾಗೆಯೇ ತಿರುಗಿ ಹೋಗಿದ್ದಾರೆ ಎಂದು ನಮ್ಮ ಗೈಡ್ ತಿಳಿಸಿದ. ಅಷ್ಟರ ಮಟ್ಟಿಗೆ ಇಲ್ಲಿನ ಕಾಡು, ಗುಡ್ಡ, ವನ್ಯ ಸಂಪತ್ತು ಸುರಕ್ಷಿತವಾಗಿದೆ.


ಪ್ರಕೃತಿಯಲ್ಲಿ ಮುಳುಗಿ ಹೋಗಿದ್ದ ನಮಗೆ ವಿಪರೀತ ತುರಿಕೆ ಶುರು ಆದಾಗಲೇ ಉಂಬಳದ ನೆನಪಾಗಿದ್ದು. ಆಗ ಕಾಲನ್ನು ನೋಡಿಕೊಂಡಾಗ ಗೊತ್ತಾಗಿದ್ದು ಬರೋಬ್ಬರಿ ೨೦-೩೦ ಉಂಬಳ ಪ್ರತಿಯೊಬ್ಬರ ಕಾಲಿನಲ್ಲಿ. ಅದೆಷ್ಟು ರಕ್ತ ಹೀರಿ ಮಧ್ಯದಲ್ಲೇ ಉದುರಿ ಬಿದ್ದವೋ..? ಒಂದನ್ನು ತೆಗೆಯಲು ನಿಂತರೆ ಮತ್ತೆ ನಾಲ್ಕು ಹತ್ತುತ್ತಿದ್ದವು. ನಶ್ಯ, ತಂಬಾಕು ಹಚ್ಚಿ ನೋಡಿದ್ದಾಯಿತು, ಉಹುಂ.. ಹತ್ತಿದ್ದು ಬೇಗನೆ ಉದುರುತ್ತಿದವೇ ವಿನಃ ಹತ್ತದಂತೆ ತಡೆಯಲು ನಮ್ಮಿಂದಾಗಲಿಲ್ಲ.
ವಿಶೇಷ ಅಂದರೆ ಅಲ್ಲಿಯವನಾದ ನಮ್ಮ ಗೈಡ್ ಗೆ ಅವು ಹತ್ತುತ್ತಿರಲಿಲ್ಲ..! ಅವನ ರಕ್ತ ಅವಕ್ಕೆ ಹಳೆಯದ್ದಾಗಿರಬೇಕು. ಕೊನೆಗೆ ಅದೆಷ್ಟು ಹತ್ತುತ್ತವೋ ಹತ್ತಲಿ ಎಂದು ನಿರ್ಧರಿಸಿ ನಮ್ಮ ಪಾಡಿಗೆ ನಾವು ಚಾರಣ ಮುಂದುವರೆಸಿದೆವು.



ಇಳಿಜಾರಿನಲ್ಲಿ ಇದ್ದ, ತುಂಬಾನೇ ಜಾರುತ್ತಲಿದ್ದ ಕಲ್ಲಿನ ಮೇಲೆ ತಿಳಿಯದೆ ಕಾಲು ಇಟ್ಟ ಕಿರಣ ಪ್ರಪಾತಕ್ಕೆ ಬೀಳುತ್ತಲಿದ್ದ...! ಅವನ ಪುಣ್ಯ..ಮಧ್ಯೆ ಸಿಕ್ಕ ಮರಕ್ಕೆ ಅಡ್ಡಲಾಗಿ ಕಾಲು ಕೊಟ್ಟು, ಒಂದು ಬಂಡೆಯನ್ನು ಗಟ್ಟಿಯಾಗಿ ಹಿಡಿದುಕೊಂಡ. ನಮ್ಮಂತೆ ಚಾರಣಕ್ಕೆ ಬಂದಿದ್ದ ಇನ್ನೊದು ಗುಂಪಿನಲ್ಲಿದ್ದ ಅನುಭವಿಯೊಬ್ಬರು ಅತ್ಯಂತ ಜಾಗರೂಕತೆಯಿಂದ ಅವನನ್ನು ಮೇಲಕ್ಕೆತ್ತಿದರು..ಇಲ್ಲವಾದರೆ ಕುದುರೆಮುಖ ಕರಾಳ ಚಾರಣ ಆಗುತ್ತಿತ್ತು..



ಸತತ ಚಾರಣದ ನಂತರ ಕುದುರೆಮುಖ ಬೆಟ್ಟದ ತುತ್ತ ತುದಿ ತಲುಪಿದಾಗ ಮಧ್ಯಾನ್ನ ೧ ಗಂಟೆ ಆಗಿತ್ತು. ಅಲ್ಲಿನ ಸೊಬಗು ನಮ್ಮ ಎಲ್ಲ ನೋವನ್ನು ಮರೆಮಾಡಿತ್ತು. ಅದೊಂದು ಮರೆಯಲಾಗದ, ಅವಿಸ್ಮರಣೀಯ ಕ್ಷಣ. ಹುಚ್ಚರಂತೆ ಕುಣಿದಾಡಿದೆವು. ಎಲ್ಲರ ಬಾಯಲ್ಲೂ ಒಂದೇ ಉದ್ಘಾರ ''' ಅಬ್ಭಾ..ವಾಹ್..."



ಇಲ್ಲಿ ಮೋಡವು ಕೈಗೆ ಸಿಗುತ್ತಿತ್ತು. ಏನನ್ನೋ ಸಾಧಿಸಿದ ಸಮಾಧಾನ..! ಯಾರೊಬ್ಬರಿಗೂ ಅಲ್ಲಿಂದ ಹೊರಡಲು ಮನಸ್ಸೇ ಇರಲಿಲ್ಲ. 

