ಮದುವೆಯ ಗಲಾಟೆ ಮುಗಿದ ಮರುದಿನ ಮುಂಜಾನೆ ಸ್ವಲ್ಪ ಬೇಗನೆ ಎದ್ದು ಗದ್ದೆಯ ಕಡೆ ನವಿಲು ನೋಡಲು ಹೋಗಿದ್ದೆ. ಮುಂಜಾನೆಯ ಇಬ್ಬನಿ ಸುತ್ತಲಿನ ಪರಿಸರವನ್ನು ಮುತ್ತಿಕೊಂಡಿತ್ತು...ಅಲ್ಲಿ ನನಗೆ ಸೆರೆಸಿಕ್ಕ ಕೆಲವು ಛಾಯಾಚಿತ್ರಗಳು...
ಹೊಸ ಬಾಳಿಗೆ ಹೆಜ್ಜೆ ಇಟ್ಟಿರುವ ನವಜೋಡಿಗೆ ಶುಭವಾಗಲಿ.....
ಪ್ರಪಂಚ ಎಂಬ ಸಾಗರದಲ್ಲಿ ನೀನೊಂದು ಪುಟ್ಟ ಜೀವ.... ನಿನ್ನನ್ನೇ ನಂಬಿದ ನನ್ನೀ ಜೀವಕ್ಕೆ ನೀನೇ ಪ್ರಪಂಚ...!!! ವಿಶಾಲ ಪ್ರಪಂಚದಲ್ಲಿ ನನಗೆ ನಾನೇ ಕಾಣೆಯಾದೆ ಅನ್ನಿಸಿದಾಗ,ಯಾಂತ್ರಿಕತೆಯ ಧಾವಂತದಲ್ಲಿ ಮುಳುಗಿದಾಗ,ನೆನಪಿಸಿಕೊಳ್ಳುವದೇ ಈ ಪುಟ್ಟ ಪ್ರಪಂಚ.
ಹೊಸ ಬಾಳಿಗೆ ಹೆಜ್ಜೆ ಇಟ್ಟಿರುವ ನವಜೋಡಿಗೆ ಶುಭವಾಗಲಿ.....
ನನ್ನ ಸೋದರ ಮಾವನ ಮನೆ ಹೊಸನಗರದ ಹತ್ತಿರ "ಬಾಣಿಗಾ." ಎಂಬ ಪುಟ್ಟ ಹಳ್ಳಿಯಲ್ಲಿದೆ. ಬಸ್ಸಿಂದ ಇಳಿದು ೨ ಕಿ.ಮೀ. ಮರಳು ಮಿಶ್ರಿತ ಮಣ್ಣು ದಾರಿಯಲ್ಲಿ ನಡೆದರೆ ಸಿಗುವುದು "ಪತಂಜಲಿ". ಅಂದದೂರಿನ ಮನೆಗೆ ಚಂದದ ಹೆಸರು. ಮುಳುಗಡೆಯ ಪ್ರದೇಶ ಆದ್ದರಿಂದ ಮಳೆಗಾಲದಲ್ಲಿ ಮನೆಯ ಅಂಗಳದವರೆಗೂ ಶರಾವತಿ ನದಿಯ ಹಿನ್ನೀರು ಬರುತ್ತದೆ. ಕಾರ್-ಗದ್ದೆ (ಬೇಸಿಗೆಯಲ್ಲಿ ಹೊಳೆಯ ನೀರನ್ನ ಅವಲಂಬಿಸಿ ಬೆಳೆ ಬೆಳೆಯುವದು) ಅನಿವಾರ್ಯ.
