Wednesday, October 20, 2010

ಹೊಗೆನಕಲ್ ಜಲಪಾತ

ದಿನಾಂಕ : ಸೆಪ್ಟೆಂಬರ್ ೫, ೨೦೧೦
ಕಾರಿನಲ್ಲಿ : ನಾನು, ಅರವಿಂದ, ಸುಹಾಸ್, ದೀಪಕ್
ಕ್ರಮಿಸಿದ ದೂರ : ೨೭೦ ಕಿ.ಮೀ
ದಾರಿ : ಬೆಂಗಳೂರು -> ಎಲೆಕ್ಟ್ರೋನಿಕ್ ಸಿಟಿ -> ಹೊಸೂರು -> ಕೃಷ್ಣಗಿರಿ -> ಧರಂಪುರಿ -> ಹೊಗೆನಕಲ್

ಬೆಂಗಳೂರಿನವರಿಗೆ ತುಂಬಾ ಪರಿಚಯದ ಒಂದು ದಿನದ ಪ್ರವಾಸಕ್ಕೆ ಸೂಕ್ತವಾದ ಜಾಗ ಅಂದರೆ ಥಟ್ಟನೆ ನೆನಪಾಗುವುದು ಹೊಗೆನಕಲ್ ಫಾಲ್ಸ್. ಬೆಂಗಳೂರಿಂದ ಸುಮಾರು ೧೩೦ ಕಿ.ಮೀ ದೂರ ಇರುವ ಈ ಜಲಪಾತಕ್ಕೆ "ಭಾರತದ ನಯಾಗರ" ಅಂತಲೂ ಕರೆಯುತ್ತಾರೆ. ಈ ಜಲಪಾತದ ಬಗ್ಗೆ ಹೆಚ್ಚಿನ ವಿವರ ಬರೆಯುವ ಅಗತ್ಯ ಇಲ್ಲ, ಅಂತರ್ಜಾಲದಲ್ಲಿ ಬೇಕಾದಷ್ಟು ಮಾಹಿತಿ ಸಿಗುತ್ತದೆ.


ಕಾವೇರಿ ನದಿಯು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹೊಗೆನಕಲ್ ಎಂಬಲ್ಲಿ ಸುಂದರ ಜಲಪಾತ ಸೃಷ್ಟಿಸಿದೆ. ಸುಮಾರು ೧ ಕಿ.ಮೀ ಸುತ್ತಳತೆಯಲ್ಲಿ ಎಲ್ಲಿ ನೋಡಿದರೂ ಜಲಪಾತಗಳೇ ಕಾಣಸಿಗುತ್ತದೆ. ಸುಣ್ಣದ ಕಲ್ಲಿನ ಬಂಡೆಗಳ ಮಧ್ಯೆ ರಭಸವಾಗಿ ಧುಮ್ಮಿಕ್ಕುವ ಜಲಪಾತವು "ಹೊಗೆ" ಎದ್ದಂತೆ ಭಾಸವಾಗುವುದರಿಂದ ಹೊಗೆ-ನ-ಕಲ್ಲು ಎಂದು ಹೆಸರು ಬಂದಿರಬಹುದು. ಜಲಪಾತಕ್ಕೂ ಮೊದಲು ನದಿಯು ಕಾಡು, ಗುಡ್ಡಗಳನ್ನು ಬಳಸಿ ಬರುವುದರಿಂದ ಇಲ್ಲಿನ ನೀರು ಔಷಧಿಯುಕ್ತವಾಗಿರುತ್ತದೆ.
ಮಸ್ಸಾಜು ಸ್ನಾನ, ತೆಪ್ಪದಲ್ಲಿ ಜಲಪಾತದ ವೀಕ್ಷಣೆ ಇಲ್ಲಿನ ಪ್ರಮುಖ ಆಕರ್ಷಣೆ.