ಅಲ್ಲಿ ಉಗಮವಾಗಿದ್ದ ಸಣ್ಣ ಝರಿಯ ಬಳಿ ತಂದಿದ್ದ ಚಪಾತಿ, ಹಣ್ಣು ತಿಂದು ಸ್ವಲ್ಪ ಹೊತ್ತು ವಿರಮಿಸಿ ಇಳಿಯಲು ತೊಡಗಿದೆವು.ಮಳೆಗಾಲದಲ್ಲಿ ಚಾರಣದ ಸಮಯ ಹತ್ತುವುದಕ್ಕಿಂತ ಇಳಿಯುವುದೇ ಹೆಚ್ಚು ಕಷ್ಟ. ಇಳಿಯುವಾಗ ಒಬ್ಬಿಬ್ಬರ ಹೊರತಾಗಿ ಉಳಿದವರು ಅಲ್ಲಲ್ಲಿ ಬೀಳುತ್ತಲೇ ಇದ್ದರು..! ನಾವು ಕ್ರಮಿಸಿದ ಒಟ್ಟೂ ದೂರ ೨೨ ಕಿ,ಮೀ. ತೆಗೆದುಕೊಂಡ ಸಮಯ ೧೧ ಗಂಟೆಗಳು. ನಡೆದು ನಡೆದು ನಾವೆಷ್ಟು ಸುಸ್ತಾಗಿದ್ದೆವೆಂದರೆ, ಮನೆ ಬಂದು ನಾವು ನಿಂತರೂ ನಮ್ಮ ಕಾಲು ನಿಲ್ಲುತ್ತಲಿರಲಿಲ್ಲ...


ಗೌಡರ ಮನೆಯಲ್ಲಿ ಬಿಸಿನೀರಿನ ಸ್ನಾನದ ನಂತರ ಸ್ವಲ್ಪ ಸಮಾಧಾನ ಎನಿಸಿತು. ಗೌಡರ ಸಹಕಾರಕ್ಕೆ ಆತ್ಮೀಯವಾಗಿ ಧನ್ಯವಾದ ತಿಳಿಸಿ, ಅಲ್ಲಿಂದ ಮತ್ತೆ ಜೀಪಿನಲ್ಲಿ ಬಾಳೆಕಲ್ಲಿಗೆ ಬಂದು, ಸುಮೋದಲ್ಲಿ ಬೆಂಗಳೂರಿನತ್ತ ಹೊರಟೆವು.

ಚಾರಣಿಗರು - (ನಿಂತವರು - ಎಡದಿಂದ ಬಲಕ್ಕೆ) ಆನಂದ, ಕಿರಣ್, ಅರವಿಂದ, ನಾನು, ಸುಹಾಸ್.
(ಕುಳಿತವರು) ಆದರ್ಶ, ಪ್ರಮೋದ, ಅಭಿರಾಮ್.
ತುಂಬಾ ದಿನಗಳ ನಂತರ ಇಂಥದ್ದೊಂದು ಸುಂದರ ಚಾರಣಕ್ಕೆ ಹೋದ ಖುಷಿ ಮನಸ್ಸಲ್ಲಿ ಮೂಡಿತು...
ಗೋಕಾಕ್ ಜಲಪಾತ ಪಟ್ಟಣದಿಂದ ೭ ಕಿ.ಮೀ ದೂರದಲ್ಲಿದೆ. ನೀರಿನ ಭೋರ್ಗರೆತ ದೂರದವರೆಗೂ ಕೇಳಿಸುತ್ತಿರುತ್ತದೆ. ಈ ಜಲಪಾತವನ್ನು " ಕರ್ನಾಟಕದ ನಯಾಗಾರ" ಎಂತಲೂ ಬ್ರಿಟಿಷರು ಕರೆದಿದ್ದರು.
ಘಟಪ್ರಭಾ ನದಿಯು ೧೮೦ ಮೀ ಎತ್ತರದಿಂದ ಭೋರ್ಗರೆಯುತ್ತಾ ಆಳಕ್ಕೆ ಧುಮುಕುವ ನೋಟವೇ ಭಯಂಕರ..ಮಳೆಗಾಲದ ಕೆಂಪು ನೀರು ಜಲಪಾತದ ರೌದ್ರವನ್ನು ಇನ್ನು ಹೆಚ್ಚಿಸಿತ್ತು.
ತೂಗು ಸೇತುವೆ ಇಲ್ಲಿನ ಪ್ರಮುಖ ಆಕರ್ಷಣೆ. ಊರ ನಾಗರಿಕರಿಗೆ ಅನುಕೂಲ ಆಗಲೆಂದು ಮರ ಮತ್ತು ಕಬ್ಬಿಣದಿಂದ ನಿರ್ಮಾಣವಾದ ಈ ಸೇತುವೆಯ ಮೇಲೆ ನಡೆದುಕೊಂಡು ಹೋಗುವುದು ಅದ್ಭುತ ಅನುಭವ. ಕಾಲ ಕೆಳಗೆ ಘಟಪ್ರಭ ನದಿಯ ರಭಸದ ಅನುಭವ.ತೂಗು ಸೇತುವೆ ಮೇಲೆ ನಡೆಯುವಾಗ ಕುಲುಕಾಟ ಶುರು ಆಗುತ್ತದೆ, ಬಹಳ ಜನ ಪ್ರವಾಸಿಗರು ಅರ್ಧಕ್ಕೇ ವಾಪಾಸು ಹೋಗುತ್ತಾರೆ..ಅಷ್ಟು ಹೆದರಿಕೆ ಆಗುತ್ತದೆ...!!
