Monday, March 9, 2009

ಸಕಲೇಶಪುರ ರೈಲು ಹಳಿಯ ಚಾರಣ - ಭಾಗ ೨

ಬ್ರಿಡ್ಜ್ ನ ಮೇಲೆ ಸಾಗುವ ರೈಲಿನ ಚಿತ್ರ....!! ಆಗ ನಾವು ಬ್ರಿಡ್ಜ್ ನ ಕೆಳಗಿದ್ದೆವು...

ಬಿಸಿಲು ನಿಧಾನವಾಗಿ ಹೆಚ್ಚಾಗುತ್ತಾ ಇತ್ತು. ಆಗಾಗ ನೆರಳಿನಲ್ಲಿ ವಿರಮಿಸಿಕೊಂಡು ನಾವು ಮುಂದೆ ಸಾಗಿದ್ದೆವು. ಚಾರ್ಮಾಡಿ ಘಟ್ಟದ ದ್ರಶ್ಯವಂತೂ ಅಧ್ಬುತವಾಗಿತ್ತು. ಅಲ್ಲಲ್ಲಿ ಸಿಗುತ್ತಿದ್ದ ಸಣ್ಣ ಸಣ್ಣ ಹಳ್ಳದಲ್ಲಿ ಬೇಸಿಗೆಯಲ್ಲೂ ಸಹ ನೀರು ಹರಿಯುತ್ತಿತ್ತು. ಝರಿಯ ನೀರು ತುಂಬಾ ಸಿಹಿಯಾಗಿತ್ತು. ದಾರಿಯುದ್ದಕ್ಕೂ ನೀರು ಸಿಗುವುದು ಮೊದಲೇ ಗೊತ್ತಿದ್ದರೆ ಮಣಭಾರದ ನೀರಿನ ಬಾಟಲ್ ಹೊತ್ತುಕೊಂಡು ಹೋಗುವುದು ತಪ್ಪುತ್ತಿತ್ತು.