ಮಳೆಗಾಲದಲ್ಲಿ ಮೈದುಂಬಿಕೊಂಡಿರುವ ಜಲಪಾತದ ಸೌಂದರ್ಯದ ಬಗ್ಗೆ ಎರಡು ಮಾತಿಲ್ಲ. ಆದರೆ ಸುತ್ತಮುತ್ತಲ ಪರಿಸರ ಅಷ್ಟು ಸ್ವಚ್ಚವಾಗಿಲ್ಲ. ವಾರಾಂತ್ಯಗಳಲ್ಲಿ ಪ್ರವಾಸಿಗರಿಂದ ತುಂಬಿರುತ್ತದೆ. ಊರೊಳಗೆ ಒಂದೂ ಸಸ್ಯಾಹಾರಿ ಹೋಟೆಲ್ ಇಲ್ಲ. ಹಾಗಾಗಿ ಪ್ರವಾಸಿಗರು ಮನೆಯಿಂದ ಆಹಾರ ಕಟ್ಟಿಸಿಕೊಂಡು ಹೋಗುವುದು ಉತ್ತಮ.


ಬೆಳಗಿನ ಉಪಹಾರ ಕೃಷ್ಣಗಿರಿ ಹೆದ್ದಾರಿಯಲ್ಲಿನ ಕಾಮತ್ ಹೋಟೆಲಿನಲ್ಲಿ ಮುಗಿಸಿದೆವು. ಹೊಸೂರು ಹೆದ್ದಾರಿಯು ಡ್ರೈವಿಂಗ್ ಗೆ ಉತ್ತಮವಾಗಿದ್ದು, ಡ್ರೈವಿಂಗ್ ಮಜಾ ಅನುಭವಿಸುತ್ತ ಹೊಗೆನಕಲ್ ತಲುಪಿದಾಗ ೧೦ ಗಂಟೆ. ಜಲಪಾತ ವೀಕ್ಷಣೆಗೆ ತೆಪ್ಪ ಅಗತ್ಯ ಇರುವುದರಿಂದ ತೆಪ್ಪದ ಮಾಲೀಕರಿಗೆ ಕೇಳಿದಷ್ಟು ಹಣ ಕೊಡುವುದು ಅನಿವಾರ್ಯ. ಹೇಗಿದ್ದರೂ ಪ್ರವಾಸಿಗರು ಇಲ್ಲಿಗೆ ಬಂದಮೇಲೆ ಜಲಪಾತ ನೋಡದೆ ಹಿಂದಿರುಗುವದಿಲ್ಲ ಎಂಬ ವಿಶ್ವಾಸ ಅವರದ್ದು. ತುಂಬಾ ಹೊತ್ತಿನ ಚೌಕಾಸಿಯ ನಂತರ ೧೩೦೦ ರುಪಾಯಿ ಇಂದ ೧೦೦೦ ರುಪಾಯಿಗೆ ಇಳಿಸಿದೆವು. ಬರಿಯ ಜಲಪಾತ ವೀಕ್ಷಣೆಗೆ ಒಂದು ಚಾರ್ಜು, ಅಲ್ಲಿ ಸ್ನಾನ ಸ್ವಲ್ಪ ಬಿಡುವಿಗೆ ಬೇರೆ ಚಾರ್ಜು..:-) ತುಸು ದುಬಾರಿ ಎನಿಸಿದರೂ ಜಲಪಾತದ ಅದ್ಭುತ ಸೌಂದರ್ಯ ಅದನ್ನು ಮರೆಸಿತು.

ಮೊದಲು ಕರ್ನಾಟಕ ಗಡಿಯಲ್ಲಿರುವ ಜಲಪಾತ ವೀಕ್ಷಿಸಿದೆವು, ಕಲ್ಲನ್ನು ಸೀಳಿಕೊಂಡು ವಿಸ್ತಾರವಾಗಿ ಧುಮುಕುವ ಈ ಜಲಪಾತ ಕಣ್ಣಿಗೆ ಹಬ್ಬ. ಮಳೆಗಾಲದ ನಂತರ ಸೌಂದರ್ಯ ಇಮ್ಮುಡಿಯಾಗಿತ್ತು. ನೀರಿನ ರಭಸ ಮೈ ಜುಮ್ಮೆನ್ನುವಂತಿತ್ತು. ಅನುಭವಿ ಮೀನುಗಾರರು ಈ ಜಲಪಾತದ ಕೊರಕಲಿನಲ್ಲಿ ಮೀನು ಹಿಡಿಯಲು ಇಳಿಯುತ್ತಾರೆ...!!!