ಈ ಜಲಪಾತವನ್ನು ಎಲ್ಲ ಬದಿಯಲ್ಲೂ ನಿಂತು ಸೌಂದರ್ಯವನ್ನು ಸವಿಯಬಹುದು. ಅಗಾಧ ಪ್ರಮಾಣದ ನೀರು ಒಮ್ಮೆಲೇ ಧುಮ್ಮಿಕ್ಕುವುದು ನಿಜಕ್ಕೂ ರೋಮಾಂಚನ. ವಿಶಾಲವಾಗಿ ಹರಡಿರುವ, ಒಮ್ಮೆಲೇ ಭೋರ್ಗರೆಯುತ್ತಾ ಎದೆ ನಡುಗಿಸುವ ಗೋಕಾಕ ನಿಜಕ್ಕೂ ಗಂಡು ಮೆಟ್ಟಿದ ನಾಡಿನ ಜಲಪಾತ...!! ಜೂನ್ ನಿಂದ ಅಕ್ಟೋಬರ್ ತಿಂಗಳ ಕಾಲ ಗೋಕಾಕ ಜಲಪಾತದ ವೀಕ್ಷಣೆಗೆ ಉತ್ತಮ ಸಮಯ. ಜಲಪಾತದ ತಳದಲ್ಲಿ ಜಲ-ವಿದ್ಯುತ್ ಸ್ಥಾವರ ಇದೆ. ಹಾಗೆಯೇ ಗೋಕಾಕ ಬಟ್ಟೆ ಮಿಲ್ಲು ಕೂಡ ನೋಡಬೇಕಾದ ಕಟ್ಟಡ. ಇದನ್ನು ೧೮೮೫ ರಲ್ಲಿ ಬ್ರಿಟಿಷರು ಪ್ರಾರಂಭಿಸಿದರು.
ಗೊಡಚಿನಮಲ್ಕಿ ಜಲಪಾತ - ಗೋಕಾಕ ದಿಂದ ಸುಮಾರು 2೦ ಕಿ.ಮೀ ಮಾರ್ಕಂಡೇಯ ನದಿಯು ಈ ಸುಂದರ ಜಲಪಾತವನ್ನು ಸೃಷ್ಟಿಸಿದೆ. ಎಲ್ಲ ಜಲಪಾತದಂತೆ ಇಲ್ಲಿ ಒಮ್ಮೆಲೇ ನೀರು ಆಳಕ್ಕೆ ಬೀಳುವುದಿಲ್ಲ. ಹಂತ ಹಂತವಾಗಿ ವಿವಿಧ ಸ್ಥರಗಳಲ್ಲಿ ನದಿಯು ಹರಿದು, ಸುಂದರ ಜಲಧಾರೆಯನ್ನು ಸೃಷ್ಟಿಸಿದೆ. ಇಲ್ಲಿ ನೀರಿನ ಹತ್ತಿರದವರೆಗೂ ಹೋಗಬಹುದು.
ಊರಿನಲ್ಲಿ ವಾಹನವನ್ನು ನಿಲ್ಲಿಸಿ, ಸುಮಾರು ೨ ಕಿ.ಮೀ ನಡೆಯಬೇಕು. ಹಸಿರು ಹೊಲ ಗದ್ದೆಗಳು ನಮ್ಮನ್ನ ಸ್ವಾಗತಿಸುತ್ತವೆ.
ಮಳೆ ಬಂದಾಗ ಕಪ್ಪು ಮಣ್ಣಿನಲ್ಲಿ ನಡೆಯುವುದು ಸ್ವಲ್ಪ ಕಷ್ಟ...ಜಿಡ್ಡು ಮಣ್ಣು, ಬೇಗನೆ ಕಾಲು ಜಾರುತ್ತದೆ. ಮೊದಲು ೫೦ ಮೀ ನಂತರ ೨೫ ಮೀ ಎತ್ತರದಿಂದ ಇಳಿಜಾರಿನಂತೆ ಹರಿವ ನದಿಯು ಕೆಂಪನೆಯ ಜಲಪಾತದ ಸೊಬಗನ್ನು ಉಣಿಸುತ್ತದೆ.
ಮಂಟಪದಂತೆ ಇರುವ ಕಲ್ಲಿನ ಮೇಲೆ ಕುಳಿತು ಸುಂದರ ಜಲಪಾತವನ್ನು ವೀಕ್ಷಿಸಬಹುದು. ತನ್ನದೇ ವಿಶಿಷ್ಟ ಸೌಂದರ್ಯವನ್ನು ಹೊಂದಿರುವ ಈ ಜಲಪಾತದ ಬಳಿ ಹೆಚ್ಚಿನ ಸಮಯ ಕಳೆದೆವು..!
ಹಿಡಕಲ್ ಡ್ಯಾಮ್ : ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಹಿಡಕಲ್ ಡ್ಯಾಮ್ ಶ್ರೀಯುತ ಜೀ. ಎಸ್ ಬಾಳೆಕುಂದ್ರಿ ಅವರ ಕನಸಿನ ಕೂಸು. ಸುಮಾರು ೧೩೪೦೦ ಹೆಕ್ಟೇರು ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸಿರುವ ಈ ಜಲಾಶಯವನ್ನು ೧೯೭೭ ರಲ್ಲಿ ಅಂದಾಜು ೯.೪೭ ಕೋಟಿ ವೆಚ್ಚದಲ್ಲಿ ಕಟ್ಟಲಾಗಿದೆ. ಸಧ್ಯಕ್ಕೆ ಭದ್ರತೆಯ ಕಾರಣ ಪ್ರವಾಸಿಗರ ವೀಕ್ಷಣೆಗೆ ಅನುಮತಿ ನೀಡುತ್ತಿಲ್ಲ.