ಇಲ್ಲಿನ ಪರಿಸರ ನನಗೆ ತುಂಬಾ ಇಷ್ಟ. ಹಸಿರು ಗದ್ದೆ, ತೋಟ, ಹೂವಿನ ಗಿಡಗಳು, ಕಲ್ಲಿನ ದೇವಸ್ಥಾನ, ಕಾಡು ತುಂಬಾ ಸುಂದರ. ಚಿಕ್ಕವರಿದ್ದಾಗ ಹುಡುಗರೆಲ್ಲ ಸೇರಿ ಬೇಸಿಗೆ ರಜ ಕಳೆಯಲು ಬರುತ್ತಿದ್ದೆ ಇಲ್ಲಿಗೆ. ವಿಶಾಲವಾದ ಜಾಗ, ದಟ್ಟವಾದ ಕಾಡು, ಗುಡ್ಡ, ನೀರಲ್ಲಿ ಆಟಕ್ಕೆ ಮುಳುಗಡೆಯ ನೀರು, ಕ್ರಿಕೆಟ್ ಆಟಕ್ಕೆ ಗದ್ದೆ ಬಯಲು ನಮ್ಮಂತ ಪುಂಡು ಹುಡುಗರಿಗೆ ಹೇಳಿ ಮಾಡಿಸಿದ ಜಾಗ.
ಮನೆಯ ಫಾರಂ ನಲ್ಲಿ ಮಾವು, ಸಪೋಟ, ಪಪ್ಪಾಳೆ, ಪೇರಳೆ ಹಣ್ಣುಗಳು ಬೇಸಿಗೆಯಲ್ಲಿ ಸಿಗ್ತಾ ಇದ್ವು. ದಣಿವಾದಾಗ ತೋಟದ ಎಳನೀರು. ಇವಲ್ಲದೆ ಬೆಟ್ಟದಲ್ಲಿ ಸಿಗುತಿದ್ದ ನೇರಳೆ, ಹುಳಿಮಾವಿನ ಹಣ್ಣು, ಹಲಸಿನ ಹಣ್ಣು, ಮುಳ್ಳಣ್ಣು, ಗೇರುಹಣ್ಣು ಇನ್ನು ಏನೇನೋ ಹಣ್ಣುಗಳು. ಮನೆಗಿಂತ ಬೆಟ್ಟದಲ್ಲಿ ಇರುತಿದ್ದಿದ್ದೆ ಜಾಸ್ತಿ. ಪ್ರತೀವರ್ಷ ರಜ ಶುರುವಾದ ಕೂಡಲೇ ನಮ್ಮ ಗ್ಯಾಂಗ್ ಇಲ್ಲಿಗೆ ಹಾಜರ್...!! ಹಾಗೆ ಸಣ್ಣ ಪುಟ್ಟ ಕೆಲಸವನ್ನು ನಾವು ಮಾಡ್ತಾ ಇದ್ದೆವು. ಮಾವಿನ ಕಾಯಿ ಕೀಳುವುದು, ಹಲಸಿನ ಹಪ್ಪಳ ಹಚ್ಚುವುದು, ತೋಟಕ್ಕೆ ನೀರು ಹಾಯಿಸುವುದು, ಹೊಳೆಯಲ್ಲಿ ಎಮ್ಮೆ ಮೈ ತೊಳೆಯುವದು....ನಮಗೆಲ್ಲ ಏನೋ ಹುರುಪು...:-)
ಅತ್ತೆ ಮಾವ, ನಾವು ಏನೇ ಕಿತಾಪತಿ ಮಾಡಿದರೂ ಯಾವುದಕ್ಕೂ ಬಯ್ಯುತ್ತಿರಲಿಲ್ಲ..ಅದೇ ನಮಗೆ ಪ್ಲಸ್ ಪಾಯಿಂಟ್....! ನಾವು ಬರದಿದ್ದರೆ ಅವರಿಗೆ ಬೇಜಾರು...ಶ್ರಮಜೀವಿಗಳು, ದೇಶಪ್ರೇಮ, ಮನೆಯಲ್ಲಿ ಸ್ವದೇಶಿ ಉತ್ಪನ್ನಗಳ ಬಳಕೆ ಜಾಸ್ತಿ. ಬೆಂಗಳೂರು ಸೇರಿದಾಗಿಂದ ಮಾವನ ಮನೆಗೆ ಹೋಗುತಿದ್ದಿದ್ದು ಅಪರೂಪ, ಹೋದರೆ ಕೆಲವೇ ತಾಸುಗಳ ಮಟ್ಟಿಗೆ ಅಥವಾ ಒಂದು ದಿನದ ಮಟ್ಟಿಗೆ. ಹುಡುಗರು ಎಲ್ಲ ಸೇರಿಕೊಂಡು ಹೋಗಿ ತುಂಬಾ ವರ್ಷಗಳೇ ಆಗಿದೆ.