ನಾವು ಅಲ್ಲಿಂದ ಹೊರಡುವ ಸೂಚನೆ ಕಾಣದಿದ್ದಾಗ, ತೆಪ್ಪದವ ಬಂದು ಹೊರಡುವಂತೆ ಸೂಚಿಸಿದ. ನದಿಯ ಆಳ ಕಡಿಮೆ ಇರುವಲ್ಲಿ, ಸ್ವಚ್ಛ ನೀರಿನ ಜಾಗದಲ್ಲಿ ನಾವು ಸ್ನಾನ ಮುಗಿಸಿದೆವು.

ಅಲ್ಲಿಂದ ಹೊರತು ತಮಿಳುನಾಡಿನ ಭಾಗದಲ್ಲಿರುವ ಜಲಪಾತಕ್ಕೆ ಬಂದೆವು. ನೀರು ಮೈಮೇಲೆ ಉಕ್ಕಿ ಬಂದಂತೆ ಭಾಸವಾಗುವ ಈ ಜಲಪಾತವನ್ನು ಹತ್ತಿರದಿಂದ ವೀಕ್ಷಿಸಬಹುದು. ಸುತ್ತಲೂ ಸಣ್ಣ ಸಣ್ಣ ಜಲಪಾತಗಳು, ನೀರಿನ ಅಗಾಧತೆ ಇಲ್ಲಿನ ವಿಶೇಷ. ಜಲಪಾತ ವೀಕ್ಷಣೆಗೆ ಸರಕಾರ ತೂಗುಸೇತುವೆ ಕೂಡ ನಿರ್ಮಿಸಿದೆ. ಬೇಸಿಗೆ ಕಾಲದಲ್ಲಿ ನೀರಿನ ಹರಿವು ಕಡಿಮೆ ಇದ್ದಾಗ ತೆಪ್ಪದಲ್ಲಿ ಜಲಪಾತದ ಬುಡಕ್ಕೆ ಹೋಗಲು ಸಾಧ್ಯ. ನೀರಿನ ರಭಸಕ್ಕೆ ವಿರುದ್ಧ ೫-೬ ಜನರನ್ನು ಕೂಡಿಸಿಕೊಂಡು ತೆಪ್ಪ ನಡೆಸುವನ ಚಾಕ-ಚಕ್ಯತೆ ಮೆಚ್ಚುವಂತದ್ದು.



ಗಂಟೆಗಳ ಕಾಲ ಜಲಧಾರೆಯನ್ನು ನೋಡಿ, ನಮ್ಮನ್ನು ಸುರಕ್ಷಿತವಾಗಿ ದಡಕ್ಕೆ ತಲುಪಿಸಿದ ತೆಪ್ಪದವನಿಗೆ ಧನ್ಯವಾದ ತಿಳಿಸಿ ನಾವು ವಾಪಸು ಹೊರಟೆವು.

ಅತಿ ಕಡಿಮೆ ಸಮಯದಲ್ಲಿ, ಆಯಾಸವಿಲ್ಲದೆ ಸುಂದರ ದಿನವನ್ನು ಕಳೆದ ನೆನಪಿನೊಂದಿಗೆ ಹೊಸೂರು ಹೆದ್ದಾರಿಯ ವಾಹನಗಳ ನಡುವೆ ನಾವೂ ತೂರಿಕೊಂಡೆವು.