ಹಿಡಕಲ್ ನಿಂದ ಹೊರಟು, ಗೋಕಾಕ್ ತಲುಪಿದಾಗ ಸಂಜೆ ೫ ಗಂಟೆ ಆಗಿತ್ತು. ಮಧ್ಯಾನ್ನ ಊಟ ಎಲ್ಲೂ ದೊರೆಯದ ಕಾರಣ ಗೋಕಾಕ್ ನಲ್ಲಿ ತಿಂಡಿ ತಿಂದು ಬೆಳಗಾವಿಗೆ ಬಸ್ ಹಿಡಿದೆವು. ದಿನಪೂರ್ತಿ ನಮಗೆ ಮಳೆಯ ಅಡಚಣೆ ಉಂಟಾಗಲಿಲ್ಲ. ಬೆಳಗಾವಿ ತಲುಪಿದಾಗ ಮಳೆಯು ರಚ್ಚೆ ಹಿಡಿದಂತೆ ಸುರಿಯುತ್ತಿತ್ತು. ಸಂತೋಷ್ ಬಾವ ಮೊದಲೇ ಸನ್ಮಾನ್ ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿದ್ದರು. ಅದಿಲ್ಲದಿದ್ದರೆ ನಾವು ಬಹಳ ಪರದಾಡಬೇಕಾಗಿತ್ತು. ಅದೇ ಹೋಟೆಲಿನಲ್ಲಿ ರಾತ್ರಿಯ ಊಟ ಮುಗಿಸಿ ಬೇಗನೆ ನಿದ್ರೆಗೆ ಜಾರಿದೆವು.
ಭಾನುವಾರ ಮುಂಜಾನೆ ೬.೨೦ ಕ್ಕೆ ಡ್ರೈವರ್ ಅರುಣ ಸಂತೋಷ್ ಬಾವನ ಸಾಂಟ್ರೋ ಕಾರಿನಲ್ಲಿ ಹಾಜರ್. ನಾವು ಬೇಗ ಬೇಗನೆ ರೆಡಿ ಆಗಿ, ಹೋಟೆಲ್ ಗ್ರಾಂಡ್ ನಲ್ಲಿ ಇಡ್ಲಿ-ವಡ ತಿಂದು ಅಂಬೋಲಿ ಕಡೆಗೆ ಹೊರಟೆವು.ಆಗಲೇ ಮಳೆಯಿಂದಾಗಿ ವಾತಾವರಣ ಮುಸುಕು ಮುಸುಕಾಗಿತ್ತು. ಹಿತವಾದ ಛಳಿ, ಮಂಜು ನಮಗೆ ಎಲ್ಲಿಲ್ಲದ ಉತ್ಸಾಹವನ್ನು ತಂದಿತ್ತು. ಬೆಳಗಾವಿ ಅಂದರೆ ಬಯಲುಸೀಮೆ ಅಂತಾನೆ ಅಂದುಕೊಂಡಿದ್ದ ನಮಗೆ ಬೇರೆಯದೇ ಪ್ರಪಂಚವನ್ನು ತೆರೆದಿತ್ತು. ಇದು ಅಪ್ಪಟ ಮಲೆನಾಡಿನ ಸೆರಗಿನ ಊರು. ಹಚ್ಚ ಹಸಿರಿನ ಮರಗಳು, ಕಬ್ಬು, ಭತ್ತದ ಗದ್ದೆ, ಬಿಡದೆ ಸುರಿಯುತ್ತಿದ್ದ ಮಳೆ..ಆಹಾ ಪ್ರವಾಸಕ್ಕೆ ಹೇಳಿಮಾಡಿಸಿದ ಊರು.. ಸಿಂಪ್ಲಿ ಸೂಪರ್..!
ಅನುಭವಿ ಅರುಣ ನಮ್ಮನ್ನು ಮೊದಲು ಕರೆದೊಯ್ದಿದ್ದು " ನನ್ಗರ್ತ ಜಲಪಾತಕ್ಕೆ.." ಹಿಂದಿನ ದಿನ ಕೆಂಪು ನೀರನ್ನು ಕಂಡಿದ್ದ ನಮಗೆ ಇಂದು ಸ್ವಚ್ಛ ಗುಡ್ಡಗಾಡಿನ ಮಳೆಯ ನೀರು.
ಕಡಿದಾದ ಚಿಕ್ಕ ಸುರಂಗದ ಮಧ್ಯೆ ಅತ್ಯಂತ ರಭಸವಾಗಿ ಧುಮ್ಮಿಕ್ಕುವ ಈ ಜಲಪಾತ ನಾನು ನೋಡಿದ ಈ ವರೆಗಿನ ಎಲ್ಲ ಜಲಪಾತಗಳಿಗಿಂತ ವಿಭಿನ್ನ. ಇದರ ಆಳ ಇದುವರೆಗೂ ತಿಳಿದಿಲ್ಲ. ಮೇಲ್ನೋಟಕ್ಕೆ ಸಹಜವಾಗಿಯೇ ಕಾಣುವ ಕಂದಕ, ಹತ್ತಿರದಿಂದ ಬಗ್ಗಿ ನೋಡಿದಾಗಲೇ ಉಸಿರು ನಿಲ್ಲುವಂತಾಗಿದ್ದು. ಇದರ ಸಂಪೂರ್ಣ ಚಿತ್ರವನ್ನು ತೆಗೆಯಲು ಸಾಧ್ಯವಾಗಲಿಲ್ಲ..!
ಹಿರಣ್ಯಕೆಷಿ : ಮಾರ್ಕಂಡೇಯ ನದಿಯ ಉಗಮ ಸ್ಥಾನ. ಚಿಕ್ಕದಾದ ಗುಹೆಯ ಒಳಗಿಂದ ಉದ್ಭವಿಸಿ ಬರುವ ಮಾರ್ಕಂಡೇಯ ನದಿಯು ಮುಂದೆ ಗೊಡಚಿನಮಲ್ಕಿ ಜಲಪಾತವನ್ನು ಸೃಷ್ಟಿಸುತ್ತದೆ.