ಕಳೆದ ಅಕ್ಟೋಬರ್ ನಲ್ಲಿ ಬಾವನ ಮದ್ವೆ ಇತ್ತು. ಆಗ ನಮ್ಮ ಹಳೆಯ ಗ್ಯಾಂಗ್ ಎಲ್ಲ ಒಂದೆಡೆ ಸೇರಿಕೊಂಡಿದ್ವಿ. ಎಲ್ಲರೂ ಬಾಣಿಗಕ್ಕೆ ಹೋಗಿ, ಮತ್ತೆ ಹಳೆಯ ನೆನಪುಗಳ ಮಧ್ಯೆ, ಚಿಕ್ಕ ಹುಡುಗರಾಗಿ ಸೇರಿ ಆಟ ಆಡಿ, ತಿಂದುಂಡು, ತಿರುಗಿ, ೨ ದಿನಗಳನ್ನು ನಮ್ಮಿಷ್ಟದ ಹಾಗೆ ಕಳೆದ್ವಿ... ನೆನಪುಗಳು ಈಗಲೂ ಅತೀ ಸುಂದರ...!
ಅಲ್ಲಿಗೆ ಹೋದಾಗ ಮೊದಲು ಮಾಡಿದ ಕೆಲಸ ಅಂದ್ರೆ, ಅಟ್ಟಕ್ಕೆ ಹೋಗಿ ಏನೇನು ಹಣ್ಣು ಇದೆ ಅಂಥ ನೋಡಿದ್ದು. ಬಾಳೆಹಣ್ಣು, ಚಿಕ್ಕು ಇತ್ತು. ಹಾಗೆ ಎರಡೆರಡು ಹಣ್ಣನ್ನು ಹೊಟ್ಟೆಗಿಳಿಸಿದ್ವಿ. ಅತ್ತೆ "ಪಪ್ಪಾಳೆ ಹಣ್ಣು ಇದ್ದು ಹುಡುಗ್ರ" ಅಂದ್ರು. ಹುಂ ಸರಿ, ಅದೂ ಸ್ವಾಹ ಆಯಿತು. ತೋಟವನ್ನು ಒಂದು ರೌಂಡು ಹಾಕಿ, ಬೆಟ್ಟದ ಕಡೆ ಹೊರಟೆವು. ಅಲ್ಲಿ ಕೂಗಾಡಿ, ಜಿಗಿದಾಡಿ, ಮರ ಹತ್ತಿ, ನಮ್ಮ ಚಪಲ ತೀರಿಸಿಕೊಂಡೆವು..!ಮನೆಗೆ ಬಂದಾಗ ಅಕ್ಕ ಎಳೆ ಸೌತೆಕಾಯಿ ಉಪ್ಪು, ಸೂಜಿಮೆಣಸು, ವಾಟೆಹುಳಿ, ಕೊಬ್ಬರಿಎಣ್ಣೆ ರೆಡಿ ಮಾಡಿ ಇಟ್ಟಿದ್ದಳು... ೪ ಸೌತೆಕಾಯಿ ಖಾಲಿ ಆಗಿದ್ದೆ ಗೊತ್ತಾಗಲಿಲ್ಲ....!! ಒಳ್ಳೆ ಕಾಂಬಿನೆಷನ್ನು ಅದು..!!