Saturday, October 9, 2010

ಯಾವುದಾದರು ದೊಡ್ಡ ಬಂಡೆ ದೂರದಲ್ಲಿ ಕಂಡರೂ ಸಾಕು ಕಾರು ಗಕ್ಕನೆ ನಿಂತುಬಿಡುತಿತ್ತು

ಮಿಕ್ಕವರ ಸ್ವಾತಂತ್ರ್ಯ ಹರಣ ಮಾಡಿ ಬದುಕುವ ಮಾನವ ಯಾವತ್ತೂ ಸ್ವಾತಂತ್ರ್ಯ ಪ್ರಿಯ. ಕಾಡಿನಲ್ಲಿ ಮುಕ್ತವಾಗಿ ತಿರುಗಿಕೊಂಡಿದ್ದ ಪ್ರಾಣಿಗಳನ್ನೆಲ್ಲ ಕಟ್ಟಿ ಹಾಕಿ ,ಮನಸೋ ಇಚ್ಛೆ ಆನಂದಿಸುವ ಪ್ರಾಣಿ ಮಾನವ. ಸ್ವಾತಂತ್ರ್ಯ ದಿನವನ್ನು ಸುಮ್ಮನೆ ಮನೆಯಲ್ಲಿ ಕುಳಿತು ಕಳೆಯಲು ಮನಸ್ಸಾಗದೆ ವಿಶೇಷವಾಗಿ ಆಚರಿಸಲೇ ಬೇಕೆಂದು ನಮ್ಮ ಗುಂಪು ತೀರ್ಮಾನಿಸಿ ನಾವು, ಸ್ವಾತಂತ್ರ್ಯ ದಿನವನ್ನ ಆಚರಿಸುವ ಸಲುವಾಗೇ ನಾಡಿನಿಂದ ಕಾಡಿಗೆ ತೆರಳಿದ್ದೆವು, ಅದಕ್ಕಾಗಿ ಸಕಲ ಸಿದ್ಧತೆ ಹಿಂದಿನ ದಿನವೇ ಮಾಡಿಕೊಂಡಿದ್ದೆ. ಅದಕ್ಕೆ ಬೇಕಾದ ಶುಭ್ರವಾದ ಹತ್ತಿ ಬಟ್ಟೆಯ ರಾಷ್ಟ್ರ ಧ್ವಜವನ್ನು, ಉದ್ದನೆಯ ಕೋಲು ಸಹ ಖರೀದಿಸಿದ್ದೆ. ಏನೋ ಒಂದು ತರಹದ ಉತ್ಸಾಹ ಮನೆಮಾಡಿತ್ತು . ೧೪ ರ ರಾತ್ರಿ ಸುಮಾರು ೧೦.೩೦ಕ್ಕೆ ೮ ಜನ ಹುಡುಗರು ಕೂಡಿಕೊಂಡು ೨ ಕಾರಲ್ಲಿ ಮೈಸೂರು ಕಡೆ ಹೊರಟೆವು.ಅಲ್ಲಿಯೇ ನಾವು ಭೇಟಿಯಾದದ್ದು ಕಾಡಿನ ರಾಜನನ್ನ.








ಮಾರ್ಗ ಮಧ್ಯೆ ಎಂದಿನ ನಿಯಮದಂತೆ ದಾಹ ಇಂಗಿಸಿಕೊಳ್ಳಲು ಕಾಫಿ-ಡೇ ಗೆ ನಮ್ಮಭೇಟಿ, ಪುಟ್ಟ ಕೇಕ್ ಒಂದನ್ನು ಖರೀದಿಸಿ ಭರ್ಜರಿ ಘೋಷಣೆ, ಜೈ ಭಾರತ್,ಮೇರಾ ಭಾರತ್ ಮಹಾನ್ ಎಂಬೆಲ್ಲಾ ಜೈಕಾರ ದೊಂದಿಗೆ, ಖರೀದಿಸಿದ ಕೇಕ್ ಕತ್ತರಿಸಿ ಬಾಯಿ ಸಿಹಿಮಾಡಿದೆವು. ಹಿತವಾದ ಕಾಪ್ಪಿಚಿನೋ ಕುಡಿದು ನಮ್ಮ ತಂಡ ಅಲ್ಲಿಂದ ಮುಂದೆ ಹೊರಟಿದ್ದು ನಿಜ. ಉತ್ತಮ ರಸ್ತೆ, ತಣ್ಣನೆಯ ಗಾಳಿ, ಇಂಪಾದ ಸಂಗೀತ, ಮೋಜು ಮಸ್ತಿ, ಮಾತು ಹರಟೆಗಳಿಂದ ನಮ್ಮ ಪ್ರಯಾಣ ಕಳೆಗಟ್ಟಿತ್ತು.