ಶಿವ ಪಾರ್ವತಿಯರ ಪ್ರತಿಮೆಯ ಸುತ್ತಲೂ ಸದಾ ಕಾಲ ನೀರು ಹರಿಯುತ್ತಿರುತ್ತದೆ. ವಾಹನವನ್ನು ನಿಲ್ಲಿಸಿ ೧/೨ ಕಿ,ಮೀ ಗುಡ್ಡದ ಮಧ್ಯೆ ನಡೆಯಬೇಕು. ಪ್ರವಾಸಿಗರಿಗೆ ಅನುಕೂಲಕ್ಕಾಗಿ ಅಚ್ಚುಕಟ್ಟಾದ ಮೆಟ್ಟಿಲು ವ್ಯವಸ್ಥೆ ಇದೆ.
ಅಂಬೋಲಿ: ಬೆಳಗಾವಿ ಗೋವಾ ನಡುವಿನ ಸಹ್ಯಾದ್ರಿ ಘಟ್ಟದ ರಸ್ತೆ ಮಧ್ಯದಲ್ಲಿ ಸಿಗುವ ಸುಂದರ ಜಲಪಾತ. ಅಂಬೋಲಿ ಘಟ್ಟದ ದಾರಿಯುದ್ದಕ್ಕೂ ಚಿಕ್ಕಪುಟ್ಟ, ಸುಂದರ ಜಲಪಾತಗಳು. ವ್ಯೂ ಪಾಯಿಂಟ್, ಎಲ್ಲವೂ ಪ್ರಕೃತಿಯ ಸುಂದರ ದೃಶ್ಯಗಳು.
ಬೆಳಗಾವಿಯಿಂದ ೮೦ ಕಿ.ಮೀ ದೂರ. ಇದಕ್ಕೆ ಗ್ರೀನ್ ವ್ಯಾಲಿ ಅಂತಲೇ ಹೆಸರು. ರಸ್ತೆಯ ಪಕ್ಕದಲ್ಲಿಯೇ ಇರುವ ಅಂಬೋಲಿ ಜಲಪಾತವು ಅತ್ಯಂತ ಸುಂದರವಾಗಿದೆ. ಬಿಳುಪಿನ ಜಲಧಾರೆ ನಯನ ಮನೋಹರ. ೨೦೦ ಅಡಿ ಎತ್ತರದಿಂದ ಕವಲಾಗಿ ಧುಮ್ಮಿಕ್ಕುವ ಈ ಜಲಪಾತ ಪ್ರವಾಸಿಗರಿಗೆ ಹಬ್ಬ.
ಮಳೆಯ ಪ್ರಮಾಣ ಜಾಸ್ತಿ ಇದ್ದರಿಂದ ಪ್ರವಾಸಿಗರು ಕೂಡ ಹೆಚ್ಚಿದ್ದರು. ಜಲಪಾತದ ಅಂದವನ್ನು ಎಷ್ಟು ಹೊತ್ತು ನೋಡಿದರೂ ತೃಪ್ತಿ ಆಗುತ್ತಿರಲಿಲ್ಲ..ಹಾಗೆ ಸುಮ್ಮನೆ ನೋಡುತ್ತಲೇ ಇದ್ದೆವು. ಹೆಚ್ಚಿನ ಮಳೆ ಮತ್ತು ಮಂಜು ಮುಸುಕಿದ್ದರಿಂದ ಹೆಚ್ಚಿನ ಚಿತ್ರಗಳನ್ನು ತೆಗೆಯಲಾಗಲಿಲ್ಲ. ಮೈ-ಮನ ತೃಪ್ತಿ ಆಗುವಷ್ಟು ಕಾಲ ಸ್ನಾನ ಮಾಡಿ, ಜಲಪಾತದ ಬುಡದವರೆಗೆ ಹೋಗಿ ಅದರ ಸೌಂದರ್ಯವನ್ನು ಕಣ್ತುಂಬಿಕೊಂಡೆವು.
ಮುಂದೆ ವ್ಯೂ ಪಾಯಿಂಟ್ ನಲ್ಲಿ ನಿಂತು ನೋಡಿದರೆ ಸುತ್ತ ಮುತ್ತ ಜಲಪಾತಗಳೇ ಕಾಣಿಸುತಿದ್ದವು. ಇಂತಹ ಒಂದು ಅದ್ಭುತ ದೃಶ್ಯವನ್ನು ನಾನು ನೋಡಿರಲಿಲ್ಲ. ಮೋಡಗಳ ಅಡಚಣೆ ಇಲ್ಲದಿದ್ದರೆ ಅದ್ಭುತವಾದ ವೀಕ್ಷಣೆ ಸಾಧ್ಯ. ಮನಸ್ಸಿಗೆ ಅಂತ್ಯಂತ ಖುಷಿ ಕೊಡುವ ತಾಣ.ಹಸಿರಿನ ದಟ್ಟ ಕಾನನ, ಬೆಳ್ಳಿ ಗೆರೆಯಂತೆ ಕಾಣಿಸುವ ಜಲಧಾರೆಗಳು, ಹಿತವಾದ ಮಳೆ, ಸ್ವರ್ಗವೇನೂ ಅಂತ ಅನ್ನಿಸುತ್ತಿತ್ತು.
ಸಾವಂತವಾಡಿ: ಸಾವಂತವಾಡಿ ಭೋಂಸಲೇ ಅರಸರ ರಾಜಧಾನಿ. ಸುಂದರ ಕೆರೆ, ಕೋಟೆ, ರಾಜಮಹಲ್, ದರ್ಬಾರ್ ಹಾಲ್, ಅರಮನೆ ಇನ್ನೂ ರಾಜಮನೆತನದ ಜೀವಂತಿಕೆಯನ್ನು ಉಳಿಸಿವೆ. ಮರದ ಗೊಂಬೆಗಳು, ಸುಂದರ ಕೆತ್ತನೆಗಳು, ಗಂಜಿಫಾ (ಮೊಘಲ್ ) ಮಾದರಿಯ ಚಿತ್ರಕಲೆ ಇಲ್ಲಿನ ವಿಶೇಷ.