ನಮಗೆ ಎದುರಾದದ್ದು ೬ ರೈಲುಗಳು. ಅಲ್ಲಿ ಸಿಗುತ್ತಿದ್ದ ಬ್ರಿಡ್ಜ್ ಗಳು ಒಂದಕ್ಕಿಂತ ಒಂದು ಅದ್ಭುತವಾಗಿತ್ತು. ಅಷ್ಟೇ ಅಪಾಯಕಾರಿ ಕೂಡ...ಸ್ವಲ್ಪ ಅಜಾಗರೂಕತೆ ತೋರಿದರೂ ೧೦೦-೨೦೦ ಅಡಿ ಕೆಳಕ್ಕೆ ಬೀಳುವುದು ಖಂಡಿತ. ಗೂಡ್ಸ್ ರೈಲುಗಳು ಆಗಾಗ ಬರುತ್ತಿರುತ್ತೆ. ಹಾಗಾಗಿ ಬ್ರಿಡ್ಜ್ ದಾಟುವಾಗ ಎಚ್ಚರ ಅಗತ್ಯ...ಸರಸರನೆ ಬ್ರಿಡ್ಜ್ ನ ದಾಟಿ ಬಿಡಬೇಕು..ಸುರಂಗದಲ್ಲಿ ನಡೆಯುವುದು ಸಕತ್ ಥ್ರಿಲ್ಲಿಂಗ್...ಟಾರ್ಚ್ ಇಲ್ಲದೆ ಸುರಂಗದಲ್ಲಿ ನಡೆಯಲು ಸಾಧ್ಯವಿಲ್ಲ... ನಮಗೆ ಸಿಕ್ಕ ಅತೀ ಉದ್ದದ ಸುರಂಗ ಅಂದರೆ ೭೫೦ ಮೀ. ಸುರಂಗದ ಒಳಗೆ ನಮಗೆ ರೈಲು ಸಿಗಲಿಲ್ಲ. ಅಲ್ಲಿ ಬಿಸಿಲಿನ ಧಗೆ ಇರುವುದಿಲ್ಲ, ಹಾಗಾಗಿ ಸ್ವಲ್ಪ ಫಾಸ್ಟ್ ಆಗಿ ನಡೆಯಲು ಸಾಧ್ಯ. ಸುರಂಗದ ಬಾಗಿಲಲ್ಲಿ ನಮ್ ಟೀಮ್. ನಾವು ಸುಮಾರು ೧೨ ಕಿ. ಮೀ. ನಡೆದಿದ್ದೆವು. ಸಂತು ಕಂಬಿಯ ಮಧ್ಯೆ ಕಾಲು ಸಿಕ್ಕಿಸಿಕೊಂಡು, ಕಾಲನ್ನು ಉಳುಕಿಸಿಕೊಂಡು ಬಿಟ್ಟ. ಅಲ್ಲಿಂದ ಅವನಿಗೆ ನಡೆಯಲು ಕಷ್ಟವಾಯಿತು. ಅಂತು ಇಂತೂ ಕಾಲೆಳೆದುಕೊಂಡು ಕುಂಟುತ್ತ ೩ ಗಂಟೆಯ ವರೆಗೆ ನಡೆಸಿದೆವು. ಅವನ ಪರಿಸ್ಥಿತಿ ತುಂಬಾ ಕಷ್ಟವಾಗಿತ್ತು, ಭಾರದ ಬ್ಯಾಗು, ಬಿಸಿಲು, ಒಂದು ಕಾಲು ಕುಂಟು... !! ಜಲ್ಲಿ ಕಲ್ಲಿನ ಮೇಲೆ ನಡೆಯಲು ಕಷ್ಟಪಡ್ತಾ ಇದ್ದ. ನಮ್ಮ ಗುರಿ ಇದ್ದಿದ್ದು "ಎಡಕುಮೇರಿ" ಎಂಬ ಸ್ಟೇಷನ್. ಇನ್ನೂ ಸುಮಾರು ೪ ಕಿ. ಮೀ. ಬಾಕಿ ಇತ್ತು. ಎಡಕುಮೇರಿ ಇಂದ ಸಕಲೇಶಪುರ - ಸುಬ್ರಮಣ್ಯ ಹೈವೇ ಸೇರಲು ಮತ್ತೂ ೪ ಕಿ. ಮೀ ನಡೆಯಬೇಕಿತ್ತು...ಅದನ್ನು ಕೇಳಿ ಸಂತು "ಉಸ್ಸಪ್ಪ" ಎಂದು ಮಲಗಿಬಿಟ್ಟ..! ನಮಗೆ ಸನಿಹದ ದಾರಿ ಹುಡುಕುವುದು ಅನಿವಾರ್ಯವಾಯಿತು.
ಅಲ್ಲಿಯೇ ಕೆಲಸ ಮಾಡುತಿದ್ದ "ಪುಟ್ಟಸ್ವಾಮಿ" ಎಂಬ ಪ್ರಚಂಡ ಆಸಾಮಿಯ ಬಳಿ ಹೈವೇ ಸೇರಲು ಬೇರೆ ದಾರಿ ಇದೆಯೇ ಅಂತ ಕೇಳಿದೆವು. ಆತ ಹತ್ತಿರದಲ್ಲಿಯೇ ಮರ ಸಾಗಿಸುವ ಲಾರಿ ಬರುತ್ತದೆ ಅದರಲ್ಲಿ ಹೋಗಬಹುದೆಂದು ತಿಳಿಸಿದ.. ನಮ್ಮ ಚಾರಣವನ್ನು ಅಲ್ಲಿಯೇ ಮೊಟಕುಗೊಳಿಸಿ ಅವನನ್ನೂ ಕರೆದುಕೊಂಡು ಕಾಡಿನ ದಾರಿಯಲ್ಲಿ ನಡೆದೆವು. ಗುಡ್ಡ ಹತ್ತಲು ಏದುಸಿರು ಬಿಡುತ್ತಾ, ಅಂತೂ ಇಂತೂ ಅವನು ಹೇಳಿದ ಜಾಗಕ್ಕೆ ಬಂದು ಸೇರಿದೆವು. ದಾರಿಯುದ್ದಕ್ಕೂ ಪುಟ್ಟಸ್ವಾಮಿ ವಟಗುಟ್ಟುತ್ತಲೇ ಇದ್ದ...!! ಬಹುಶ: ಮರದ ಬಾಯಿಯಾಗಿದ್ದರೆ ಒಡೆದೆ ಹೋಗುತ್ತಿತ್ತೇನೋ...!! ಪುಟ್ಟಸ್ವಾಮಿ ಫೋಟೋಕ್ಕೆ ಪೋಸು ಕೊಟ್ಟಿದ್ದು ಹೀಗೆ..