ಗುಂಡ್ಲುಪೇಟೆ ದಾಟಿ, ಗೋಪಾಲ ಸ್ವಾಮಿ ಬೆಟ್ಟದ ಚೆಕ್ ಪೋಸ್ಟ್ ತಲುಪಿದಾಗ ಬೆಳಗಿನ ಜಾವ ೫ ಗಂಟೆಯ ಮಂದ ಬೆಳಕು ನಮ್ಮನ್ನ ಸ್ವಾಗತಿಸಿತ್ತು. ಕಾಡು ಪ್ರಾಣಿಗಳು, ಆನೆಗಳು ಇಲ್ಲಿ ಸಂಚರಿಸುವುದು ಸಾಮಾನ್ಯ. ಸಂಜೆ ೬ ರಿಂದ ಬೆಳಿಗ್ಗೆ ೬ ರ ವರೆಗೆ ಚೆಕ್ ಪೋಸ್ಟ್ ನಿಂದ ಬೆಟ್ಟಕ್ಕೆ ಪ್ರಯಾಣ ನಿಷೇಧಿಸಲಾಗಿದೆ. ಅವುಗಳ ರಕ್ಷಣೆಗೆ ಮಾತ್ರ ಅಲ್ಲ, ಅವುಗಳಿಂದ ನಮಗೂ ರಕ್ಷಣೆ ಬೇಕಲ್ಲ, ಅದಕ್ಕೆ ಈ ನಿರ್ಬಂಧ. ನಾವು ಗೇಟಿನ ಮುಂದೆ ಕಾದೆವು.


ಸುಮಾರು ಅರ್ಧ ಕಿ.ಮೀ ಹೋಗುವಷ್ಟರಲ್ಲೇ, ರಸ್ತೆ ತುಂಬಾ ಮುರಿದ ಮರದ ಕೊಂಬೆಗಳು, ಅಲ್ಲಲ್ಲಿ ರಸ್ತೆ ಬದಿಯ ಮಣ್ಣನ್ನು ಎತ್ತಿ ಹಾಕಿದ ಗುರುತು, ಹಸೀ ಹಸೀ ಲದ್ದಿ..! ನಮ್ಮ ಧೈರ್ಯ ಅರ್ಧ ಕಡಿಮೆ ಆಯಿತಿರಬೇಕು, ನಮ್ಮ ಕಾರು ಮುಂದಕ್ಕೆ ಹೋಗುತ್ತಲೇ ಇರಲಿಲ್ಲ...!! ಹಿಂತಿರುಗಿ ಹೋಗುವಂತೆಯೂ ಇರಲಿಲ್ಲ..ಕಾರನ್ನು ತಿರುಗಿಸುವುದು ಕಷ್ಟ ಆಗಿತ್ತು..! ಏನಾದರೂ ಒಂದು ಕೈ ನೋಡಿಯೇ ಬಿಡೋಣ ಎಂದು ಮುಂದೆ ಹೊರಟೆವು. ಯಾವುದಾದರು ದೊಡ್ಡ ಬಂಡೆ ದೂರದಲ್ಲಿ ಕಂಡರೂ ಸಾಕು ಕಾರು ಗಕ್ಕನೆ ನಿಂತುಬಿಡುತಿತ್ತು...:-)


ಅಷ್ಟರಲ್ಲೇ, ಪಕ್ಕದ ಕುರುಚಲು ಕಾಡಿನಿಂದ ಹುಲಿಯೊಂದು ಚಂಗನೆ ಜಿಗಿದು ರಸ್ತೆ ಅಡ್ಡಲಾಗಿ ಹೋಗಿ ಕಾಡಲ್ಲಿ ಮತ್ತೆ ಮರೆಯಾಯಿತು, ಅದೊಂದು ಅದ್ಭುತ ಅನುಭವ; ಹೀಗೆ ಹುಲಿಯೊಂದನ್ನು ನಾನು ಮೊದಲು ನೋಡಿದ್ದಿಲ್ಲ..! ಆದರೂ, ಆಗಲೇ ಹೆದರುತ್ತಲೇ ಬಂದದ್ದು ಕೂಡ ಸಾರ್ಥಕ ಅನ್ನಿಸಿದ್ದು. ಮುಂದೆ ಸ್ವಲ್ಪ ದೂರದಲ್ಲಿ "ಸೂಚನ ಫಲಕ" ಮುರಿದು ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು, ರೆಂಬೆ ಕೊಂಬೆಗಳು ಸುತ್ತಲೂ ಮುರಿದಿದ್ದವು , ನಮ್ಮನ್ನ ಆವರಿಸಿದ್ದ ಭಯ ಮತ್ತು ಹೆಚ್ಚಿತು, ಹತ್ತಿರದಲ್ಲಿ ಆನೆಗಳ ಗುಂಪು ಇದೆ ಎಂಬ ಸೂಚನೆಯಿಂದಾಗಿ ಮುಂದೆ ಹೋಗುವ ಧೈರ್ಯ ಯಾರಿಗೂ ಇರಲಿಲ್ಲ, ಮುಂಜಾನೆಯ ಚಳಿಯಲ್ಲೂ ನಿಧಾನಕ್ಕೆ ಬೆವರಿಳಿಯತೊಡಗಿತು..! ಮುಂದೆ ಹೋಗುವಂತೆಯೂ ಇಲ್ಲ..ಹಿಂತಿರುಗುವಹಾಗು ಇಲ್ಲ! ಉಳಿದವರ ಧೈರ್ಯದ ಮೇಲೆ ಅಂತೂ ಮುಂದೆ ಹೊರಟರು ಚಿಕ್ಕ ಭಯ ಬಿಟ್ಟಿರಲಿಲ್ಲ; ಪುಣ್ಯಕ್ಕೆ ಆನೆಗಳ ಹಿಂಡು ದಾರಿಯಲ್ಲೆಲ್ಲೂ ಸಿಗಲಿಲ್ಲ.