ಚಿತ್ರಕಲೆಯನ್ನು ರಾಜಮಾತೆ ಸತ್ವಶೀಲ ದೇವಿ ಇಂದಿಗೂ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಅರಮನೆಯ ಸಂಗ್ರಹಾಲಯದಲ್ಲಿ ರಾಜಮನೆತನದ ಚಿತ್ರಪಟಗಳು, ಆಯುಧ, ನಿತ್ಯೋಪಯೋಗಿ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಸಾವಂತವಾಡಿಯಲ್ಲಿ ಊಟ ಮುಗಿಸಿ, ವಾಪಾಸು ಬೆಳಗಾವಿಯತ್ತ ಹೊರಟೆವು. ಹೆಚ್ಚಿನ ಪ್ರವಾಸಿಗರು, ವಾಹನ ದಟ್ಟಣೆಯಿಂದಾಗಿ ಬೆಳಗಾವಿ ತಲುಪಿದಾಗ ಸಂಜೆ ೬ ಗಂಟೆ ಆಗಿತ್ತು. ನನ್ನ ಅನುಭವದ ಪ್ರಕಾರ, ಅಂಬೋಲಿಗೆ ವಾರದ ದಿನಗಳಂದು ಹೋಗುವುದು ಉತ್ತಮ. ಅಥವಾ ಮುಂಜಾನೆ ಬೇಗನೆ ಅಲ್ಲಿಗೆ ತಲುಪುವುದು ಉತ್ತಮ. ಅದಿಲ್ಲದಿದ್ದರೆ ವಾರದ ಕೊನೆಯ ದಿನಗಳು, ರಜಾ ದಿನಗಳಂದು ವಿಪರೀತ ಜನ ದಟ್ಟನೆ, ವಾಹನ ದಟ್ಟನೆ ಇರುತ್ತದೆ. ಜಲಪಾತದ ತುಂಬೆಲ್ಲ ಪ್ರವಾಸಿಗರು ಗಿಜಿಗುಟ್ಟುತ್ತಿರುತ್ತಾರೆ. ನಮಗಂತೂ ವಾಪಾಸು ಬರುವಾಗ ಸಾಕಾಗಿ ಹೋಗಿತ್ತು...!!
ಸಂಜೆ ಸಂತೋಷ್ ಬಾವನ ಮನೆಯಲ್ಲಿ ಕರದಂಟು ಸವಿದು, ಚಹಾ ಕುಡಿದು, ಅವರ ಸಹಕಾರಕ್ಕಾಗಿ ಥ್ಯಾಂಕ್ಸ್ ಹೇಳಿ, ಬೆಂಗಳೂರಿಗೆ ಹೋಗುವ VRL ಬಸ್ಸಿನಲ್ಲಿ ವಾಪಾಸು ಹೊರಟೆವು.
ಕೃಷ್ಣಶಿಲೆಯ ಬೃಹದಾಕಾರದ ನಂದಿಯು ಒಂದೇ ಕಲ್ಲಿನಿಂದ ಕೆತ್ತಲ್ಪಟ್ಟಿದ್ದು. ವಾಡಿಕೆಯಂತೆ ಶಿವನ ದೇವಸ್ಥಾನದ ಮುಂದೆ ನಂದಿಯನ್ನ ಪ್ರತಿಸ್ಥಾಪಿಸಲಾಗಿರುತ್ತದೆ. ಆದರೆ ಇಲ್ಲಿ ಶಿವನ ವಿಗ್ರಹ ಇಲ್ಲ..! ಶಿವ ಮತ್ತು ಪಾರ್ವತಿಯ ಮಧ್ಯೆ ಜಗಳ ನಡೆದು, ಶಿವನು ಮುನಿಸಿಕೊಂಡು ಯಾರ ಕಣ್ಣಿಗೂ ಕಾಣಿಸ ಕೂಡದೆಂದು ಮಲೆ-ಮಹದೇಶ್ವರ ಬೆಟ್ಟಗಳ ಮಧ್ಯೆ ವಾಸವಾಗುತ್ತಾನೆ. ಶಿವನನ್ನು ಹುಡುಕುವ ಸಲುವಾಗಿ ಪಾರ್ವತಿಯು ಚಾಮುಂಡಿ ಬೆಟ್ಟಕ್ಕೆ ಬಂದು ಹುಡುಕುತ್ತಾಳೆ, ಅದರೂ ಶಿವನು ಕಾಣಿಸುವುದಿಲ್ಲ. ನಂದಿಯು ಅರ್ಧ ಬೆಟ್ಟವನ್ನು ಹತ್ತಿ ಅಲ್ಲಿಯೇ ವಿರಮಿಸುತ್ತಾನೆ ಎಂಬ ಪುರಾಣ ಕಥೆಯು ಪ್ರಚಲಿತವಾಗಿದೆ.
ನಂದಿಯ ಸುಂದರ ವಿಗ್ರಹವು ೪.೭ ಮೀ ಎತ್ತರ ಮತ್ತು ೬.೧೦ ಮೀ ಉದ್ದ ಇದೆ. ಶಿವರಾತ್ರಿ ಮತ್ತು ಮಸ್ತಕಾಭಿಷೇಕ ದಿನಗಳಲ್ಲಿ ವಿಶೇಷ ಪೂಜೆ ಇರುತ್ತದೆ.
ನಂದಿ ವಿಗ್ರಹದ ಬಳಿ ಸಿಕ್ಕಿದ ಈ ಬಾಲವೇಷದ ಈ ಹುಡುಗ ಸುಂದರವಾಗಿ ಹಾಡುತ್ತಿದ್ದ..!