ಲಾರಿ ಬರುವುದು ಸ್ವಲ್ಪ ಸಮಯವಾಗುತ್ತದೆಂದು ಹೇಳಿದ. ಅಲ್ಲಿ ಸ್ವಲ್ಪ ಹೊತ್ತು ಮಲಗಿ ನಿದ್ದೆ ಮಾಡಿದೆವು...ಆ ಜಾಗ ತುಂಬಾ ಸುಂದರವಾಗಿತ್ತು... ಸುತ್ತಲೂ ಕಾಡು. ಚಂದದ ಚಾರ್ಮಾಡಿ ಘಟ್ಟ ಪ್ರದೇಶ.. !! ಅಲ್ಲಿಂದ ಮುಂದೆ ನಮ್ಮ ಪ್ರಯಾಣ ಲಾರಿಯಲ್ಲಿ ಸಾಗಿತು. ಲಾರಿಯಲ್ಲಿ "ಹೆತ್ತೂರು" ಎಂಬ ಹಳ್ಳಿಗೆ ತಲುಪಿದೆವು..ಅಲ್ಲಿಂದ ಸಕಲೇಶಪುರಕ್ಕೆ ಹೋಗುವ ಕೊನೇಯ ಬಸ್ಸು ಹೋಗಿಯಾಗಿತ್ತು...ಮಾರುತಿ ವ್ಯಾನ್ ಒಂದನ್ನು ಬಾಡಿಗೆಗೆ ಪಡೆದು "ಕೂಡುರಸ್ತೆ" ಗೆ ಬಂದೆವು.. ಅಲ್ಲಿಂದ ೧೦ ಕಿ. ಮೀ. ಬಸ್ಸಿನಲ್ಲಿ ಪ್ರಯಾಣಿಸಿ ಯಾವುದೂ ಊರಿಗೆ ಬಂದು ಸೇರಿದೆವು. ಅಲ್ಲಿಂದ ಬಾಡಿಗೆ ರಿಕ್ಷ ಒಂದನ್ನು ಪಡೆದು ಸಕಲೇಶಪುರಕ್ಕೆ ಬಂದಾಗ ೮.೩೦. ಸಕಲೇಶಪುರದಲ್ಲಿ ರೂಮ್ ಮಾಡಿ, ಪರೋಟ ಊಟಮಾಡಿ ಮಲಗಿದಾಗ ೯.೩೦. ಕಾಲುಗಳು ಆಗಲೇ ಡಾನ್ಸ್ ಮಾಡುತ್ತಿದ್ದವು... ಯಾರಿಗೂ ನಿಲ್ಲಲೂ ತ್ರಾಣ ಇರಲಿಲ್ಲ..:-) ಎತ್ತಿ ಬಿಸಾಕಿದರೂ ನಮಗೆ ಎಚ್ಚರ ಆಗುತ್ತಿರಲಿಲ್ಲ..ಅಂತಹ ಘಾಡ ನಿದ್ರೆ...!! ಹುರುಪಿನಿಂದ ಶುರುವಾಗಿ, ಸುಸ್ತು, ಪರದಾಟ ದಲ್ಲಿ ನಮ್ಮ ಚಾರಣ ಮುಗಿದಿತ್ತು...!!
ಕಾಲು ಉಳುಕಿಸಿಕೊಂಡ ಸಂತು...