ಸಾಮಾನ್ಯವಾಗಿ ಕಾಡಿನಲ್ಲಿ ಪ್ರಯಾಣಿಸುವಾಗ ಎಲ್ಲಾದರೂ ಆನೆಗಳ ಹಿಂಡು ಸಿಗಲಿ ಎಂದು ಪ್ರಾರ್ಥಿಸುತ್ತೇವೆ ಆದರೆ, ನಮ್ಮ ಪರಿಸ್ಥಿತಿ ಉಲ್ಟಾ..ಆನೆಗಳು ಎದುರಾಗದಿರಲಿ ಎಂದು ಪ್ರಾರ್ಥಿಸುವದಾಗಿತ್ತು ನಮ್ಮ ಕೆಲಸ.

ಮುಕ್ಕಾಲು ಗಂಟೆಯ ಪ್ರಯಾಣದ ನಂತರ ದೇವಸ್ಥಾನದ ಸಮೀಪವಾಗಿತ್ತು . ಮುಂಜಾನೆಯ ದೃಶ್ಯ ನಿಜಕ್ಕೂ ಬಹಳ ಅದ್ಭುತ. ಹಕ್ಕಿಗಳ ಚಿಲಿಪಿಲಿ, ತಣ್ಣನೆಯ ಗಾಳಿ, ಸುಂದರ ದೇವಸ್ಥಾನ, ಕೆಂಪಾಗುತ್ತಿರುವ ಮೂಡಣ..! ಒಂದಕ್ಕಿಂತ ಒಂದು ಹೆಚ್ಚು ಇಂಪು. ಕಣ್ಣಿಗೆ ಮನಕ್ಕೆ ತಂಪು ತಂದಿದ್ದವು, ಸಾರ್ಥಕತೆಯ ಖುಷಿಯಿಂದ ಕುಣಿದಾಡಿದೆವು. ಅವ ಬೆಳಿಗ್ಗೆ ನಮಗೆ ಉಚಿತ ಬಿಸಿ ಬಿಸಿ ಚಹಾ ಕೂಡ ಮಾಡಿಕೊಟ್ಟ.
ಪುನಃ ಅವನಿಗೆ ಕೇಳಿದೆವು ಇಲ್ಲಿ ಆನೆಗಳನ್ನು ನೋಡಬೇಕು ಎಲ್ಲಿ ಇರುತ್ತವೆ ತೋರಿಸು ಅಂತ, ಅದಕ್ಕೆ ಆತ ಸ್ವಾಮಿ ದೇವಸ್ಥಾನದ ಹಿಂಬಾಗ ನೋಡಿ ಆನೆಗಳ ಗುಂಪೇ ಇದೆ ಅಂದ. ನಾವು ಓಡಿ ಹೋಗಿ ನೋಡಿದರೆ ೧೦-೧೨ ಆನೆಗಳ ಗುಂಪೇ ಅಲ್ಲಿತ್ತು! ಆನೆಗಳಿಗೆ ತೊಂದರೆ ಆಗದಂತೆ ತಾಸುಗಟ್ಟಲೆ ದೂರದಲ್ಲಿ ನಿಂತು, ಅವುಗಳನ್ನು ಅತೀ ಹತ್ತಿರದಿಂದ ನಿಂತು ನೋಡಿದೆವು. ಬೆಳಕು ಹರಿಯುತ್ತಲೇ ಅವು ಬೆಟ್ಟದ ಕಣಿವೆಯಲ್ಲಿ ಮರೆಯಾಗತೊಡಗಿದವು, ಅಂತೆಯೇ ಪ್ರವಾಸಿಗರ ವಾಹನಗಳು ಹೆಚ್ಚಿದವು.