ಬೆಳಗಿನ ಉಪಹಾರಕ್ಕೆಂದು ಪ್ರಸಿದ್ಧ "ಮೈಲಾರಿ" ದೋಸೆ ಹೋಟೆಲಿಗೆ ಹೋಗಿದ್ದೆವು. ಬೆಂಗಳೂರಿನ ' MTR ' ಮತ್ತು ವಿದ್ಯಾರ್ಥಿ ಭವನದಂತೆಯೇ ಮೈಸೂರಿನಲ್ಲಿ ಮೈಲಾರಿ ಹೋಟೆಲು ಬೆಣ್ಣೆ ದೋಸೆಗೆ ಪ್ರಸಿದ್ದಿ. ಬಾಯಲ್ಲಿ ನೀರೂರಿಯುವ ಅಪ್ಪಟ ಬೆಣ್ಣೆಯ ಗರಿ ಗರಿ ದೋಸೆ..ರುಚಿಯಾದ ಕೊಬ್ಬರಿ ಚಟ್ನಿ! ಒಬ್ಬೊಬ್ಬರೂ ೪-೫ ದೋಸೆ ತಿಂದು ತೇಗಿದೆವು..!
ಕಾರಂಜಿಕೆರೆ ಸುಂದರ ಮತ್ತು ಪ್ರಶಾಂತವಾದ ತಾಣ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಇರುವ ಕಾರಂಜಿ ಕೆರೆಯು ಸುಮಾರು ೯೦ ಎಕರೆ ವಿಸ್ತೀರ್ಣದಲ್ಲಿದೆ. ದೋಣಿ ವಿಹಾರ, ಚಿಟ್ಟೆ ವನ, ಪಕ್ಷಿವನ, ಹಸಿರು ಗಿಡಮರಗಳು, ಸುಂದರ ಹುಲ್ಲುಹಾಸು ಇಲ್ಲಿನ ವಿಶೇಷ.
ಪಕ್ಷಿವನ ಭಾರತದಲ್ಲಿಯೇ ಅತಿ ಉದ್ದದ ಹಾಗೂ ದೊಡ್ಡದಾದ ಪ್ರದೇಶವಾಗಿದೆ. ವಿವಿಧ ಜಾತಿಯ ಹಕ್ಕಿಗಳು, ಚಂದದ ಚಿಟ್ಟೆಗಳು ಮನಸೂರೆಗೊಳಿಸುತ್ತವೆ. ಪ್ರಶಾಂತವಾದ ಕೆರೆಯು ದೋಣಿ ವಿಹಾರಕ್ಕೆ ಮುದ ನೀಡುತ್ತದೆ.
ನಿಸರ್ಗ ಪ್ರಿಯರಿಗೆ, ಛಾಯಾಗ್ರಾಹಕರಿಗೆ ಇದು ಹೇಳಿ ಮಾಡಿಸಿದ ಜಾಗ....ಹಾಗೇಯೇ ಪ್ರೇಮಿಗಳಿಗೂ ಕೂಡ...!! ಕಾರಂಜಿ ಕೆರೆಯು ಮೈಸೂರು ಪ್ರಾಣಿಸಂಗ್ರಹಾಲಯ ಪ್ರಾಧಿಕಾರದ ಉಸ್ತುವಾರಿಯಲ್ಲಿದೆ. ಇಲ್ಲಿನ ಸ್ವಚ್ಛತೆ ನಿಜಕ್ಕೂ ಪ್ರಶಂಸಾರ್ಹ...!!
ಮೈಸೂರು ವಿಶ್ವವಿದ್ಯಾಲಯದ ಹತ್ತಿರ ಇರುವ "ಮನೆ" ಎಂಬ ಹೋಟೆಲಿನಲ್ಲಿ ಸೊಗಸಾದ ಜೋಳದ ರೊಟ್ಟಿ ಊಟ ಮುಗಿಸಿ " ಬಲಮುರಿ" ಗೆ ಹೋದೆವು. ಈ ತಾಣ ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತ. ಕಾವೇರಿ ನದಿ ತೀರದ, ಹೆಚ್ಚು ಅಪಾಯವೂ ಇಲ್ಲದ ಯಾವಾಗಲೂ ಪ್ರವಾಸಿಗರಿಂದ ತುಂಬಿರುವ ಜಾಗ. ಇಲ್ಲಿ ವರ್ಷಪೂರ್ತಿ ನೀರಿರುವುದರಿಂದ ಪ್ರವಾಸಿಗರು ಜಾಸ್ತಿ. ನದಿಯು ತುಂಬಿದಾಗ ಸಣ್ಣ ಅಣೆಕಟ್ಟೆಯ ಮೇಲಿಂದ ನೀರು ಹರಿದು ಸುಂದರ ಜಲಪಾತವನ್ನು ಕೂಡ ಸೃಷ್ಟಿಸುತ್ತದೆ.
ಗಣೇಶನ ಸನ್ನಿಧಿಯಲ್ಲಿ ನಮಸ್ಕರಿಸಿ, ಯಾವುದೇ ಅಪಾರ ಬರದಿರಲೆಂದು ಪ್ರಾರ್ಥಿಸಿ, ತೃಪ್ತಿಯಾಗುವಷ್ಟು ಸಮಯ ನೀರಿನಲ್ಲಿ ಈಜಾಡಿದೆವು!!!
ಅಲ್ಲಿಂದ, ನಂಜನಗೂಡಿನ ಪ್ರಸಿದ್ಧ ಈಶ್ವರ ದೇವಾಲಯದ ದರ್ಶನಕ್ಕೆಂದು ಹೊರಟೆವು. ವಾಹನ ದಟ್ಟಣೆಯಿಂದಾಗಿ ನಂಜನಗೂಡು ತಲುಪುವದರೊಳಗೆ ಕತ್ತಲಾಗಿತ್ತು. ಗೋಪುರ, ಸುಂದರ ಕಲ್ಲಿನ ಕೆತ್ತನೆಗಳು, ಅದ್ಭುತ ಕುಸುರಿಯ ವಿಗ್ರಹಗಳು ಇಲ್ಲಿ ನೋಡಲೇ ಬೇಕಾದುದು.