ಮರುದಿನ ಭಾನುವಾರ, ೨೨ ನೆ ತಾರೀಕು. ಸ್ನಾನ, ತಿಂಡಿ ಮುಗಿಸಿದಾಗ ೯ ಗಂಟೆ. ಅಲ್ಲಿಂದ " ಮೂಕನಮನೆ ಅಬ್ಬಿ ಜಲಪಾತ" ಕ್ಕೆ ಬಾಡಿಗೆ ರಿಕ್ಷ ದಲ್ಲಿ ಹೊರಟೆವು. ಸಕಲೇಶಪುರದಿಂದ ಸುಬ್ರಮಣ್ಯ ರಸ್ತೆಯಲ್ಲಿ ೨೦ ಕಿ.ಮೀ ದೂರ ಸಾಗಿದರೆ "ಹೆತ್ತೂರು" ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ೪ ಕಿ. ಮೀ. ದೂರಕ್ಕೆ ಕೂಡುರಸ್ತೆ ಸಿಗುತ್ತದೆ. ಅಲ್ಲಿಂದ ಬಲಕ್ಕೆ ತಿರುಗಿ "ಬ್ಯಾಡರಹಳ್ಳಿ" ಮುಖಾಂತರ ಹೋದರೆ "ಮೂಕನಮನೆ ಅಬ್ಬಿ ಜಲಪಾತ" ಅಂತ ಬೋರ್ಡ್ ಸಿಗುತ್ತದೆ. ಅಲ್ಲಿಂದ ಬಲಕ್ಕೆ ೧ ಕಿ. ಮೀ ಹೋದರೆ ಒಂದು ಮನೆ ಸಿಗುತ್ತದೆ.. ಆ ಮನೆಯ ಪಕ್ಕದಲ್ಲೇ ಇಳಿಜಾರಿನಲ್ಲಿ ಅಬ್ಬಿ ಜಲಪಾತ ಸಿಗುತ್ತದೆ. ಜಲಪಾತದ ತನಕ ವಾಹನದಲ್ಲಿ ಹೋಗಬಹುದು... !

ಜಲಪಾತ ಮಳೆಗಾಲದಲ್ಲಿ ತುಂಬಿ ಹರಿಯುತ್ತಿರುತ್ತದೆ..ಅಂತರ್ಜಾಲದಲ್ಲಿ ಸಿಕ್ಕಿದ ಅಬ್ಬಿ ಜಲಪಾತದ ಮಳೆಗಾಲದ ವೈಭವದ ಫೋಟೋ. ಬೇಸಿಗೆಯಲ್ಲಿ ನೀರಿನ ಹರಿವು ಕಡಿಮೆ ಇತ್ತಾದರೂ ಮೈ-ಮನ ತಣಿಸುವಷ್ಟಿತ್ತು..! ಸುಮಾರು ೧೫ ಅಡಿ ಎತ್ತರದಿಂದ ನೀರು ಬೀಳುತ್ತದೆ. ನೀರಿನಲ್ಲಿ ಅಪಾಯ ಇಲ್ಲ. ದಟ್ಟ ಕಾಡಿನ ನಡುವೆ ಇರುವ ಜಲಪಾತ ಇನ್ನೂ ಪ್ರಪಂಚಕ್ಕೆ ಹೆಚ್ಚಿನ ಪರಿಚಯ ಆಗಿಲ್ಲ...ಪ್ಲಾಸ್ಟಿಕ್ ಹಾಗೂ ಇತರೆ ಮಧ್ಯದ ಬಾಟಲಿಗಳ ಸುಳಿವಿರಲಿಲ್ಲ...ಸ್ವಚ್ಛ ಪರಿಸರದ ಸುಂದರ ಜಲಪಾತ...!!