ಬೆಳಗ್ಗೆ, ಪಕ್ಕದ ಗಿಡಗಂಬಹಿರ್ದೆಸೆಗೆಂದುಟಿಯ ಹಿಂಬಾಗಕ್ಕೆ ಮರೆಯಾಗಿ ಹೋದ ಗೆಳೆಯ ರವಿ, ಒಂದೇ ನಿಮಿಷದಲ್ಲಿ ಏದುಸಿರು ಬಿಡುತ್ತ ಓಡಿ ಬಂದ.ಏನಾಯಿತು ಅಂತ ಕೇಳಿದರೆ, ಆ ಪೊದೆಯ ಹಿಂದೆ ಒಂದು ಕಾಡೆಮ್ಮೆ ಇತ್ತು, ಅವನನ್ನ ನೋಡಿ ಒಂದು ಸಲ ಗುಟುರು ಹಾಕಿತ್ತು. ಆತ ಪ್ಯಾಂಟಿನ ಜಿಪ್ ಹಾಕುವುದು ಮರೆತು ಓಡಿಬಂದಿದ್ದ..:-)
ಪೂರ್ತಿ ಬೆಳಗಾದಾಗ ಪ್ರವಾಸಿಗರು, ಭಕ್ತರು ಬಂದು ದೇವಸ್ಥಾನದ ಹಿಂಬಾಗದ ಬೆಟ್ಟದ ತುಂಬೆಲ್ಲಾ ಓಡಾಡಿ ಗಲಾಟೆ ಜಾಸ್ತಿ ಆಗಿದ್ದರಿಂದ ಎಲ್ಲ ಆನೆಗಳು ಮರೆಯಾದವು.


ಗೋಪಾಲ ಸ್ವಾಮಿ ಬೆಟ್ಟದ ಸುತ್ತಲಿನ ಪ್ರದೇಶ ಸುಂದರವಾಗಿದೆ. ಹಸಿರು ಕಣಿವೆ, ಬಂಡೀಪುರ ಕಾಡಿನ ಸಾಲು, ಮೋಡಗಳು, ದೂರದಲ್ಲಿ ಕಾಣುವ ಆನೆಗಳ ಹಿಂಡು, ಶಾಂತವಾದ ವಾತಾವರಣ ಮನಸ್ಸಿಗೆ ಹಿತ ನೀಡಿತ್ತು. ಯಾಂತ್ರಿಕ ಜೀವನದ ಮಧ್ಯೆ ಸುಂದರ ದಿನ ಕಳೆಯಲು ಇದು ಸೂಕ್ತ ಜಾಗ. ಬೇಸಿಗೆಯ ಕಾಲದಲ್ಲೂ ಇಲ್ಲಿ ಮೋಡ ಸುತ್ತುವರಿದಿರುತ್ತದೆ. ಹಾಗಾಗಿ ಇದಕ್ಕೆ "ಹಿಮವದ್ ಗೋಪಾಲ ಸ್ವಾಮಿ ಬೆಟ್ಟ" ಅಂತ ಕರೆಯುತ್ತಾರೆ. ಸದಾ ಕಾಲ ಗರ್ಭಗುಡಿಯ ಮೇಲ್ಭಾಗದಲ್ಲಿ ನೀರು ಜಿನುಗುತ್ತಿರುತ್ತದೆ..!

ನಂತರ ಒಂದಷ್ಟು ಫೋಟೋಗಳನ್ನೂ ತೆಗೆದು, ಗಾರ್ಡ್ ನನ್ನು ಮತ್ತೊಮ್ಮೆ ಮಾತನಾಡಿಸಿ ಬೆಂಗಳೂರಿನತ್ತ ಹೊರಟಾಗ ಮತ್ತೆ ಮುಸ್ಸಂಜೆ..!