ಕತ್ತಲಾದ್ದರಿಂದ ಅಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲಾಗಲಿಲ್ಲ, ಕಾಮರದಲ್ಲೂ ಸೆರೆಹಿಡಿಯಲಾಗಲಿಲ್ಲ. ಮತ್ತೊಮ್ಮೆ ಇಲ್ಲಿಗೆ ಬರಲೇ ಬೇಕು..!!
ನಗರದ ಮಧ್ಯಭಾಗದಲ್ಲಿರುವ "ಫುಡ್ ಕೋರ್ಟ್" ನಲ್ಲಿ ರಾತ್ರಿಯ ಊಟ ಮುಗಿಸಿ, ಸುಂದರ ದಿನವೊಂದನ್ನು ಕಳೆದಿದ್ದಕ್ಕೆ ಮೈಸೂರಿಗೊಂದು ವಿದಾಯ ಹೇಳಿ, ಬೆಂಗಳೂರಿನ ಹೈವೆನಲ್ಲಿ ಕಾರು ಚಲಾಯಿಸಿದೆ..! ಮತ್ತೆ ಅದೇ ಹರಿಹರನ್ ಗಝಲ್...!!


ಈ ವರ್ಷ ಕೂಡ ಕಳೆದ ವರ್ಷದಂತೆಯೇ ಮಳೆ ಬರಲಿ....! ಮತ್ತೊಮ್ಮೆ ಜಲಪಾತ ಮೈದುಂಬಲಿ...!!
ಈ ಕಾರಾಗೃಹವು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಿದಾಗ ಸರಕಾರದವರು ಇದನ್ನ ಉದ್ಯಾನವನವನ್ನಾಗಿ ಪರಿವರ್ತಿಸಿದರು. ೧೫ ಎಕರೆ ಸ್ವಾತಂತ್ರ್ಯ ಉದ್ಯಾನವನವನ್ನು ಸುಮಾರು ೧೭.೩೫ ಕೋಟಿ ರೂಗಳ ಮೊತ್ತದಲ್ಲಿ ನಿರ್ಮಿಸಲಾಗಿದೆ. ಲಂಡನ್ ನ ಹೈಡ್ ಉದ್ಯಾನವನದ ಮಾದರಿಯಲ್ಲಿ ೬ ಎಕರೆ ಪ್ರತ್ಯೇಕ ವಿಶಾಲವಾದ ಪ್ರದೇಶದಲ್ಲಿ ಪ್ರತಿಭಟನೆಗೆ ಅವಕಾಶ ಕಲ್ಪಿಸಲಾಗಿದೆ...ಇದರಿಂದ ನಗರ ಕೇಂದ್ರದಲ್ಲಿ ಪ್ರತಿಭಟನೆ ಮತ್ತು ಮೆರವಣಿಗೆ ಇಂದಾಗಿ ಸಂಚಾರ ಅಸ್ತವ್ಯಸ್ತ ಕಡಿಮೆ ಆಗಲಿದೆ..!!! :-)
ಉದ್ಯಾನವನದ ಮುಖ್ಯ ಉದ್ದೇಶ ನಗರದ ಹೃದಯ ಭಾಗದಲ್ಲಿ ಹಸಿರನ್ನು ಸೃಷ್ಟಿಸುವುದು. ಇಲ್ಲಿನ ವಾಸ್ತುಶಿಲ್ಪ ಅಧ್ಬುತವಾಗೆನು ಇಲ್ಲ. ಆದರೂ ಮನಸ್ಸಿಗೆ ಹಿಡಿಸುತ್ತದೆ. ಹಸಿರು ಮರಗಳು, ಹೂವಿನ ಗಿಡಗಳು, ಹಾಸು ಎಲ್ಲವು ಸುಂದರ. ಹಾಗೆಯೇ ಚಿಣ್ಣರಿಗೆ ಆಡಲು ಸಾಕಷ್ಟು ಸ್ಥಳಾವಕಾಶ ಇದೆ, ಅದಕ್ಕಾಗಿಯೇ ವಿಶೇಷ ಆಟಿಕೆಗಳೂ ಇದೆ. ಕೈದಿಗಳು ಇದ್ದ ಕೊಠಡಿಯನ್ನು ಹಾಗೆಯೇ ಇಡಲಾಗಿದೆ.. ವೀಕ್ಷಣಾ ಗೋಪುರ, ಸಮಾನಾಂತರ ಗೋಡೆ ವಿಶೇಷ ಆಸಕ್ತಿಯನ್ನು ಹುಟ್ಟಿಸುತ್ತದೆ. ರಂಗಮಂದಿರ ಸದುಪಯೋಗವಾದರೆ ಸುಂದರ ಸಂಜೆಯನ್ನ ಸೃಷ್ಟಿಸಬಹುದು...!! ಪಾರ್ಕಿಂಗ್ ವ್ಯವಸ್ಥೆ ಕೂಡ ಇದೆ.
ನಮ್ಮ ಬೆಂಗಳೂರಿನಲ್ಲೂ ಇಂತಹ ಸುಂದರ ವಿಶಾಲವಾದ ಹಸಿರು ತಾಣ ಇರುವುದು ಆಶ್ಚರ್ಯ. ಉಳಿದ ಉದ್ಯಾನವನದಂತೆ ಹಾಳಾಗುವ ಮೊದಲು ಒಮ್ಮೆ ಕುಟುಂಬ ಸಮೇತ ಹೋಗಿ ಬನ್ನಿ...!