ನಮಗೆ ಇಲ್ಲೂ ಸಹ ಪರದಾಟ ತಪ್ಪಲಿಲ್ಲ...ದಾರಿಯಲ್ಲಿ ಸಿಕ್ಕವರನ್ನು ಕೇಳುತ್ತಾ, ಜಲಪಾತದ ದಾರಿಯ ಬೋರ್ಡ್ ಏನೂ ಸಿಕ್ಕಿತ್ತು...ಅಲ್ಲಿಂದ ಮುಂದೆ ಮಣ್ಣು ರಸ್ತೆಯಲ್ಲಿ ಸಾಗಿದಾಗ ದಾರಿ ಇದ್ದಕ್ಕಿದ್ದ ಹಾಗೆ ಕೊನೆಗೊಳ್ಳುತ್ತೆ...ಅಲ್ಲಿಯೇ ಹೊಳೆ ಇರುವುದು... ಆದರೆ ನಮಗೆ ಜಲಪಾತ ಸಿಗಲಿಲ್ಲ...ಸುಮಾರು ಹೊತ್ತು ಎಲ್ಲ ಕಡೆ ಹುಡುಕಿದರೂ ಜಲಪಾತದ ಶಬ್ದ ಕೂಡ ಕೇಳಿಸಲಿಲ್ಲ..ಅಲ್ಲಿನ ಮನೆಯಲ್ಲೂ ಯಾರೂ ಇರಲಿಲ್ಲ...ಅಕ್ಕಪಕ್ಕದಲ್ಲಿ ಜನರ ಸುಳಿವೇ ಇಲ್ಲ...!!.ಕೊನೆಗೆ ಅದೇ ನೀರಲ್ಲಿ ಆಟ ಆಡಿ ವಾಪಾಸ್ ಹೋಗುವ ನಿರ್ಧಾರಕ್ಕೆ ಬಂದಿದ್ದೆವು..ಎಲ್ಲರಲ್ಲೂ ನಿರಾಸೆ...:-( ಕೊನೇಯ ಪ್ರಯತ್ನ ಎಂಬಂತೆ ಅರವಿಂದ ಮತ್ತೆ ದೂದ್ ನೀರಿನ ಹರಿವು ಕಡೆ ಸಾಗಿದರು... ಅಲ್ಲಿ ಸಿಕ್ಕಿತ್ತು ಜಲಪಾತ...!! ಜಲಪಾತ ನೋಡಿದ ನಮಗೆ ನಿರಾಸೆ ಆಗಲಿಲ್ಲ. ಸಾಕಷ್ಟು ನೀರು ಇತ್ತು...ಅಚ್ಚ ಬಿಳುಪಿನ ಜಲಧಾರೆ..!




ನೀರಿನ ರಭಸಕ್ಕೆ ಮೈ-ಒಡ್ಡಿ ನಿಂತು ಪುಕ್ಸಟ್ಟೆ ಮಸಾಜ್ ಮಾಡಿಕೊಂಡ್ವಿ...ಹಿಂದಿನ ದಿನದ ನೋವೆಲ್ಲ ಮಾಯವಾಗಿತ್ತು...!! ಸುಮಾರು ೨ ತಾಸು ಅಲ್ಲಿನ ಶಾಂತ ಪರಿಸರದಲ್ಲಿದ್ದು ಅಲ್ಲಿಂದ ಹೊರಟು ಸಕಲೇಶಪುರಕ್ಕೆ ಬಂದು ರಿಕ್ಷ ಡ್ರೈವರ್ ಕೃಪೆ ಇಂದ ಅಪರೂಪದ "ಹಲಸಿನ ಕಾಯಿ ಹುಳಿ" ಊಟ ಮಾಡಿ ಬೆಂಗಳೂರು ಬಸ್ಸನ್ನು ಹಿಡಿದೆವು.
ನಮ್ಮ ಟೀಮ್ ನ ಫೋಟೋ....ನಾನು, ಸಂತು, ಅರವಿಂದ, ಕಿರಣ್ ಮತ್ತು ಸುಹಾಸ್.

9 comments:

shivu.k said...

ಪ್ರಶಾಂತ್,

ನಿಮ್ಮ ಚಾರಣದ ಎರಡನೇ ಭಾಗ ಕಾಯುತ್ತಿದ್ದೆ....ಓದಿ ಫೋಟೊ ನೋಡಿದ ಮೇಲೆ ನನಗನ್ನಿಸಿದ್ದು....ನಾವು ಏನಾದರೂ ಇದೇ ಜಾಗಕ್ಕೆ ಚಾರಣ ಹೊರಟರೆ...ನಿಮ್ಮ ಬ್ಲಾಗಿನ ಚಿತ್ರ-ಲೇಖನವೇ ಸಾಕು ನಮಗೆ ದಾರಿ ತೋರಲು ಆಷ್ಟು ಚೆನ್ನಾಗಿ ಇಂಚಿಂಚು ಬಿಡದೆ ವಿವರಿಸಿದ್ದೀರಿ....ನಿಮ್ಮೆಲ್ಲ ಗೆಳೆಯರಿಗೂ ನನ್ನ ಅಭಿನಂದನೆಗಳನ್ನು ತಿಳಿಸಿ...ಥ್ಯಾಂಕ್ಸ್....

ಫೋಟೊಗಳು ತುಂಬಾ ಚೆನ್ನಾಗಿವೆ...

ಪಾಚು-ಪ್ರಪಂಚ said...

ಹಾಯ್ ಶಿವು ಅವರೇ,

ನಿಮ್ಮ ಪ್ರತಿಕ್ರಿಯೆಗೆ ತುಂಬಾ ಥ್ಯಾಂಕ್ಸ್.
ನನ್ನ ಗೆಳೆಯರಿಗೆಲ್ಲ ನಿಮ್ಮ ಅಭಿನಂದನೆಗಳನ್ನು ತಿಳಿಸುವೆ.

-ಪ್ರಶಾಂತ್ ಭಟ್

ಮಲ್ಲಿಕಾರ್ಜುನ.ಡಿ.ಜಿ. said...

ಸಕತ್ತಾಗಿದೆ ಚಾರಣ. ನಮಗೂ ಆಸೆಯಾಗುತ್ತಿದೆ. ಮಾಹಿತಿ ತುಂಬ ಚೆನ್ನಾಗಿ ಕೊಟ್ಟಿದ್ದೀರ. ಅದಕ್ಕೆ ಧನ್ಯವಾದಗಳು.

ಪಾಚು-ಪ್ರಪಂಚ said...

ಮಲ್ಲಿಕಾರ್ಜುನ್ ಅವರೇ,

ಚಾರಣದ ಅನುಭವ ನಿಮಗೆ ಇಷ್ಟ ಆಗಿದ್ದಕ್ಕೆ ಥ್ಯಾಂಕ್ಸ್.

Ittigecement said...

ಪ್ರಶಾಂತ್...
ನಾನು ನಿಮ್ಮ ಬ್ಲಾಗ್ ಫಾಲೊ ಮಾಡುತ್ತಿದ್ದರೂ..
ನಿಮ್ಮ ಹೊಸ ಪೋಸ್ಟ್ ನನಗೇಕೆ ಗೊತ್ತಾಗಲಿಲ್ಲ..?

ಫೋಟೊಗಳಂತೂ ಸೂಪರ್..!

ಸಣ್ಣ ತೊರೆಯ ಜಲಪಾತದ ಫೋಟೊಗಳು ಮನಸೂರೆಗೊಂಡವು..

ನಾವೆ ನೀರಲ್ಲಿ ಒದ್ದೆಯಾದ ಹಾಗಿತ್ತು..

ಲೇಖನ ಕೂಡ.. ಸುಂದರ..

ಸುಂದರವಾದ ಫೋಟೊಗಳು..
ಲೇಖನಕ್ಕೆ..
ಅಭಿನಂದನೆಗಳು...

ಪಾಚು-ಪ್ರಪಂಚ said...

ಪ್ರಕಾಶಣ್ಣ,

ಬಹುಶ: ನನ್ನ ಬ್ಲಾಗ್ ನಲ್ಲಿ ಸೆಟ್ಟಿಂಗ್ಸ್ change ಮಾಡಕು ಅನ್ನಿಸ್ತು. ನಾನು check ಮಾಡ್ತಿ.

ಬರಹ ಮತ್ತೆ ಫೋಟೋ ಮೆಚ್ಚಿದ್ದಕ್ಕೆ ತುಂಬಾ ಖುಷಿ ಆತು.

ಥ್ಯಾಂಕ್ಸ್.

Shweta said...

Prashant,
Waiting for the next part of the Chaarana experiences!!!
cheers!!

ಪ್ರಮೋದ ನಾಯಕ said...

ನಿಮ್ಮ ಅನುಭವಗಳನ್ನು ಓದುತ್ತಿದ್ದರೆ ನಾನು ಒಮ್ಮೆ ಈ ಸ್ಥಳಗಳಿಗೆ ಹೋಗಬೇಕೆನಿಸುತ್ತಿದೆ. ಒಳ್ಳೆಯ ಮಾಹಿತಿಯುಳ್ಳ ಸಚಿತ್ರ ಲೇಖನ.

Mohan B.S said...

ವಾಹ್! ಹಸಿರು ಹಾದಿ ಚಾರಣದ ಅನುಭವ ತುಂಬಾ ಚೆನ್ನಾಗಿದೆ, ನಾನು ಹೋಗೊದಿಕ್ಕೆ ಪ್ಲಾನ್ ಮಾಡಿದ್ದೇನೆ ಮಾಹಿತಿ ಬೇಕಾದರೆ ನಿಮ್ಮನ್ನು ಸಂಪರ್ಕಿಸುತ್ತೇನೆ.